trump and modi
• ರಮಾನಂದ ಶರ್ಮಾ,
ಅರ್ಥಿಕ, ರಾಜಕೀಯ ವಿಶ್ಲೇಷಕರು
ಭಾರೀ ಹಗ್ಗಜಗ್ಗಾಟದ ನಂತರ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತೀಯ ಸರಕುಗಳ ಮೇಲೆ ವಿಧಿಸಿದ ಶೇ.50 ಸುಂಕವನ್ನು ಅಮೆರಿಕ ಶೇ.18ಕ್ಕೆ ಇಳಿಸಿದರೆ, ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಜೀರೋ(ಶೂನ್ಯ)ಗೆ ಇಳಿಸಿದೆ. ಈ ಒಪ್ಪಂದವು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ವ್ಯಾಪಾರದಲ್ಲಿ ಭಾರೀ ಸಂಚಲನ ಮೂಡಿಸಿದೆ. ಭಾರತದಲ್ಲಿ ಇದನ್ನು ಬಹುತೇಕ ಸ್ವಾಗತಿಸಿದರೂ, ದಿನಗಳು ಕಳೆದಂತೆ ಎಚ್ಚರಿಕೆಯ ಆಶಾವಾದ (cautious optimsm) ವ್ಯಕ್ತವಾಗುತ್ತಿದೆ.
ಈ ಒಪ್ಪಂದದ ಬಗೆಗೆ ಕ್ರೆಡಿಟ್ ನೀಡುವ ನಿಟ್ಟಿನಲ್ಲಿ ವಿಶ್ಲೇಷಕರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಪ್ರಧಾನಿ ಮೋದಿಯವರು ದೊಡ್ಡಣ್ಣ ಟ್ರಂಪ್ ಮಂಡಿಯೂರುವಂತೆ ಮಾಡಿದ್ದಾರೆ ಎಂದು ಕೆಲವು ಹಿತಾಸಕ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಇದು ವಾಸ್ತವದಲ್ಲಿ ಟ್ರಂಪ್ ರಾಜತಾಂತ್ರಿಕ ವಿಜಯವೆಂದು ಇನ್ನು ಹಲವರು ಬಣ್ಣಿಸುತ್ತಿದ್ದಾರೆ. ಸುಂಕ, ಪ್ರತಿ ಸುಂಕ ಜಟಾಪಟ ವರ್ಷದಿಂದ ನಡೆಯುತ್ತಿದ್ದು, ಅಂತ್ಯ ಗೋಚರಿಸದಿದ್ದಾಗ ದಿಢೀರ್ ಎಂದು ಒಪ್ಪಂದ ಏರ್ಪಟ್ಟು ಇಬ್ಬರು ನಾಯಕರೂ ಪರಸ್ಪರರನ್ನು ಅಭಿನಂದಿಸುವಾಗ ತೆರೆಯಮರೆಯಲ್ಲಿ ಏನೋ ನಡೆದಿದೆ (more than meets the eye) ಎನ್ನುವ ಉಹಾಪೋಹ ಗರಿಗೆದರಿದೆ.
ಭಾರತವು ಐರೋಪ್ಯ ಒಕ್ಕೂಟದೊಂದಿಗೆ ‘ಮದರ್ ಆಫ್ ಆಲ್ ಡೀಲ್ಸ್ ಹೆಸರಿನಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದ್ದು, ಭಾರತವು ತನ್ನ ಮುಷ್ಟಿಯಿಂದ ಜಾರಬಹುದು ಎನ್ನುವ ದೂರಗಾಮಿ ಭಯದಿಂದ ಮತ್ತು ಈವರೆಗೆ ವಿಶ್ವದಕರೆನ್ಸಿಯಾದಡಾಲ ತನ್ನಹಿಡಿತವನ್ನು ಕಳೆದುಕೊಳ್ಳಬಹುದು ಎನ್ನುವ ಆತಂಕದಿಂದ ಟ್ರಂಪ್ ತಮ್ಮ ಮುಷ್ಟಿಯನ್ನು ಸಡಿಲಗೊಳಿಸಿದ್ದಾರೆ ಎಂದು ಕೆಲವು ವಿಶ್ಲೇಷಕರು ಭಾವಿಸುತ್ತಿದ್ದಾರೆ. ಈ ವಾದದಲ್ಲಿ ಅರ್ಥ ಕಾಣುತ್ತಿದೆ. ಭಾರತವು ಅಮೆರಿಕ ಮತ್ತು ಅಮೆರಿಕನ್ ಡಾಲರ್ನ್ನು ಕಡೆಗಣಿಸಿ ತನ್ನ ವ್ಯಾಪಾರ ವ್ಯವಹಾರವನ್ನು ಐರೋಪ್ಯ ದೇಶಗಳತ್ತ ತಿರುಗಿಸಿದರೆ ಎನ್ನುವ ಭಯ ಟ್ರಂಪರು ಸ್ವಲ್ಪ ಮೆತ್ತಗಾಗುವಂತೆ ಮಾಡಿದೆ ಎನ್ನುವುದರಲ್ಲಿ ತೂಕ ಕಾಣುತ್ತದೆ. 2024-25ರಲ್ಲಿ ಭಾರತವು ಅಮೆರಿಕದಿಂದ 55.50 ಬಿಲಿಯನ್ ಡಾಲರ್ ಸರಕನ್ನು ಆಮದು ಮಾಡಿಕೊಂಡಿದ್ದು, ತಮ್ಮ ಹಿಡಿತವನ್ನು ಸಡಿಲಗೊಳಿಸದಿದ್ದರೆ ಈ ವ್ಯವಹಾರ ಮುಂದಿನ ದಿನಗಳಲ್ಲಿ ಕೈಬಿಟ್ಟು ಹೋಗಬಹುದು ಎನ್ನುವ ವ್ಯಾಪಾರಿ ಬುದ್ಧಿ ಅವರು ಮನಸ್ಸು ಬದಲಿಸುವಂತೆ ಮಾಡಿದೆ.
ಟ್ರಂಪ್ ಸುಂಕಾಸ್ತ್ರದ ನಂತರ ಭಾರತವು ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳತೊಡಗಿದ್ದು, ಇದು ಅಮೆರಿಕಕ್ಕೆ ಅಪಥ್ಯವಾಗಿತ್ತು. ಭಾರತವನ್ನು ರಷ್ಯಾದ ಇಂಧನ ವಲಯದಿಂದ ಬೇರ್ಪಡಿಸಿ ರಷ್ಯಾಕ್ಕೆ ಬುದ್ಧಿ ಕಲಿಸಲು ಮತ್ತು ಜಾಗತಿಕವಾಗಿ ರಷ್ಯಾವನ್ನು ಏಕಾಂಗಿಯಾಗಿಸಲು, ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸದಂತೆ ಒತ್ತಡ ಹೇರಿ, ಈ ನಿಟ್ಟಿನಲ್ಲಿ ಭಾರತಕ್ಕೆ ಸುಂಕ ಇಳಿಸುವ ಭಕ್ಷೀಸು ನೀಡಿರಬಹುದು ಎಂದು ವೀಕ್ಷಕರು ಭಾಷ್ಯ ಬರೆಯುತ್ತಿದ್ದಾರೆ. ಈ ಮೂಲಕ ಅಮೆರಿಕವು ಭಾರತದೊಂದಿಗೆ ಸಂಬಂಧವನ್ನು ಸುಧಾರಿಸುವ ಮತ್ತು ರಷ್ಯಾವನ್ನು ಪರೋಕ್ಷವಾಗಿ ಘಾಸಿಗೊಳಿಸುವ ಎರಡು ಹಕ್ಕಿಗಳನ್ನು ಹೊಡೆದಿದೆ. ಭಾರತವು 2024-25ರಲ್ಲಿ ಅಮೆರಿಕಕ್ಕೆ 86.45 ಬಿಲಿಯನ್ ಡಾಲರ್ ಸರಕುಗಳನ್ನು ರಫ್ತು ಮಾಡಿದ್ದು, ಎಷ್ಟೇ ಬದಲಿ ಮಾರುಕಟ್ಟೆಗಳನ್ನು ಹುಡುಕಿದರೂ, ಇದಕ್ಕೆ ಸಾಟಿಯಾಗುವ ಪ್ರಮಾಣದಲ್ಲಿ ಬದಲಿ ಮಾರುಕಟ್ಟೆಯ ಸಾಧ್ಯತೆ ಕಡಿಮೆ ಇರುವುದರಿಂದ ಭಾರತವು ತನ್ನ ನಿಲುವಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಇತ್ತು. ಬದಲಿ ಮಾರುಕಟ್ಟೆ ನಿರೀಕ್ಷಿತ ಪ್ರಮಾಣದಲ್ಲಿ ದೊರಕಲಿಲ್ಲ. ಹಾಗೆಯೇ ಸುಂಕ ಇಳಿತಕ್ಕೆ ಪ್ರತಿಯಾಗಿ ಭಾರತವು ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಇಂಧನ, ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಬೇಕಾಗುತ್ತದೆ. ಇದು ದೇಸಿ ಉದ್ಯಮಕ್ಕೆ ಪೂರಕವಾಗದೇ, ಮಾರಕವಾಗುತ್ತಿದ್ದು, ಸ್ವಾವಲಂಬನೆ ಮತ್ತು ಆ ಮದುಗಳ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಬಹುದು. ಸರ್ಕಾರದ ಆತ್ಮ ನಿರ್ಭರತೆ ಮತ್ತು ಮೇಕ್ ಇಂಡಿಯಾ ಮಹತ್ವಾಕಾಂಕ್ಷಿ ಯೋಜನೆಗಳು ಧರೆಗಿಳಿಯುವ ಅತಂಕ ಕಾಣತ್ತದೆ. ಐರೋಪ್ಯ ಒಕ್ಕೂಟದೊಂದಿಗೆ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಡಚಣೆ ಉಂಟಾಗಿ ಆ ದೇಶಗಳೊಡನೆ ಇರುವ ಬಾಂಧವ್ಯಕ್ಕೆ ಮಾರಕವಾಗುವ ಸಾಧ್ಯತೆಯನ್ನು ವಿಶ್ಲೇಷಕರು ಟಿಪ್ಪಣಿ ಮಾಡುತ್ತಿದ್ದಾರೆ. ಅಮೆರಿಕದೊಡನೆ ವ್ಯವಹಾರ ಕುದುರಿದರೆ, ಅದು ಐರೋಪ್ಯ ಮಾರುಕಟ್ಟೆಯೊಂದಿಗಿನ ವ್ಯವಹಾರಕ್ಕೆ ಅಡ ಚಣೆಯಾಗಬಹುದೆನ್ನುವ ಮಾತೂ ಕೇಳಿಬರುತ್ತಿದೆ.
ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಭಾರತ ನಿಲ್ಲಿಸಬೇಕು ಎನ್ನುವುದರ ಬಗೆಗೆ ಗೊಂದಲ ಇದ್ದು, ಸ್ಪಷ್ಟತೆ ಕಾಣುತ್ತಿಲ್ಲ. ವಿಭಿನ್ನ ಹೇಳಿಕೆಗಳು ಮಾಧ್ಯಮದಲ್ಲಿ ಕಾಣುತ್ತಿವೆ. ರಷ್ಯಾದಿಂದ ಕಚ್ಚಾತೈಲ ಆಮದನ್ನು ನಿಲ್ಲಿಸಿ ಅಮೆರಿಕ – ವೆನುಜುವೆಲಾದಿಂದ ಆಮದು ಮಾಡಿಕೊಳ್ಳುವುದರಿಂದ, ಭಾರತಕ್ಕೆ 8-9 ಬಿಲಿಯನ್ ಡಾಲರ್ ನಷ್ಟವಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಹೇಳಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತದಿಂದ ರಷ್ಯಾ ಮತ್ತು ಭಾರತದಿಂದ ಅಮೆರಿಕ ಅಂತರವನ್ನು ಗಮನಿಸಿದರೆ ತೈಲ ಬೆಲೆಗೆ ಸಾರಿಗೆ ವೆಚ್ಚವೂ ಸೇರಿ ಭಾರತದಲ್ಲಿ ತೈಲ ಬೆಲೆ ದುಬಾರಿಯಾಗುವುದು ಖಚಿತ. ಅಂತೆಯೇ ಪುಟಿನ್ ಹೇಳಿಕೆಯಲ್ಲಿ ಸ್ವಲ್ಪ ಅರ್ಥ ಕಾಣುತ್ತದೆ. ಇದು ಆಂತರಿಕವಾಗಿ ದೇಶದಲ್ಲಿ ತೈಲ ಬೆಲೆ ಹೆಚ್ಚಾಗಲು ಕಾರಣವಾಗಬಹುದು. ಭಾರತದ ಆರ್ಥಿಕತೆಯಲ್ಲಿ, ಹಣ ದುಬ್ಬರವನ್ನು ಹೆಚ್ಚಿಸುವಲ್ಲಿ ತೈಲಬೆಲೆ ಮುಖ್ಯ ಎನ್ನುವುದು ಐತಿಹಾಸಿಕ ಸತ್ಯ. ಅಮೆರಿಕನ್ ತೈಲವು ರಷ್ಯಾದ ತೈಲಕ್ಕಿಂತ ದುಬಾರಿ ಎನ್ನುವ ಮಾತುಕೇಳಿ ಬರುತ್ತಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಭಾರತಿಯರು ತೈಲೋತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಸಿದ್ದರಾಗಬೇಕೇನೋ?
ಈ ಒಪ್ಪಂದವು ಭಾರತೀಯರಿಗೆ ಅತಿ ಲಾಭದಾಯಕವಾದ, ಭಾರತದ ವಿದೇಶಿ ವಿನಮಯ ಸಂಗ್ರಹಕ್ಕೆ ಮಹತ್ವದ ಕೊಡುಗೆ ನೀಡುವ, ಟೆಕ್ಕಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಎಚ್1-ಬಿ ವಿಸಾದ ಬಗೆಗೆ ಮೌನವಾಗಿದೆ. ಅಮೆರಿಕದಲ್ಲಿ ಇರುವ 4.40 ಮಿಲಿಯನ್ ಟೆಕ್ಕಿಗಳಲ್ಲಿ ಸುಮಾರು 70%, ಅಂದರೆ 3 ಲಕ್ಷ ಟೆಕ್ಕಿಗಳು ಭಾರತೀಯರು. ಸುಂಕ ಕಡಿತ ದಷ್ಟೇ ಇದು ಭಾರತಕ್ಕೆ ಮಹತ್ವದ್ದು. ಡೊನಾಲ್ಡ್ ಟ್ರಂಪ್ ಈವರೆಗೂ ಈ ನಿಟ್ಟಿನಲ್ಲಿ ತಮ್ಮ ಬಿಗಿಹಿಡಿತವನ್ನು ಸಡಿಲಗೊಳಿಸಿಲ್ಲ. ಈ ನಿಟ್ಟಿನಲ್ಲಿ ಟ್ರಂಪ್ ಏನಾದರೂ ಹೇಳಬಹುದು ಎನ್ನುವ ನಿರೀಕ್ಷೆಗೆ ನೀರು ಬಿದ್ದಿದೆ.
ಈ ಒಪ್ಪಂದದಲ್ಲಿ ಕೃಷಿ ಉತ್ಪನ್ನಗಳ ಆಮದಿಗೆ ಅವಕಾಶವಿದ್ದು, ಮುಂದಿನ ಐದು ವರ್ಷಗಳಲ್ಲಿ 500 ಮಿಲಿಯನ್ ಡಾಲರ್ ಆಮದಿನಲ್ಲಿ ಗಣನೀಯ ಪ್ರಮಾಣದಲ್ಲಿ ಕೃಷಿ ಮತ್ತು ಡೇರಿ ಉತ್ಪನ್ನಗಳು ಆಮದಾದರೆ, ಭಾರತೀಯ ಕೃಷಿಕರು ತೊಂದರೆಗೆ ಸಿಲುಕುವ ಸಾಧ್ಯತೆ ಹೆಚ್ಚು. ಈ ಒಪ್ಪಂದವನ್ನು ವಿಶ್ಲೇಷಿಸುವರು ತಮ್ಮ ವಿಶ್ಲೇಷಣೆಯಲ್ಲಿ ಇದನ್ನೇ ಹೈಲೈಟ್ ಮಾಡುತ್ತಿದ್ದಾರೆ. ಅಂತೆಯೇ ಇದು ಮಾರಕ ಒಪ್ಪಂದ ಎಂದು ಟೀಕಿಸಲಾಗುತ್ತಿದೆ. ರೈತ ಸಂಘಟನೆಗಳು ಬೀದಿಗಿಳಿಯಲು ಮುಂದಾಗಿವೆ. ಸರ್ಕಾರ ಅಂತಹ ಯಾವುದೇ ಬೆಳವಣಿಗೆಯಾಗದು ಮತ್ತು ಕೃಷಿ ಉತ್ಪನ್ನಗಳು ಆಮದಾಗುವುದಿಲ್ಲ ಎಂದು ಭರವಸೆ ನೀಡುತ್ತಿದೆ. ಅಮೆರಿಕವು ತನ್ನ ರೈತರಿಗೆ ಭಾರೀ ಸಹಾಯಧನವನ್ನು ನೀಡುತ್ತಿದ್ದು, ಅಲ್ಲಿನ ರೈತರು ಅದರ ಪ್ರಯೋಜನ ಪಡೆದು ತಮ್ಮ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ತಂದು ಸುರಿದರೆ ಭಾರತೀಯ ರೈತರು ಎಲ್ಲಿಗೆ ಹೋಗಬೇಕು? ಕೃಷಿ ಉತ್ಪನ್ನಗಳನ್ನು ಈ ಒಪ್ಪಂದದಿಂದ ಹೊರಗಿಡಲಾಗಿದೆ ಎಂದು ವಾಣಿಜ್ಯ ಮಂತ್ರಿಗಳು ಹೇಳಿದರೂ, ಗೊಂದಲಮಯ ಹೇಳಿಕೆಗಳಿಂದ ಚಿತ್ರ ಸ್ಪಷ್ಟವಾಗುತ್ತಿಲ್ಲ.
ಕೆಲವರು ಈ ಒಪ್ಪಂದದಿಂದ ಭಾರತಕ್ಕೆ ನಿರೀಕ್ಷೆಯಷ್ಟು ಅನುಕೂಲವಾಗದಿದ್ದರೂ, ಅಭಿಪ್ರಾಯಪಡುವಂತೆ ಮಾರಕವಾಗಿಲ್ಲ. ಭಾರತದಿಂದ ಮುಖ್ಯವಾಗಿ ರತ್ನ, ಆಭರಣ ಜವಳಿ ಉಡುಪು, ಸಮುದ್ರ ಉತ್ಪನ್ನಗಳು, ವಿಶೇಷ ರಾಸಾಯನಿಕಗಳು ಮತ್ತು ಇಂಜಿನಿಯರಿಂಗ್ ಗೂಡ್ಸ್ಗಳು ರಫ್ತಾಗುತ್ತವೆ. ಇಂಧನ, ತಂತ್ರಜ್ಞಾನಗಳು ಮತ್ತು ಕೃಷಿ ಉತ್ಪನ್ನಗಳು ಆಮದಾಗುತ್ತವೆ. ಅದಕ್ಕೂ ಮಿಗಿಲಾಗಿ ಭಾರತಕ್ಕೆ ವಿದೇಶಿ ವಿನಿಮಯದ ಹರಿವು ಅಮೆರಿಕದಿಂದಲೇ ಹೆಚ್ಚು. ದೊಡ್ಡಣ್ಣನೊಡನೆ ವ್ಯವಹಾರ ಮಾಡುವಾಗ position of strength ಇರದಿರುವುದೇ ಒಪ್ಪಂದದಲ್ಲಿ ಬ್ಯಾಲೆನ್ಸ್ ಕಾಣದಿರುವ ಹಿಂದಿನ ಕಾರಣ ಎನ್ನಬಹುದು. ಆದರೂ ಸುಂಕವನ್ನು ಶೇ.50 ರಿಂದ ಶೇ.18ಕ್ಕೆ ಕಡಿತ ಮಾಡಿದ್ದು ಒಂದು ಸಾಧನೆ. ಆದರೆ, ಅಮೆರಿಕದಿಂದ ಆಮದಾಗುವ ಸರಕುಗಳಿಗೆ ಜೀರೋ ಸುಂಕ ವಿಧಿಸಲು ಒಪ್ಪಿದ್ದು, ಟೀಕೆಗೆ ಆಹಾರ ಒದಗಿಸಿದೆ. ಈ ನಿಟ್ಟಿನಲ್ಲಿ ಚೌಕಾಸಿ- ಜಾಣ್ಣೆ ಕೆಲಸ ಮಾಡಿದಂತೆ ಕಾಣುವುದಿಲ್ಲ. ಕನಿಷ್ಠ ನೆಪಮಾತ್ರಕ್ಕಾದರೂ ಶೇ.5-10 ಸುಂಕವನ್ನು ವಿಧಿಸಬಹುದಿತ್ತು ಎಂದು ಪ್ರಜ್ಞಾವಂತರು ಭಾವಿಸುತ್ತಾರೆ. ಇದು ಒಂದು ರೀತಿಯಲ್ಲಿ sold out ಎಂದು ಪ್ರಮುಖ ವಿರೋಧ ಪಕ್ಷ ಜರಿಯುತ್ತಿದೆ. ಭಾರತದ ಒಟ್ಟು ರಪ್ಲಿನಲ್ಲಿ ಶೇ.17-18 ಅಮೆರಿಕದ ಪಾಲು ಎನ್ನುವುದು ಗಮನಾರ್ಹ. ಸದ್ಯ ಅಮೆರಿಕದೊಡನೆಯ ವ್ಯವಹಾರದಲ್ಲಿ ಭಾರತವು 40 ಬಿಲಿಯನ್ ಡಾಲರ್ ಮಿಗತೆಯನ್ನು (surplus) ಹೊಂದಿದ್ದು, ಈ ಒಪ್ಪಂದದ ನಂತರ ಇದು ಗಣನೀಯವಾಗಿ ಇಳಿಯಬಹುದು ಎನ್ನುವ ಭಯವನ್ನು ಕೆಲವು ಹೂಡಿಕೆದಾರರು ವ್ಯಕ್ತಮಾಡುತ್ತಿದ್ದಾರೆ.
ಕೋಲ್ಕತ್ತ : ಟಿ-20 ವಿಶ್ವಕಪ್ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್ಗಳ…
ಮಂಡ್ಯ: ಡಿ.ಕೆ. ಶಿವಕುಮಾರ್ ಅವರು ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿ.ರವಿಕುಮಾರ್…
ಮೈಸೂರು : ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಗೆ ಶಿವ ದೇವಾಲಯಗಳು ಸಂಪೂರ್ಣ ಸಜ್ಜಾಗಿವೆ. ನಗರದ ಪ್ರಮುಖ…
ಮೈಸೂರು : ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಮಂಡಿ ಪೊಲೀಸ್ ಠಾಣಾ ಅಧಿಕಾರಿಗಳು ನಡೆಸಿದ…
ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…
ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…