ಗುಂಡ್ಲುಪೇಟೆ: ಗುಂಡ್ಲುಪೇಟೆ ಪಟ್ಟಣದ ಮೂಲಕ ಕೇರಳ ಹಾಗೂ ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಹೋದುಹೋಗಿದೆ. ಹಾಗಾಗಿ ಸದಾ ಚಟುವಟಿಕೆಯಿಂದ ಇರುವ ಪಟ್ಟಣದ ಪ್ರಮುಖ ವೃತ್ತಗಳು, ಜನನಿಬಿಡ ಸ್ಥಳಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ನೆರೆಯ ಎರಡೂ ರಾಜ್ಯಗಳ ಜೊತೆ ಪಟ್ಟಣ ಸಂಪರ್ಕಇಟ್ಟುಕೊಂಡಿದೆ. ಆದ್ದರಿಂದ ವ್ಯಾಪಾರ ವಹಿ ವಾಟು, ವಾಹನಗಳ ಓಡಾಟ ಜೋರಾಗಿದೆ. ಹಾಗೆಯೇ ಪಟ್ಟಣದ ವ್ಯಾಪ್ತಿಯಲ್ಲಿ ಗಾಂಜಾ ಘಮಲೂ ಇದೆ. ಕೊಲೆ, ಹೆದ್ದಾರಿಯಲ್ಲಿ ದರೋಡೆ, ಮನೆ ಕಳ್ಳತನ, ಹಿಟ್ ಅಂಡ್ ರನ್ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಪೊಲೀಸ್ ಇಲಾಖೆಯು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ.
ಪಟ್ಟಣದ ಎಸ್ಬಿಐ ಶಾಖೆ ಮುಂಭಾಗ (ಸುರಭಿ ಬಳಿ), ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸರ್ಕಲ್, ಎಂಡಿಸಿಸಿ ಬ್ಯಾಂಕ್ ಸರ್ಕಲ್ (ಬಸವೇಶ್ವರ ವೃತ್ತ, ಊಟಿ ಗೇಟ್, ಸಾರ್ವಜನಿಕ ಆಸ್ಪತ್ರೆ ಬಳಿ, ಹಳೆ ಬಸ್ ನಿಲ್ದಾಣ, ಕೋಡಹಳ್ಳಿ ವೃತ್ತ ಬಳಿ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದರೆ ಅನೈತಿಕ ಚಟುವಟಕೆಗಳನ್ನು ತಡೆಯಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಇತ್ತೀಚೆಗೆ ಪಟ್ಟಣದ ಮದ್ದಾನೇಶ್ವರ ಶಾಲೆಯ ಹಿಂಭಾಗ ಸಣ್ಣ ವಿಚಾರಕ್ಕೆ ಗಲಾಟೆ ನಡೆದು ಶಿವು ಎಂಬಾತನ ಹತ್ಯೆಯಾಯಿತು. ಇದಲ್ಲದೆ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮನೆಗಳ್ಳತನ ನಡೆದಿದೆ. ಮದ್ಯದ ಅಂಗಡಿಗಳ ಹಾಗೂ ರಸ್ತೆಗಳ ಬದಿಯಲ್ಲಿ ಕುಡುಕರ ಹಾವಳಿಯಿದೆ. ರಸ್ತೆ ಬದಿಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಹಾಗೂ ಗುದ್ದೋಡು (ಹಿಟ್ ಅಂಡ್ ರನ್) ಪ್ರಕರಣಗಳು ನಡೆದಿವೆ. ಈ ಬಗ್ಗೆ ಹಲವು ಬಾರಿ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ.
ಕಳಪೆ ಕ್ಯಾಮೆರಾ ಅಳವಡಿಕೆ: ಪಟ್ಟಣದ ಹಲವಾರು ಖಾಸಗಿ ಕಟ್ಟಡಗಳಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಹೆಸರಿಗಷ್ಟೆ ಕ್ಯಾಮೆರಾ ಅಳವಡಿಸಲಾಗಿದೆ. ತುಸುದೂರದ ರಸ್ತೆಯಲ್ಲಿ ಹೋಗುವ ವಾಹನ ನಂಬರ್ ಪ್ಲೇಟ್, ಮುಖ ಚಹರೆ ಗುರುತು ಹಿಡಿಯುವಷ್ಟು ಸಾಮರ್ಥ್ಯ ಇಲ್ಲ. ಆದ್ದರಿಂದ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆಯಿಂದ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
” ಪಟ್ಟಣದ ಪ್ರಮುಖ ವೃತ್ತಗಳು, ಹಳೆ ಬಸ್ ನಿಲ್ದಾಣಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಕ್ಯಾಮೆರಾಗಳನ್ನು ಅಳವಡಿಸಲಿದ್ದಾರೆ.” –ಎಚ್.ಎಂ.ಗಣೇಶಪ್ರಸಾದ್, ಶಾಸಕರು
“ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವ ಬಗ್ಗೆ ಪುರಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೂ ಮನವಿ ಸಲ್ಲಿಸಿದ್ದೇವೆ. ಈಸಂಬಂಧ ಪುರಸಭೆಯಿಂದ ಟೆಂಡರ್ ಆಗಿದ್ದು ಒಂದು ವಾರದೊಳಗೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವ ಭರವಸೆ ನೀಡಿದ್ದಾರೆ.” –ಜಯಕುಮಾರ್, ಸರ್ಕಲ್ ಇನ್ಸ್ಪೆಕ್ಟರ್
“ಕಾನೂನು ಉಲ್ಲಂಘನೆ ಪ್ರಕರಣಗಳು ನಡೆದಾಗಲೆಲ್ಲಾ ಖಾಸಗಿ ಅಂಗಡಿಗಳ ಕ್ಯಾಮೆರಾಗಳ ಮೊರೆ ಹೋಗಬೇಕಿದೆ. ಅಲ್ಲಿ ಗುಣಮಟ್ಟದ ಕ್ಯಾಮೆರಾಗಳಿಲ್ಲ. ಉತ್ತಮವಾದ ಕ್ಯಾಮೆರಾ ಅಳವಡಿಸಬೇಕು.” -ಅಬ್ದುಲ್ ಮಾಲಿಕ್, ಕಾವಲುಪಡೆ ಅಧ್ಯಕ್ಷ
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಆರು ಹಸುಗಳು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ…
ನವೀನ್ ಡಿಸೋಜ: ಕೊಡಗು ಜಿಲ್ಲಾ ವರದಿಗಾರರು ಸಿದ್ದಾಪುರ: ತಿತಿಮತಿ ವಲಯದ ಚೆನ್ನಂಗಿ ಶಾಖೆಯ ವ್ಯಾಪ್ತಿಗೆ ಒಳಪಡುವ ಕೊಡಗು ಶ್ರೀರಂಗಪಟ್ಟಣ ಗ್ರಾಮದ…
ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಭಾಗಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಕೆಲವು ಚಾಲಕರು ಗಾಂಜಾ ಸೇವಿಸಿ ವಾಹನ ಚಾಲನೆ…
ಇಂದು ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿದ್ದು, ಪೋಷಕರು ದುಡಿಮೆಯ ಬಹುತೇಕ ಆದಾಯವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವುದು ಅನಿವಾರ್ಯವಾಗಿದೆ. ಕೇರಳ ಸರ್ಕಾರ…
ನಂಜನಗೂಡು ತಾಲ್ಲೂಕು ಬೆಳಗುಂದ ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲದೆ ಪ್ರತಿದಿನ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬೇಸಿಗೆಯಲ್ಲಿ ಬಿಸಿಲಿನಲ್ಲಿ ಹಾಗೂ ಮಳೆಗಾಲದಲ್ಲಿ ಮಳೆಯಲ್ಲಿಯೇ…
ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್ಗಳ ಮೇಲೆ ಅಳವಡಿಸಿರುವ ಗುಟ್ಕಾ ಹಾಗೂ ತಂಬಾಕು…