Andolana originals

ಕಬಿನಿ ಜಲಾಶಯಕ್ಕೆ ೩ ದಿನಗಳಲ್ಲೇ ೧೨ ಅಡಿ ನೀರು!

ಮಂಜು ಕೋಟೆ

ಸತತ ಮಳೆಯಿಂದ ನುಗು, ತಾರಕ, ಹೆಬ್ಬಾಳ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆ 

ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ, ನುಗು, ತಾರಕ, ಹೆಬ್ಬಾಳ ಜಲಾಶಯಗಳ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮೂರೇ ದಿನಗಳಲ್ಲಿ ಕಬಿನಿಗೆ ೧೨ ಅಡಿ, ತಾರಕಕ್ಕೆ ೩ ಅಡಿ, ನುಗುವಿಗೆ ೫ ಅಡಿ, ಹೆಬ್ಬಾಳ ಜಲಾಶಯಕ್ಕೆ ೬ ಅಡಿ ನೀರು ಬಂದಿದ್ದು, ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಮುಂದಿನ ತಿಂಗಳಲ್ಲೇ ಈ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕಳೆದ ಏಪ್ರಿಲ್ ಮತ್ತು ಈ ತಿಂಗಳಲ್ಲಿ ವಿಪರೀತವಾದ ಬಿಸಿಲಿದ್ದರಿಂದ ಕಬಿನಿ, ನುಗು, ತಾರಕ, ಹೆಬ್ಬಾಳ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಆದರೆ, ಕಳೆದ ವಾರದಿಂದ ತಾಲ್ಲೂಕು ಮತ್ತು ಕೇರಳದ ವಯನಾಡು, ಕೊಡಗು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ನೀರಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸ ಉಂಟುಮಾಡಿದೆ.

ಪ್ರತಿ ಸಾಲಿನಲ್ಲೂ ಈ ಅವಧಿಯಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತವಾಗಿರುತ್ತಿತ್ತು. ಇದೇ ಮೊದಲ ಬಾರಿಗೆ ವರುಣನ ಆರ್ಭಟದಿಂದ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಜೂನ್ ತಿಂಗಳ ಮೊದಲನೇ ವಾರದಲ್ಲೇ ಜಲಾಶಯಗಳು ಭರ್ತಿಯಾಗುವುದು ಖಚಿತ. ಕಬಿನಿ ಜಲಾಶಯದ ಇತಿಹಾಸದಲ್ಲೇ ಮೊದಲು ಎಂಬಂತೆ ಮೂರೇ ದಿನಗಳಲ್ಲಿ ೧೨ ಅಡಿಗಳಷ್ಟು ನೀರಿನ ಮಟ್ಟ ಏರಿಕೆ ಕಂಡಿದೆ. ಕಳೆದ ವಾರ ಕಬಿನಿ ಜಲಾಶಯ ೬೦ ಅಡಿಗಳಿಗೆ ಕುಸಿತ ಕಂಡಿತ್ತು. ಈಗ ೭೨ ಅಡಿಗಳಷ್ಟು ನೀರಿದೆ. ಗರಿಷ್ಟ ೮೪ ಅಡಿಗಳಿರುವ ಜಲಾಶಯ ಭರ್ತಿಯಾಗಲು ಇನ್ನು ೧೨ ಅಡಿ ಮಾತ್ರ ಬಾಕಿ ಇದೆ. ಸದ್ಯ ೨೪ ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ.

ತಾರಕ ಜಲಾಶಯ ತನ್ನ ಗರಿಷ್ಟ ೧೧೦ ಅಡಿ ತಲುಪಲು ಇನ್ನು ೧೨ ಅಡಿಗಳು ಮಾತ್ರ ಬಾಕಿ ಇದೆ. ೩ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದಲ್ಲಿ ೩ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ೧,೭೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಈ ಪ್ರದೇಶದಿಂದ ಈ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

ಹೆಬ್ಬಾಳದ ಜಲಾಶಯ ತನ್ನ ಗರಿಷ್ಟ ಮಟ್ಟ ೨೫ ಅಡಿ ತಲುಪಲು ಇನ್ನು ೪ ಅಡಿ ಮಾತ್ರ ಬಾಕಿ ಇದೆ. ಜಲಾಶಯಕ್ಕೆ ಹುಣಸೂರು ಮತ್ತು ಕೋಟೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ೨-೩ ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ. ನುಗು ಜಲಾಶಯ ತನ್ನ ಗರಿಷ್ಟ ಮಟ್ಟ ೧೧೦ ಅಡಿ ತಲುಪಲು ೨೨ ಅಡಿಗಳು ಬಾಕಿ ಮಾತ್ರ ಇದೆ. ೮೩ ಅಡಿಗಳಿಗೆ ಕುಸಿತ ಕಂಡಿದ್ದ ಜಲಾಶಯ ವಾರದಿಂದ ಮಳೆಯಿಂದಾಗಿ ೫ ಅಡಿಗಳಷ್ಟು ನೀರು ಹೆಚ್ಚಳವಾಗಿ ೮೮ ಅಡಿಗಳಿಗೆ ಏರಿಕೆಯಾಗಿದೆ. ೧,೮೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ಬಾರಿ ಇದೇ ಸಂದರ್ಭದಲ್ಲಿ ನೀರಿನ ಮಟ್ಟ ೭೪ ಅಡಿಗಳಷ್ಟಿತ್ತು.

ಮುಂಗಾರು ಮಳೆ ಇದೇ ವಾರದಲ್ಲಿ ಕೇರಳ ಮತ್ತು ಕರ್ನಾಟಕ ಪ್ರವೇಶಿಸುವುದರಿಂದ ಮುಂಗಾರು ಮಳೆಯ ಆರ್ಭಟ ಹೆಚ್ಚಾದಲ್ಲಿ ಭಾರಿ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡುವ ಸಾಧ್ಯತೆಗಳೂ ಇವೆ.

” ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಭಾರೀ ಮಳೆ ಆಗುತ್ತಿದ್ದು ವಿಪತ್ತು ನಿರ್ವಹಣಾ ಸಮಿತಿಯನ್ನು ಎರಡೂ ತಾಲ್ಲೂಕುಗಳಲ್ಲಿ ರಚಿಸಿ, ಅನೇಕ ಅಽಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಭೆ ನಡೆಸಲಾಗಿದೆ. ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.”

-ಶ್ರೀನಿವಾಸ್, ತಹಸಿಲ್ದಾರ್, ಎಚ್.ಡಿ.ಕೋಟೆ, ಮೋಹನಕುಮಾರಿ, ತಹಸಿಲ್ದಾರ್, ಸರಗೂರು.

” ಕಬಿನಿ ಜಲಾಶಯದಲ್ಲಿ ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹೀಗೆಯೇ ಮಳೆ ಮುಂದುವರಿದರೆ ಶೀಘ್ರದಲ್ಲೇ ಜಲಾಶಯ ಭರ್ತಿಯಾಗಲಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ.”

-ಚಂದ್ರಶೇಖರ್, ಇಇ, ಕಬಿನಿ ಜಲಾಶಯ

ಆಂದೋಲನ ಡೆಸ್ಕ್

Recent Posts

ಹೊರ್ಮುಜ್‌ ಜಲಸಂಧಿ ಶತ್ರುಗಳಿಗೆ ಮಾತ್ರ ಮುಚ್ಚಿದೆ : ಇರಾನ್

ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…

24 mins ago

ಹುಣಸೂರು | ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆ

ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…

37 mins ago

ಕುಕ್ಕರಹಳ್ಳಿ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ; ಪ್ರತಿಭಟನೆ

ಮೈಸೂರು : ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕುಕ್ಕರಹಳ್ಳಿ…

43 mins ago

2 ಸಾವಿರ ಬೋಧಕ ಹುದ್ದೆಗಳಿಗೆ ನೇಮಕಾತಿ : ಉನ್ನತ ಶಿಕ್ಷಣ ಸಚಿವ ಸುಧಾಕರ್‌

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಯಲ್ಲಿ ಖಾಲಿ ಇರುವ…

59 mins ago

ಎಲ್‌ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ದೃಢಿಕರಣ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

ಹೊಸದಿಲ್ಲಿ : ಹಾರ್ಮುಜ್ ಜಲಸಂಧಿ ಸಂಘರ್ಷದಿಂದ ಉಂಟಾದ ಅಡುಗೆ ಅನಿಲ (ಎಲ್‌ಪಿಜಿ) ಸರಬರಾಜು ಕೊರತೆಯ ನಡುವೆ ಕೇಂದ್ರ ಪೆಟ್ರೋಲಿಯಂ ಮತ್ತು…

1 hour ago

ಜಾಹೀರಾತು ಫಲಕಗಳಲ್ಲಿ ಪ್ಲಾಸ್ಟಿಕ್ ನಿಷೇಧ : ಬೈರತಿ ಸುರೇಶ್

• ಅನಧಿಕೃತ ಜಾಹೀರಾತು ಹಾಕಿದರೆ ಕ್ರಿಮಿನಲ್ ಕೇಸ್ • ವಿಧಾನಸಭೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತು ನೀತಿ ಮಸೂದೆ ಮಂಡನೆ,…

2 hours ago