ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ
ಮಡಿಕೇರಿ: ಹೊಸ ವರ್ಷಾಚರಣೆಗೆ ಕೊಡಗು ಜಿಲ್ಲೆ ಸಜ್ಜಾಗಿದೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಸಿಗರ ಪ್ರವಾಹವೇ ಜಿಲ್ಲೆಗೆ ಹರಿದುಬಂದಿದೆ. ಈ ನಡುವೆ ಹೊಸ ವರ್ಷಾಚರಣೆಯಲ್ಲಿ ಅಕ್ರಮ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸುತ್ತಿದೆ.
ಹೊಸ ವರ್ಷಾಚರಣೆ ಎಂದರೆ ಪಾರ್ಟಿ ಮಾಡುವುದು, ಗೌಜು ಗದ್ದಲ ಮಾಡುವುದೇ ಇತ್ತೀಚೆಗಿನ ಸಂಸ್ಕೃತಿಯಾಗಿದೆ. ಇದಕ್ಕಾಗಿ ಕಾದಿರುವ ಯುವ ಸಮೂಹ ಹಲವು ದಿನ ಗಳಿಂದಲೇ ಪ್ಲಾನ್ ಮಾಡಿಕೊಂಡು ತಮ್ಮೂರಿನಲ್ಲಿ ಅಥವಾ ದೂರದೂರಿಗೆ ನ್ಯೂ ಇಯರ್ ಪಾರ್ಟಿ ಮಾಡಲು ತೆರಳುತ್ತಾರೆ. ಹೀಗೆ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತುಗಳ ಬಳಕೆ ಆಗಿರುವ ಬಗ್ಗೆಯೂ ರಾಜ್ಯ, ದೇಶದ ಹಲವೆಡೆ ಸುದ್ದಿಯಾಗುತ್ತಲೇ ಇದೆ. ಹೀಗಾಗಿ ಎಲ್ಲೆಡೆ ಈಗ ನ್ಯೂ ಇಯರ್ ಪಾರ್ಟಿ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಕೊಡಗಿನಲ್ಲಿಯೂ ಹೆಚ್ಚು ಪ್ರವಾಸಿಗರು ಹೊಸ ವರ್ಷಾಚರಣೆ ಮಾಡುವುದರಿಂದ ಇಲ್ಲಿಯೂ ಅಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರ ವಹಿಸಲಾಗುತ್ತಿದೆ.
ಜಿಲ್ಲೆಯ ಬಾರ್, ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ಮುಚ್ಚುವ ಸಮಯವನ್ನು ಡಿ. ೩೧ರಂದು ವಿಸ್ತರಿಸಬೇಕೆಂದು ಈ ಹಿಂದಿನ ವರ್ಷಗಳಲ್ಲಿ ಹೋಟೆಲ್, ಬಾರ್ಗಳ ಮಾಲೀಕರು ಕೋರಿಕೆ ಇಟ್ಟಿದ್ದರು. ಆದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಯಾವುದೇ ಸಮಯ ವಿಸ್ತರಣೆ ನೀಡಿರಲಿಲ್ಲ. ಈ ಬಾರಿಯೂ ಅದೇ ನಿಯಮ ಪಾಲನೆಯಾಗಲಿದ್ದು, ಮಡಿಕೇರಿ ನಗರ ಸೇರಿದಂತೆ ಎಲ್ಲೆಡೆ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳು ಎಂದಿನಂತೆ ಸಮಯಕ್ಕೆ ಸರಿಯಾಗಿ ಬಂದ್ ಆಗಲಿವೆ. ಬೆಂಗಳೂರಿನಂತೆ ರಾತ್ರಿ ೧ ಗಂಟೆ, ೨ಗಂಟೆಯ ವರೆಗೆ ವ್ಯಾಪಾರ ನಡೆಸಲು ಅವಕಾಶ ಇರುವುದಿಲ್ಲ.
ಜಿಲ್ಲೆಯ ನಾನಾ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್ ಗಳಲ್ಲಿ ನ್ಯೂ ಇಯರ್ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಸ್ಥಳಗಳಲ್ಲಿಯೂ ರಾತ್ರಿ ೧೦ ಗಂಟೆಯ ನಂತರ ಡಿ. ಜೆ ಬಳಕೆಗೆ ಅವಕಾಶವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಕೇಕ್ ಕತ್ತರಿಸುವುದು, ಪಾರ್ಟಿ ಮಾಡುವುದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ನಡೆಸುವುದು, ಅಕ್ಕ ಪಕ್ಕದವರಿಗೆ ಕಿರಿಕಿರಿ ಉಂಟು ಮಾಡುವುದು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಾರ್, ವೈನ್ ಶಾಪ್ಗಳಲ್ಲದೇ ಇತರೆ ಸ್ಥಳಗಳಲ್ಲಿ ಮದ್ಯದ ವಿತರಣೆಗೂ ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಯಾವುದೇ ಪಾರ್ಟಿಗಳಲ್ಲಿ ಮದ್ಯದ ಬಳಕೆ ಅಬಕಾರಿ ನಿಯಮದಂತೆ ಇರಬೇಕು. ಹೆಚ್ಚುವರಿ ಮದ್ಯದ ದಾಸ್ತಾನು ಮಾಡುವುದು ಹಾಗೂ ವಿತರಿಸುವುದಕ್ಕೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕಾಗಿದ್ದು, ಅನುಮತಿ ಇಲ್ಲದೇ ಪಾರ್ಟಿಗಳಲ್ಲಿ ನಿಗದಿಗಿಂತ ಹೆಚ್ಚಿನ ಮದ್ಯದ ಬಳಕೆ ಕಂಡುಬಂದರೆ ಆಯೋಜಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಈಗಾಗಲೇ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟದ ವಿರುದ್ಧ ಸಮರ ಸಾರಿರುವ ಪೊಲೀಸ್ ಇಲಾಖೆ, ಹೊಸ ವರ್ಷಾಚರಣೆಗೆ ಹೆಚ್ಚಾಗಿ ಹೊರ ರಾಜ್ಯದ ಪ್ರವಾಸಿಗರು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟದಂತಹ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ.
ಈಗಾಗಲೇ ಹಲವು ಪ್ರಕರಣಗಳಲ್ಲಿ ಜಿಲ್ಲೆಯ ಹೋಂಸ್ಟೇ, ಹೋಟೆಲ್ಗಳ ಮಾಲೀಕರು ಅತಿಥಿಗಳ ಮೇಲೆ ಕಣ್ಣಿಡಬೇಕು ಪ್ರವಾಸಿಗರ ಚಟುವಟಿಕೆ ಅನುಮಾನಾಸ್ಪದವಾಗಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…