Andolana originals

ಬರಕ್ಕೆ ತತ್ತರಿಸುತ್ತಿರುವ ಕೃಷ್ಣ ಗೊಲ್ಲರು

ಡಾ.ರಘುಪತಿ

ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಹನೂರು ದಾಟಿದರೆ ನಿಮಗೆ ದೊಡ್ಡಿ ಹೆಸರಿನ ಹಲವು ಹಳ್ಳಿಗಳು ಸಿಗುತ್ತವೆ. ಹಾಗೆಯೇ ನೂರಾರು ದನಗಳೂ,ಅದೂ ನಾಟಿ ದನಗಳೂ, ಮೂಗುದಾರವೂ ಇಲ್ಲದ ಅಪ್ಪಟ ದೇಸಿದನಗಳೂ ತಂಡೋಪತಂಡವಾಗಿ ಕಾಡಿಗೆ ಹೋಗುತ್ತಿರುವ ದೃಶ್ಯವನ್ನು ನೀವು ನೋಡಬಹುದು.

ಕೆಂಚಯ್ಯನ ದೊಡ್ಡಿ,ತಿಮ್ಮನಾಯಕನ ದೊಡ್ಡಿ,ಹೊಸದೊಡ್ಡಿ, ಮಲ್ಲಯ್ಯನಪುರ, ಪುದೂರು, ಎಲೆಮಾಳ,ಬಾಳಗುಣಿಸೆ, ಗುಂಜಪುರ – ಹೀಗೆ ಹಲವು ದೊಡ್ಡಿಗಳಲ್ಲಿ ವಾಸಿಸುವ ಪಶುಪಾಲಕರು ಈಗಲೂ ಕನಿಷ್ಠ ಅಂದರೆ ೫೦ ರಿಂದ ನೂರು ದನಕರುಗಳನ್ನು ಪಾಲನೆ ಮಾಡುತ್ತಿದ್ದಾರೆ. ದನಗಳನ್ನು ಇವರು ಕಾಲ್ನಡೆ ಎನ್ನುತ್ತಾರೆ.ಅದೂ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಕಾಡುಗಳಲ್ಲಿ ಸಾಕುತ್ತಿದ್ದಾರೆ.ಇವರೇ ಕೃಷ್ಣ ಗೊಲ್ಲರು !!

ಈ ಸಮುದಾಯ ಕರ್ನಾಟಕದ ಅಲೆಮಾರಿ ಪಶುಪಾಲಕ ಸಮುದಾಯಗಳಲ್ಲಿ ಒಂದು. ಸರಿಸುಮಾರು ೫,೦೦೦ ಕ್ಕೂ ಹೆಚ್ಚು ನಾಟಿದನಗಳೂ,ನಾಲ್ಕಾರು ಸಾವಿರ ಆಡುಕುರಿಗಳೂ ಇವರ ಕಾಲ್ನಡೆಗಳಾಗಿವೆ.

ಪ್ರಕೃತಿಯ ಮಡಿಲಲ್ಲಿ ಸಮೃದ್ಧವಾಗಿದ್ದ ಕೃಷ್ಣಗೊಲ್ಲ ಪಶುಪಾಲಕ ಸಮುದಾಯ ಈಗ ಈ ಬಾರಿಯ ಬರಕ್ಕೆ ತತ್ತರಿಸಿ ಹೋಗುತ್ತಿದೆ. ಈ ಸಾರಿ ಸರ್ಕಾರ ನಮ್ಮ ನೆರವಿಗೆ ಬರದಿದ್ದರೆ ನಮ್ಮ ಕಾಲ್ನಡೆಗಳು ಉಳಿಯಲ್ಲ ಎಂದು ಮಲ್ಲಯ್ಯನಪುರ ಕನಕರಾಜು ಮಮ್ಮಲ ಮರುಗಿ ನೊಂದುಕೊಳ್ಳುತ್ತಾರೆ. ಆಗಿರುವುದಾದರೂ ಏನು ? ಇದ್ದಕ್ಕಿದ್ದಂತೆ ಈ ಸ್ಥಿತಿ ಬಂತಾ ? ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇವರಿಗೆ ‘ ಪರ್ಮೆಂಟ’ ಕೊಟ್ಟಿದ್ದರು.ಇವರು ಸಾವಿರಾರು ದನಗಳನ್ನು ಕಾವೇರಿ ಹೊಳೆ ಪಕ್ಕದ ದಟ್ಟ ಕಾಡಿನಲ್ಲಿನ ‘ ನತ್ತ’ ಗಳಲ್ಲಿ ಬೀಡು ಬಿಟ್ಟು ಅಲ್ಲಿಯೇ ಬೇಸಿಗೆಯ ನಾಲ್ಕೈದು ತಿಂಗಳು ಮೇಯಿಸುತ್ತಾ ಬೇಸಿಗೆಯನ್ನು ಕಳೆಯುತ್ತಿದ್ದರು.ದೊಡ್ಡಸ್ವಾನೆ ನತ್ತ,ಜುಂಜಗೋಳ ನತ್ತ – ಇವುಗಳು ಈ ನತ್ತಗಳಲ್ಲಿ ಮುಖ್ಯವಾದವು. ಮಳೆಗಾಲದಲ್ಲಿ ತಮ್ಮ ಊರಿನ ದೊಡ್ಡಿಗಳಿಗೆ ಹಿಂತಿರುಗುತ್ತಿದ್ದರು ಕೃಷ್ಣ ಗೊಲ್ಲರು.

ಆದರೆ ಈಗ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಹುಲಿ ಅಭಯಾರಣ್ಯ ಘೋಷಣೆ ಆದ ಮೇಲೆ ಕಾಡಿಗೆ ಕಾಲ್ನಡೆಗಳನ್ನು ನಡೆಸುವುದೇ ದುಸ್ಸಾಹಸವಾಗಿದೆ. ಆ ಊರುಗಳಿಂದ ಸರಿಸುಮಾರು ಹತ್ತು ಕಿಲೋಮೀಟರ್ ದೂರವಿರುವ ಕಾಡಿನಲ್ಲಿನ ಕಾವೇರಿ ಹೊಳೆ ಈಗ ಇವರಿಗೆ ದೂರವೇ ಆಗಿ ಉಳಿದಿದೆ. ಈಗ ಪ್ರತಿನಿತ್ಯ ದೊಡ್ಡಿಯಿಂದ ಐದಾರು ಮೈಲಿ ಹೋಗಿ ವಾಪಸ್ಸು ಬರುತ್ತಾರೆ. ಹೀಗೆ ಕಷ್ಟಸಾಧ್ಯವಾದ ಪಶುಪಾಲನೆಯಿಂದ ಇವರ ಕಾಲ್ನಡೆಗಳ ಸಂಖೈ ದಿನೇದಿನೇ ಕುಗ್ಗಿ ಈಗ ಕನಿಷ್ಠ ಸಂಖ್ಯೆಗೆ ಇಳಿದಿದೆ.

ಇತ್ತೀಚಿನ ಕ್ಷಾಮದಲ್ಲಿ ಅಂದರೆ ೨೦೧೬ ರಲ್ಲಿ ರಾಮಚಂದ್ರಾಪುರ ಮಠ ಇವರ ಕಷ್ಟವನ್ನು ಆತುಗೊಂಡಿತ್ತು .ಆಗ ಪ್ರತಿ ನಾಲ್ಕೈದು ದೊಡ್ಡಿಗಳಿಗೆ ಒಂದರಂತೆ ಗೋಶಾಲೆ ತೆರೆದಿದ್ದರು.ಸುಮಾರು ಹದಿನೈದು ಗೋಶಾಲೆಗಳನ್ನು ಮಾಡಿ ಹಸಿದಂಟು,ನೀರು ಎಲ್ಲ ಪೂರೈಸಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಇವರು.  ಇಡೀ ಕರ್ನಾಟಕದಲ್ಲಿ ದನಗಳ ಸಂಖ್ಯೆ ಒಂದು ಕೋಟಿಗಿಂತಲೂ ಕಡಿಮೆ ಆಗುತ್ತಿದೆ. ಅದರಲ್ಲೂ ಹಾಲು ಕೊಡುವ ಮಿಶ್ರತಳಿ ಜರ್ಸಿ, ಹೆಚ್‌ಎಫ್ ಹಸುಗಳದೇ ಸಿಂಹಪಾಲು. ಇನ್ನು ನಾಟಿ ತಳಿಗಳ ದನಗಳು ಈಗ ಹಲವು ಲಕ್ಷಕ್ಕೆ ಕುಸಿದಿವೆ.

ಈ ಮಹದೇಶ್ವರ ಬೆಟ್ಟದ ಮೇಲಿರುವ ಬೇಡಗಂಪಣರು, ಬೆಟ್ಟದ ಕೆಳಗಿರುವ ಕೃಷ್ಣಗೊಲ್ಲರು,ಮಲೆನಾಡಿನ ಅಂಚಿನ ಜಿಗಳಲ್ಲಿರುವ ಧನಗರ್ ಗೌಳಿಗಳು, ಮಧ್ಯಕರ್ನಾಟಕದಲ್ಲಿರುವ ಮ್ಯಾಸಬೇಡರು,ಕಾಡು ಗೊಲ್ಲರು, ಉತ್ತರ ಕರ್ನಾಟಕದ ಕೊಪ್ಪಳ ಹಿಂಡುದನಗಳ ಪಾಲಕರು – ಇವರ ನಾಟಿ ದನಗಳ ಸಂಖ್ಯೆ ಇಡೀ ಕರ್ನಾಟಕದ ದೇಸಿ ದನಗಳ ಸಂಖ್ಯೆಯ ಅರ್ಧದಷ್ಟಾಗುತ್ತದೆ !

ಆದರೆ ಸರ್ಕಾರ ದೇಸಿತಳಿಗಳ ಅಭಿವೃದ್ಧಿಯನ್ನು ತನ್ನ ತಳಿನೀತಿಯಲ್ಲಿ ಆದ್ಯತೆಯಾಗಿ ಘೋಷಿಸಿ ಕೊಂಡಿದೆ. ಪಟ್ಟಣಗಳಲ್ಲಿ,ಸಿಟಿಗಳಲ್ಲಿ ನಾಟಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ.ಅದರ ಉತ್ಪನ್ನಗಳಾದ ಬೆಣ್ಣೆ,ತುಪ್ಪ ಗಳ ಬೆಲೆ ಹೀಗಿದ್ದೂ ಈ ಸಮುದಾಯಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಹೇಗೆ ? ಕೃಷ್ಣಗೊಲ್ಲರು ತಮ್ಮ ಸಾವಯವ ಬದುಕಿನ ರೀತಿಯಿಂದ ಪ್ರಕೃತಿಗೇ ಕಾಣಿಕೆ ಕೊಡುತ್ತಾ ಪಶುಪಾಲನೆ ಮಾಡುತ್ತಿದ್ದರೆ ಪಶುಪಾಲನಾ ಇಲಾಖೆ ಇವರ ವಿಷಯದಲ್ಲಿ ಅಸಡ್ಡೆ ತೋರುತ್ತಿಲ್ಲವೇ ? ಈಗಿನ ಕ್ಷಾಮದ ದವಡೆಗೆ ಸಿಕ್ಕಿರುವ ಈ ಪಶುಪಾಲಕ ಸಮುದಾಯಗಳನ್ನು ರಕ್ಷಿಸುವ ಹೊಣೆ ಸರ್ಕಾರಕ್ಕೆ ಇಲ್ಲವೇ ? ಹೊಸ ಅಭಿವೃದ್ಧಿ ನೀತಿಗಳು ಈ ಕಾಡಿನಂಚಿನ ಈ ಪಶುಪಾಲಕ ಸಮುದಾಯಗಳನ್ನು ಕಬಳಿಸಿ ಕಾಡನ್ನು ಉಳಿಸಲು ಸಾಧ್ಯವೇ ? ಜಗತ್ತಿನ ಶ್ರೇಷ್ಠ ಪರಿಸರ ವಿeನಿ ಆಲನ್ ಸಾವರಿ, ದನಕರು ಆಡು ಕುರಿಗಳ ನಿಯಂತ್ರಿತ ಮೇಯುವಿಸುವಿಕೆಯಿಂದ ಮಾತ್ರ ಜಗತ್ತಿಗೆ ಅಡರಿಕೊಂಡಿರುವ ಹವಾಮಾನ ವೈಪ್ಯರೀತ್ಯವನ್ನು ತೊಡೆಯಬಹುದು ಎಂದಿರುವುದು ನಮ್ಮ ಆಧುನಿಕ ಅಭಿವೃದ್ಧಿ ತಜ್ಞರಿಗೆ ಗೊತ್ತಿಲ್ಲವೇ ?

” ಕೃಷ್ಣಗೊಲ್ಲರು ತಮ್ಮ ಸಾವಯವ ಬದುಕಿನ ರೀತಿಯಿಂದ ಪ್ರಕೃತಿಗೇ ಕಾಣಿಕೆ ಕೊಡುತ್ತಾ ಪಶುಪಾಲನೆ ಮಾಡುತ್ತಿದ್ದರೆ ಪಶುಪಾಲನಾ ಇಲಾಖೆ ಇವರ ವಿಷಯದಲ್ಲಿ ಅಸಡ್ಡೆ ತೋರುತ್ತಿಲ್ಲವೇ ? ಈಗಿನ ಕ್ಷಾಮದ ದವಡೆಗೆ ಸಿಕ್ಕಿರುವ ಈ ಪಶುಪಾಲಕ ಸಮುದಾಯಗಳನ್ನು ರಕ್ಷಿಸುವ ಹೊಣೆ ಸರ್ಕಾರಕ್ಕೆ ಇಲ್ಲವೇ ?”

 

 

 

ಆಂದೋಲನ ಡೆಸ್ಕ್

Recent Posts

ಕೊಡಗಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ

ನವೀನ್ ಡಿಸೋಜ ೧೬,೦೬೩ ಪ್ರಕರಣ ದಾಖಲು, ೧.೦೬ ಕೋಟಿ ರೂ. ದಂಡ ಸಂಗ್ರಹ ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸದಿರುವುದು, ದಾಖಲೆಗಳಿಲ್ಲದೆ ವಾಹನ…

8 mins ago

ತಮಿಳುನಾಡಿಗೆ ನೀರು; 72 ಅಡಿಗೆ ಕುಸಿದ ಕಬಿನಿ ಜಲಾಶಯ

ಮಂಜು ಕೋಟೆ ಹೊರಹರಿವಿನ ಪ್ರಮಾಣ ಕಡಿಮೆ ಮಾಡಿರುವ ಅಧಿಕಾರಿಗಳು; ರೈತರಿಗೆ, ಜನರಿಗೆ ನೀರಿನ ಸಮಸ್ಯೆ ಆತಂಕ  ಎಚ್.ಡಿ.ಕೋಟೆ: ಈ ಬಾರಿ…

12 mins ago

ಮೇವಿನ ಕೊರತೆ; ಹಸಿರು ಮೇವು ಖರೀದಿಗೆ ಮುಂದಾದ ರೈತರು

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳಲ್ಲಿ ಮೇವಿಗೆ ಭರ್ಜರಿ ಬೇಡಿಕೆ; ಹಾಲು ಉತ್ಪಾದಕರಿಗೆ ಹೊಡೆತ ಕೆ.ಆರ್.ನಗರ: ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು,…

17 mins ago

ಗಜಪಯಣಕ್ಕೆ ನಡೆದಿದೆ ಭರದ ಸಿದ್ಧತೆ

ದಾ.ರಾ.ಮಹೇಶ್ ವೀರನಹೊಸಹಳ್ಳಿಯಲ್ಲಿ ಕಲಾತಂಡಗಳೊಡನೆ ಸ್ವಾಗತ ಕೋರಲು ಅರಣ್ಯ ಇಲಾಖೆ ಸಜ್ಜು  ವೀರನಹೊಸಹಳ್ಳಿ: ಆಗಸ್ಟ್ ೨೬ರಂದು ಆರಂಭವಾಗಲಿರುವ ಗಜ ಪಯಣಕ್ಕೆ ವಿವಿಧ…

22 mins ago

ಮೂರು ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ ; ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ತೀವ್ರ ಪ್ರತಿಭಟನೆಗೆ ಸಾಕ್ಷಿಯಾದ…

9 hours ago