Andolana originals

ಸ್ಮಾರಕವಾಗದೇ ಪಾಳು ಬಿದ್ದಿದೆ ಕೆ.ಎಸ್.ನರಸಿಂಹಸ್ವಾಮಿ ಮನೆ

ಮಹೇಶ್ ಕರೋಟಿ

ಇದ್ದೂ ಇಲ್ಲದಂತಾಗಿರುವ ಟ್ರಸ್ಟ್ , ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯ

ಕಿಕ್ಕೇರಿ: ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ (ಕೆ.ಎಸ್.ನರಸಿಂಹಸ್ವಾಮಿ) ಅವರು ಮೈಸೂರು ಮಲ್ಲಿಗೆ ಪ್ರೇಮ ಕಾವ್ಯದ ಮೂಲಕ ಪ್ರೇಮಕವಿ ಎಂದೇ ಪ್ರಖ್ಯಾತರಾಗಿದ್ದರು. ತಮ್ಮ ಶ್ರೇಷ್ಠ ಕಾವ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದ ಅವರ ಮನೆ ಹುಟ್ಟೂರು ಕಿಕ್ಕೇರಿಯಲ್ಲಿದ್ದು, ಅಭಿವೃದ್ಧಿಯಾಗದೇ ಪಾಳು ಬಿದ್ದಿರುವುದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ , ಸರ್ಕಾರ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇಂದು ಕವಿ ನರಸಿಂಹ ಸ್ವಾಮಿ ಅವರು ಬಾಳಿ ಬದುಕಿದ ಮನೆ ಶಿಥಿಲವಾಗಿದ್ದರೂ ಆ ಮನೆ ಯೊಳಗೆ ಕವಿಯ ನೆನಪು ಜೀವಂತವಾಗಿದೆ. ಕೈಹೆಂಚಿನ ಚಾವಣಿ, ಮಣ್ಣಿನ ಗೋಡೆಗಳು-ಇವೆಲ್ಲ ಅವರ ಸರಳ ಬದುಕಿನ ಪ್ರತಿಬಿಂಬ. ಆ ಸರಳತೆಯಲ್ಲೇ ಅವರ ಕಾವ್ಯದ ಮಹತ್ವ ಅಡಗಿದೆ. ಆ ಮನೆಯನ್ನು ಸ್ಮಾರಕವನ್ನಾಗಿ ಮಾಡಿದರೆ, ಕವಿಯ ಸರಳ ಜೀವನದ ಪರಿಚಯದ ಜೊತೆಗೆ ಅವರ ಕಾವ್ಯ ಹುಟ್ಟಿದ ಪರಿಸರದ ಅನುಭವ ಹೊಸ ತಲೆಮಾರಿಗೆ ದೊರೆಯುತ್ತವೆ. ಇದು ಗೌರವದ ವಿಷಯ ಮಾತ್ರವಲ್ಲ, ಸಂಸ್ಕೃತಿಯ ಸಂರಕ್ಷಣೆಯ ಕಾರ್ಯವೂ ಹೌದು.

ವಾಸ್ತವವೆಂದರೆ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಸ್ತಿತ್ವದಲ್ಲಿದ್ದರೂ ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿಲ್ಲ ಎಂಬುದರ ಬಗ್ಗೆ ಸಾಹಿತ್ಯಾಸಕ್ತರು, ಕವಿ ಕೆಎಸ್‌ನ ಅವರ ಅಭಿಮಾನಿಗಳಲ್ಲಿ ಅಸಮಾಧಾನವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತ, ಜಿಲ್ಲಾಡಳಿತವಾಗಲಿ ಕವಿ ಮನೆಯ ಈಗಿನ ಮಾಲೀಕರನ್ನು ಒಪ್ಪಿಸಿ ಮನೆಯನ್ನು ಸ್ಮಾರಕವನ್ನಾಗಿ ರೂಪಿಸಲು ಇಚ್ಛಾಶಕ್ತಿ ಪ್ರದರ್ಶಿಸದಿರುವುದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

೧೯೧೫ ಜನವರಿ ೨೬ರಂದು ಜನಿಸಿದ ಕೆಎಸ್‌ನ ಅವರು ೨೦೦೩ ಡಿಸೆಂಬರ್ ೨೭ರಂದು ನಿಧನರಾದರು. ಗಣರಾಜ್ಯೋತ್ಸವದಂದೇ ನರಸಿಂಹಸ್ವಾಮಿಯವರ ಜನ್ಮದಿನವೂ ಹೌದು. ಪ್ರೇಮಕವಿಯ ಸಂಸ್ಮರಣೆಯ ದಿನ. ಈಗಲಾದರೂ ಕೆಎಸ್‌ನ ಅವರು ಬದುಕಿ ಬಾಳಿದ ಮನೆಯನ್ನು ಸ್ಮಾರಕವಾಗಿಸಲು ಮುಂದಾಗುತ್ತಾರಾ? ಅಥವಾ ಅವರ ಹೆಸರಿನ ಟ್ರಸ್ಟ್ ಕೇವಲ ನಾಮಕಾವಸ್ಥೆಗೆ ಮಾತ್ರ ಎಂಬುದನ್ನು ಒಪ್ಪಿಕೊಳ್ಳು ತ್ತಾರಾ ಎಂಬುದು ಸಾಹಿತ್ಯಪ್ರಿಯರ ಪ್ರಶ್ನೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಕವಿ ಮನೆಯನ್ನು ಸ್ಮಾರಕವಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎನೆಂಬುದು ಸಾಹಿತ್ಯ ಪ್ರಿಯರ ಆಗ್ರಹವಾಗಿದೆ.

” ನಮ್ಮ ತಾಯಿಯವರ ಹೆಸರಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರ ಮನೆಯಿದೆ. ನರಸಿಂಹಸ್ವಾಮಿ ಅವರ ಮೇಲಿನ ಅಭಿಮಾನ, ಗೌರವದಿಂದಾಗಿ ಈ ಮನೆ ಸ್ಮಾರಕವಾಗುವುದಾದರೆ, ಜಾಗದ ಮಾಲೀಕರಾದ ನಾವೇ ಈ ಮನೆಯನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಸೂಕ್ತವಾದ ಬದಲಿ ನಿವೇಶನ ಕೊಡುವುದಾದರೆ ನಮ್ಮದೇನೂ ತಕರಾರಿಲ್ಲ ಎಂದು ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೂ ತಿಳಿಸಿದ್ದೇನೆ. ಆದರೆ, ಅವರಿಂದ ಖಚಿತವಾದ ಉತ್ತರ ಆಡಳಿತದಿಂದ ಬಂದಿಲ್ಲ.”

-ಮಂಜುನಾಥ್, ಮನೆಯ ಮಾಲೀಕರು, ಕಿಕ್ಕೇರಿ

” ಕೆ.ಎಸ್. ನರಸಿಂಹಸ್ವಾಮಿ ಅವರ ಸಾಹಿತ್ಯಾಭಿಮಾನಿಗಳಿಗೆ ನಿರಾಸೆಗೊಳಿಸ ಬಾರದೆಂದೇ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಆದರೆ ಕೆಲವು ತೊಡಕುಗಳಿದ್ದು, ಸದ್ಯದಲ್ಲೇ ಬೇರೊಂದು ಸ್ಥಳದಲ್ಲಿ ಕೆಎಸ್‌ನ ಅವರ ಮನೆಯ ತದ್ರೂಪಿನಲ್ಲೇ ಸ್ಮಾರಕ ನಿರ್ಮಿಸುವ ಚಿಂತನೆಯೂ ಇದೆ. ಅಲ್ಲದೆ, ಜಾಗದ ಮಾಲೀಕರು ಕೇಳುವ ಬದಲಿ ನಿವೇಶನ ನೀಡಲು ಕಷ್ಟಕರವಾಗಿದೆ. ಅಲ್ಲದೆ ಟ್ರಸ್ಟ್ ವತಿಯಿಂದ ಸ್ಮಾರಕ ನಿರ್ಮಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ.”

-ಬಿ.ವಿ.ನಂದೀಶ್, ಉಪನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸದಸ್ಯ ಕಾರ್ಯದರ್ಶಿ, ಕೆಎಸ್‌ನ ಟ್ರಸ್ಟ್

” ಕಿಕ್ಕೇರಿಗೆ ಒಂದು ಸಾಂಸ್ಕೃತಿಕ ಹಿರಿಮೆ ಗರಿಮೆ ತಂದವರು ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ. ಆದ್ದರಿಂದ ಅವರು ವಾಸವಿದ್ದ ಮನೆಯನ್ನು ಸ್ಮಾರಕವಾಗಿಸುವುದು ನಮ್ಮೆಲ್ಲರ ಹೊಣೆಗಾರಿಕೆಯೂ ಹೌದು. ಹಾಗಾಗಿ ಕವಿಯ ನಿವಾಸ ಸ್ಮಾರಕವಾಗುವ ತನಕ ಹೋರಾಡುತ್ತೇವೆ.”

-ಡಿ.ಎಸ್.ವೇಣು, ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಆಂದೋಲನ ಡೆಸ್ಕ್

Recent Posts

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

3 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

3 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

3 hours ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

3 hours ago

ಓದುಗರ ಪತ್ರ: ಎಸ್‌ಐಆರ್: ಸಂಪೂರ್ಣ ಮಾಹಿತಿ ನೀಡಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…

3 hours ago

ಅನನ್ಯಾಳ ಬದುಕು ಬದಲಾಯಿಸಿದ 20 ರೂಪಾಯಿ ನೋಟು

ಪಂಜು ಗಂಗೊಳ್ಳಿ  ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…

3 hours ago