Andolana originals

ಮಾಂದಲ ಪಟ್ಟಿಗೆ ಶೀಘ್ರದಲ್ಲೇ ಅಭಿವೃದ್ಧಿ ಭಾಗ್ಯ..!

ನವೀನ್ ಡಿಸೋಜ

ಒಂದು ಜಿಲ್ಲೆ – ಒಂದು ತಾಣ ಯೋಜನೆಯಡಿ ಕಾಯಕಲ್ಪ ; ಮೂಲ ಸೌಕರ್ಯಗಳ ಅಭಿವೃದ್ಧಿಗೆ ಚಿಂತ

ಮಡಿಕೇರಿ: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲೊಂದಾದ ಮಾಂದಲಪಟ್ಟಿಯಲ್ಲಿ ಪ್ರವಾಸೋದ್ಯಮ ಪೂರಕ ಅಭಿವೃದ್ಧಿಗೆ ಯೋಜನೆ ಸಿದ್ಧವಾಗುತ್ತಿದ್ದು, ಸದ್ಯದಲ್ಲಿಯೇ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

ಕೊಡಗಿನಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ಮಡಿಕೇರಿ ಸಮೀಪದ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಮಾಂದಲಪಟ್ಟಿ ಕೂಡ ಒಂದಾಗಿದೆ. ಚಲನಚಿತ್ರವೊಂದರ ಶೂಟಿಂಗ್ ನಡೆದ ಬಳಿಕ ಮುಗಿಲು ಪೇಟೆ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಮಾಂದಲಪಟ್ಟಿಯು ರಸ್ತೆ ಸಮಸ್ಯೆ, ಬಾಡಿಗೆ ಜೀಪುಗಳ ಕಿರಿಕಿರಿಯಿಂದ ಆಗಿಂದಾಗ್ಗೆ ಸುದ್ದಿಯಲ್ಲಿರುತ್ತದೆ. ಮೂಲ ಸೌಲಭ್ಯವಿಲ್ಲದ ಈ ಸುಂದರ ಪ್ರಾಕೃತಿಕ ತಾಣವನ್ನು ಒಂದು ಜಿಲ್ಲೆ – ಒಂದು ತಾಣ ಯೋಜನೆಯಡಿ ಗುರುತಿಸಲಾಗಿದ್ದು, ಸದ್ಯದಲ್ಲಿಯೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ.

ಮಾಂದಲಪಟ್ಟಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲು ಕ್ರಮ ಕೈಗೊಂಡಿದೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಬೇಕಾಗಿರುವ ಪ್ರವಾಸಿ ಸೌಲಭ್ಯಗಳ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದ್ದಾರೆ.

ಮಾಂದಲಪಟ್ಟಿ ಮಡಿಕೇರಿ ಹೊರವಲಯದ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಇದು ಅರಣ್ಯ ಇಲಾಖೆಗೆ ಒಳಪಡುವ ಸ್ಥಳವಾದ್ದರಿಂದ ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಪಂಚಾಯ್ತಿಗೆ ಸಾಧ್ಯವಿರಲಿಲ್ಲ. ಆದರೆ ಇತ್ತೀಚೆಗೆ ನಡೆಸಿದ ಸರ್ವೆಯಿಂದ ಮಾಂದಲಪಟ್ಟಿ ಟಿಕೆಟ್ ಕೌಂಟರ್ ಜಂಕ್ಷನ್ ಇರುವ ಪ್ರದೇಶ ಅರಣ್ಯ ಇಲಾಖೆಗೆ ಒಳಪಡುವುದಿಲ್ಲ ಎಂದು ತಿಳಿದು ಬಂದಿದ್ದು, ಅಲ್ಲಿ ಈಗ ಪಂಚಾಯಿತಿಯಿಂದ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಇದಕ್ಕಾಗಿ ಕ್ರಿಯಾ ಯೋಜನೆಯೂ ಸಿದ್ಧವಾಗಿದೆ. ಪಂಚಾಯಿತಿಯಿಂದ ೧.೩ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆ ಶಿಫಾರಸು ಮಾಡಿದೆ.

ಮಾಂದಲಪಟ್ಟಿ ತಾಣ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಅಲ್ಲಿ ರಸ್ತೆ, ವ್ಯೂವ್ ಪಾಂಯಿಂಟ್, ಶೌಚಾಲಯ ಮುಂತಾದ ಯಾವುದೇ ಸೌಲಭ್ಯವನ್ನು ಕಲ್ಪಿಸಬೇಕಾದರೆ ಅದು ಅರಣ್ಯ ಇಲಾಖೆಯಿಂದಲೇ ಆಗಬೇಕಿದೆ. ಹೀಗಾಗಿ ಅರಣ್ಯ ಇಲಾಖೆ ಜತೆ ಶಾಸಕರು ಚರ್ಚೆ ನಡೆಸಿದ್ದು, ಅಂದಾಜು ೩ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

” ಮಾಂದಲಪಟ್ಟಿಗೆ ಪ್ರತಿ ವರ್ಷ ೩೦ ರಿಂದ ೪೦ ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ತಾಣಕ್ಕೆಸಂಪರ್ಕ ಕಲ್ಪಿಸುವ ಮತ್ತು ಒಳಭಾಗದ ರಸ್ತೆಗಳೇ ಸರಿಯಿಲ್ಲದ ಕಾರಣ, ಇಲ್ಲಿ ಪ್ರವಾಸಿಗರು ಜೀಪ್ಸಫಾರಿಯನ್ನೇ ಅವಲಂಬಿಸಬೇಕಿದೆ. ಇಂತಹ ಸಂದರ್ಭಗಳಲ್ಲಿ ಕೆಲವು ಜೀಪ್ ಚಾಲಕರು ಮತ್ತು ಪ್ರವಾಸಿಗರ ನಡುವೆ ವಾಗ್ವಾದ, ಘರ್ಷಣೆಗಳು ನಡೆದಿವೆ. ಇಂತಹ ಘಟನೆಗಳು ಕೊಡಗು ಪ್ರವಾಸೋದ್ಯಮದ ಮೇಲೆ ನೇರ ಪರಿಣಾಮ ಬೀರುತ್ತವೆ. ಇದಲ್ಲದೆ ಅಲ್ಲಿ ಮೂಲ ಸೌಲಭ್ಯಗಳ ಕೊರತೆಯೂ ಇದೆ, ಹೀಗಾಗಿ ಮಾಂದಲಪಟ್ಟಿ ಅಭಿವೃದ್ಧಿ ಕೊಡಗು ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ.”

” ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ಈತಾಣವನ್ನು ಒಂದು ಜಿಲ್ಲೆ ಒಂದುತಾಣ ಯೋಜನೆಯಡಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯಿಂದಲೂ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿದ್ದು, ಒಳಭಾಗದ ರಸ್ತೆ,ಮೂಲ ಸೌಕರ್ಯ ಅಭಿವೃದ್ಧಿಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ.”

ಅನಿತಾ ಭಾಸ್ಕರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ.

ಆಂದೋಲನ ಡೆಸ್ಕ್

Recent Posts

ಕೆಸರುಗದ್ದೆ ಕ್ರೀಡಾಕೂಟಕೂಟ: ಕಾಡುತ್ತಿರುವ ಮಳೆ ಕೊರತೆ!

ನವೀನ್ ಡಿಸೋಜ ಮುಂಗಾರು ಆರಂಭದಲ್ಲಿ ವಾಡಿಕೆ ಮಳೆಯಾಗದೆ ಆಯೋಜನೆಗೆ ಹಿಂದೇಟು; ಹಲವೆಡೆ ಕ್ರೀಡಾಕೂಟ ಮುಂದೂಡಿಕೆ ಮಡಿಕೇರಿ: ಪ್ರತಿವರ್ಷ ಮಳೆಗಾಲದಲ್ಲಿ ಕೊಡಗು…

4 mins ago

ಟಿಎಪಿಸಿಎಂಎಸ್ ಅಧಿಕಾರ ಹಿಡಿಯಲು ತಂತ್ರ-ಪ್ರತಿತಂತ್ರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಗುರುವಾರ (ಆ.೨೦) ನಡೆಯಲಿದ್ದು, ಅಧಿಕಾರ…

8 mins ago

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

14 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

14 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

15 hours ago