Andolana originals

ಸ್ವದೇಶಿ ಉತ್ಪನ್ನಗಳ ರಫ್ತಿಗೆ ಮೇಕ್ ಇನ್ ಇಂಡಿಯಾ ಒತ್ತು

ಕೋಚನಹಳ್ಳಿ ಕೈಗಾರಿಕಾ ಪ್ರದೇಶ: ಸೈಲೆಕ್ಟ್ರಿಕ್ ಸೆಮಿ ಕಂಡಕ್ಟರ್ ಘಟಕ

ರಾಜ್ಯ ಸರ್ಕಾರದಿಂದ ಕೈಗಾರಿಕಾ ನೀತಿ- ೨೦೨೫-೩೦ ಜಾರಿ

ಮೈಸೂರಿನಲ್ಲಿ ಬಂಡವಾಳ ಹೂಡಲು ಅನೇಕ ವಿದೇಶಿ ಕಂಪೆನಿಗಳ ಉತ್ಸಾಹ

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ೧ ಸಾವಿರ ಎಕರೆ ಪ್ರದೇಶ ಗುರುತು

ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶಿ ಕಂಪೆನಿಗಳಿಗೆ ಆಹ್ವಾನ

ಕಳೆದ ವರ್ಷ ೩೯ ಯೋಜನೆಗಳಿಗೆ ಒಪ್ಪಂದ 

ಮೈಸೂರು: ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ಬೇಡಿಕೆ ಹೆಚ್ಚಿಸುವುದಲ್ಲದೆ ವಿದೇಶಗಳಿಂದ ಆಮದು ಕಡಿಮೆ ಮಾಡಿ ಸ್ವದೇಶಿ ಉತ್ಪನ್ನಗಳನ್ನು ರಫ್ತು ಮಾಡಲು ಜಾರಿ ಮಾಡಿರುವ ಮೇಕ್ ಇನ್ ಇಂಡಿಯಾ ಯೋಜನೆಯಡಿ ಅನೇಕ ಉದ್ಯಮಿಗಳು ಹೊಸ ಉತ್ಪಾದನಾ ಘಟಕಗಳನ್ನು ತೆರೆಯಲು ಮುಂದಾಗುತ್ತಿದ್ದಾರೆ.

೨೦೧೪ರಲ್ಲಿ ಮೇಕ್ ಇನ್ ಇಂಡಿಯಾ ಘೋಷಣೆಯಾದ ನಂತರ ಸ್ವದೇಶಿ ಉತ್ಪನ್ನಗಳ ತಯಾರಿಕೆ ಹೆಚ್ಚಾಗುವ ಜತೆಗೆ ವಿದೇಶ ಗಳಿಗೆ ರಫ್ತು ಮಾಡುವ ಪ್ರಮಾಣದಲ್ಲೂ ಏರಿಕೆಯಾಗಿದೆ. ಇದರಿಂದಾಗಿ ಉದ್ಯಮಿಗಳು ಹೆಚ್ಚಾಗುವ ಜತೆಗೆ ಕಾರ್ಮಿಕರ ಸಂಖ್ಯೆಯಲ್ಲೂ ತುಸು ಏರಿಕೆಯಾಗಿದೆ.

ರಾಜ್ಯ ಸರ್ಕಾರವು ಕೈಗಾರಿಕಾ ನೀತಿ ೨೦೨೫-೩೦ ಅನ್ನು ಜಾರಿಗೊಳಿಸಿ ಕರ್ನಾಟಕದಲ್ಲಿ ಬಂಡವಾಳ ಹೂಡಲು ವಿದೇಶಿ ಕಂಪೆನಿಗಳಿಗೆ, ಉದ್ಯಮಿಗಳಿಗೆ ಮುಕ್ತ ಸ್ವಾಗತ ನೀಡುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲದಂತೆ ಉದ್ಯಮ ಸ್ಥಾಪನೆ ಏಕಗವಾಕ್ಷಿ ವ್ಯವಸ್ಥೆಯನ್ನು ತರುವ ಜತೆಗೆ, ಅಗತ್ಯವಿರುವಷ್ಟು ಭೂಮಿಯನ್ನು ಒದಗಿಸುವಲ್ಲಿ ಯಶಸ್ವಿಯಾಗುತ್ತಿದೆ.

ಕಳೆದ ವರ್ಷ ನಡೆದ ಶೃಂಗಸಭೆಯ ಬಳಿಕ ಬೆಂಗಳೂರು ನಂತರ ಎರಡನೇ ನಗರವಾಗಿ ಮೈಸೂರಿನಲ್ಲೂ ಬಂಡವಾಳ ತೊಡಗಿಸಲು ಅನೇಕ ವಿದೇಶಿ ಕಂಪೆನಿಗಳು ಉತ್ಸಾಹ ತೋರಿರುವುದು ಗಮನಾರ್ಹವಾಗಿದೆ. ನಗರದ ಹೆಬ್ಬಾಳು ಹಾಗೂ ತಾಂಡ್ಯ ಹೂಡಿಕೆ ವಲಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ೨೦೨೪-೨೫ನೇ ಸಾಲಿನಲ್ಲಿ ಸುಮಾರು ೩೯ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಎಲ್ಲಾ ಯೋಜನೆಗಳು ಕೂರ್ಗಳ್ಳಿ, ಹೂಟಗಳ್ಳಿ, ತಾಂಡ್ಯ ಹಾಗೂ ಕೋಚನಹಳ್ಳಿ ಪ್ರದೇಶದಲ್ಲಿ ಸ್ಥಾಪನೆಯಾಗಲಿದ್ದು, ಕಂಪೆನಿಗಳು ಒಟ್ಟಾರೆ ೧,೪೪೦ ಕೋಟಿ ರೂ. ಬಂಡವಾಳ ಹೂಡಲು ಸರ್ಕಾರ ದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆ ಗಳು ಕಾರ್ಯಗತವಾದರೆ ಅಂದಾಜು ೩,೨೦೦ ಮಂದಿಗೆ ಉದ್ಯೋಗ ಸಿಗಬಹುದೆಂದು ಅಂದಾಜಿಸಲಾಗಿದೆ.

ಮೇಕ್ ಇನ್ ಇಂಡಿಯಾ ಘೋಷಣೆಯ ಬಳಿಕ ಸ್ಥಳೀಯ ಉತ್ಪಾದನಾ ವಸ್ತುಗಳಿಗೆ ಬೇಡಿಕೆ ಉಂಟಾ ಗುವ ಜತೆಗೆ, ೬,೪೦೦ ಕೋಟಿ ರೂ. ವಸ್ತುಗಳನ್ನು ವಿದೇಶಗಳಿಗೂ ರಫ್ತು ಮಾಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಫ್ತಾಗಲು ಮೇಕ್ ಇನ್ ಇಂಡಿಯಾ ಬಹಳ ಸಹಕಾರಿಯಾಗಿದೆ ಎಂಬುದು ಉದ್ಯಮಿಗಳ ಭಾವನೆ.

ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ ಘಟಕ: ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಘಟಕವನ್ನು ತೆರೆಯಲು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದು ೪೬೦ ಕೋಟಿ ರೂ. ವೆಚ್ಚದ ಯೋಜನೆ ಯಾ ಗಿದೆ. ಅಂದಾಜು ೩,೪೫೦ ಮಂದಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.

ಕಳೆದ ವರ್ಷ ಒಪ್ಪಂದವಾಗಿರುವ ೩೯ ಯೋಜನೆಗಳಿಗೂ ಸರ್ಕಾರ ಭೂಮಿ ಸೇರಿದಂತೆ ಮೂಲ ಸೌಕರ್ಯವನ್ನು ಒದಗಿಸಲು ಸಹಿ ಮಾಡಿದ್ದು, ಪ್ರಕ್ರಿಯೆಗಳು ನಡೆಯುತ್ತಿವೆ. ಈಗಾಗಲೇ ಈ ಯೋಜನೆಗಳಿಗೆ ಬೇಕಾದ ಭೂಮಿಗೆ ಸರ್ಕಾರದ ಹಂತದಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿವೆ.

ಐಟಿ-ಬಿಟಿ ಉದ್ಯಮಗಳನ್ನು ಸ್ಥಾಪಿಸುವವರು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ ನೇರ ವ್ಯವಹಾರ ಮಾಡುತ್ತಾರೆ. ಇದುವರೆಗೂ ೩೯ ಯೋಜನೆಗಳಲ್ಲಿ ಯಾರೊಬ್ಬರೂ ಹಿಂದೆ ಸರಿದಿಲ್ಲ ಆರಂಭದಲ್ಲಿ ಭೂಮಿಗೆ ಬಂಡವಾಳ ಹೂಡಿದವರು ಅರ್ಧಕ್ಕೆ ಬಿಟ್ಟು ಹೋಗುವುದಿಲ್ಲ. ಹೀಗಾಗಿಯೇ, ಎಲ್ಲಾ ಯೋಜನೆಗಳು ಮುಂದಿನ ವರ್ಷದಿಂದ ಕಾರ್ಯಗತವಾಗುವ ಸಾಧ್ಯತೆ ಇದೆ. ಒಂದು ಸಾವಿರ ಎಕರೆ ಭೂಮಿ ಗುರುತಿಸುವ ಕಾರ್ಯ: ಪ್ರತಿಷ್ಠಿತ ಇನೋಸಿಸ್, ವಿಪ್ರೊ, ಎಲ್ ಅಂಡ್ ಟಿ ಸೇರಿದಂತೆ ಪ್ರತಿಷ್ಠಿತ ಐಟಿ-ಬಿಟಿ ಸಂಸ್ಥೆಗಳನ್ನು ಹೊಂದಿರುವ ಹೆಬ್ಬಾಳು ಹೂಡಿಕೆ ವಲಯದಲ್ಲಿ ೩,೮೦೦ ಎಕರೆ ಹಾಗೂ ತಾಂಡ್ಯ ಹೂಡಿಕೆ ವಲಯದಲ್ಲಿ ೩,೨೦೦ ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಈಗ ಹೊಸದಾಗಿ ಕೆಲವು ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾಗಿದ್ದು, ಒಂದು ಸಾವಿರ ಎಕರೆ ಭೂಮಿಯನ್ನು ಗುರುತಿಸುವ ಕಾರ್ಯ ನಡೆದಿದೆ.

ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರೈತರ ಭೂಮಿಯನ್ನು ಗುರುತಿಸಿ, ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ವರ್ಷದ ಹೊತ್ತಿಗೆ ಮತ್ತೊಂದು ಕೈಗಾರಿಕಾ ಪ್ರದೇಶ ನಿರ್ಮಾಣವಾಗುವ ನಿರೀಕ್ಷೆ ಇದೆ.

” ಕಳೆದ ವರ್ಷ ರಾಜ್ಯ ಸರ್ಕಾರದೊಂದಿಗೆ ಒಪ್ಪಂದವಾಗಿರುವ ಯೋಜನೆಗಳಿಗೆಅನುಮೋದನೆ ನೀಡಲಾಗಿದೆ. ಅಗತ್ಯವಿರುವಷ್ಟು ಭೂಮಿಯನ್ನು ಕೆಐಎಡಿಬಿ ಸ್ವಾಧಿನಪಡಿಸಿಕೊಳ್ಳಲಿದೆ. ಅತಿ ಸೂಕ್ಷ್ಮ ಘಟಕ ತೆರೆಯುವವರಿಗೆ ಶೇ.೨೫, ಸಣ್ಣ ಘಟಕಗಳಿಗೆ ಶೇ.೨೦, ಮಧ್ಯಮ ಘಟಕಗಳಿಗೆ ಶೇ.೩೫ರಷ್ಟು ಪ್ರೋತ್ಸಾಹಧನ ನೀಡಲಾಗುತ್ತದೆ.”

ದಿನೇಶ್, ಜಂಟಿ ನಿರ್ದೇಶಕ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

” ಕೆಐಎಡಿಬಿ ವತಿಯಿಂದ ಅಭಿವೃದ್ಧಿಪಡಿಸಿರುವ ಕೂರ್ಗಳ್ಳಿ, ಅಡಕನಹಳ್ಳಿ, ತಾಂಡ್ಯ ೨ನೇ ಹಂತ, ಹೆಬ್ಬಾಳು ೨ನೇ ಹಂತದ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ ಹಂಚಿಕೆ ಪಡೆದ ಉದ್ಯಮಿಗಳಿಗೆ ಭೂಮಿ ಸ್ವಾಧಿನ ಕೊಡಬೇಕು. ಸೂಕ್ಷ್ಮ,ಅತಿ ಸೂಕ್ಷ್ಮ ಕೈಗಾರಿಕೆಗಳಿಗೆ ಪ್ರತಿ ಕೈಗಾರಿಕಾ ಪ್ರದೇಶದಲ್ಲಿ ೫೦ರಿಂದ ೧೦೦ ಎಕರೆ ಭೂಮಿಯನ್ನು ಮೀಸಲಿರಿಸಿ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಬೇಕು.”

ಆರ್.ಮಂಜುನಾಥ್, ಅಧ್ಯಕ್ಷ, ಮೈಸೂರು ಜಿಲ್ಲಾ ಎಸ್‌ಸಿ ಮತ್ತು ಎಸ್‌ಟಿ ಉದ್ದಿಮೆದಾರರ ಸಂಘ

” ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಮೇಲೆ ವಿಳಂಬಕ್ಕೆ ಅವಕಾಶ ಇಲ್ಲದಂತೆ ಬೇಕಾದ ಭೂಮಿ, ವಿದ್ಯುತ್, ನೀರಿನ ವ್ಯವಸ್ಥೆ ಮಾಡಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಉದ್ಯಮಿ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಕೈಗಾರಿಕಾ ನೀತಿಯಲ್ಲಿ ಬದಲಾವಣೆಗಳನ್ನು ತರಬೇಕು.”

ಕೆ.ರವೀಂದ್ರ ಪ್ರಭು, ಉಪಾಧ್ಯಕ್ಷರು, ಕೆಐಎಎಂಎ

ಪರಿಸರ ಸ್ನೇಹಿ ಉದ್ದಿಮೆಗೆ ಒತ್ತು: 

ಕಬಿನಿ ಜಲಾಶಯ ಹಾಗೂ ಅರಣ್ಯ ಪ್ರದೇಶ ಹೊಂದಿರುವ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾದ ಜಾಗವನ್ನು ಶೋಧಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದು ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಪರಿಸರ ಹಾಗೂ ಅರಣ್ಯಕ್ಕೆ ಸಮಸ್ಯೆಯಾಗದಂತೆ ಐಟಿ ಕಂಪೆನಿಗಳನ್ನು ಸ್ಥಾಪಿಸುವ ಉದ್ಯಮಿಗಳಿಗೆ ಹಂಚುವುದಕ್ಕೆ ಈಗಿನಿಂದಲೇ ತಯಾರಿ ನಡೆದಿದೆ ಎಂದು ತಿಳಿದು ಬಂದಿದೆ.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

7 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

13 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

16 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

16 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

16 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

20 hours ago