Andolana originals

ಹಾಕಿಯಲ್ಲಿ ಅದಿರಾ ಮಿಂಚು..!

• ಜಿ.ತಂಗಂ ಗೋಪಿನಾಥಂ

ಆ ಹುಡುಗಿಗೆ ಆಗಿನ್ನೂ 12 ವರ್ಷ ವಯಸ್ಸು. ಆಗಲೇ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಕಂಡವಳು. ತಂದೆ ತಾಯಿ ಆಕೆಯ ಕನಸ್ಸಿಗೆ ಬೆಂಬಲವಾಗಿ ನಿಂತರೂ ನೆರೆ ಹೊರೆಯವರು, ಸಂಬಂಧಿಕರಿಂದ ಹಾಕಿ ಆಡಿ ಯಾರನ್ನು ಉದ್ಧಾರ ಅ ಎಂಬ ಮೂದಲಿಕೆಯ ಮಾತು ತಪ್ಪಲಿಲ್ಲ.

ಹಾಕಿಯನ್ನೇ ಉಸಿರಾಗಿಸಿಕೊಂಡವರು ಮೈಸೂರಿನ ಡಿವೈಇಎಸ್ ಕ್ರೀಡಾ ವಿದ್ಯಾರ್ಥಿ ನಿಲಯದ ಆಟಗಾರ್ತಿ ಎಸ್.ಅದಿರಾ ಕಿತ್ತು ತಿನ್ನುವ ಬಡತನವನ್ನೂ ಲೆಕ್ಕಿಸದೇ ಹಗಲಿರುಳು ಎನ್ನದೆ ಕಠಿಣ ಅಭ್ಯಾಸ ನಡೆಸಿ ತನ್ನ 20ನೇ ವಯಸ್ಸಿನಲ್ಲಿಯೇ ಸೀನಿಯರ್ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾದರು.

ಅದಿರಾ ಸೌಲಭ್ಯ, ಪ್ರೋತ್ಸಾಹಗಳ ನಡುವೆ ಕ್ರೀಡೆಯಲ್ಲಿ ತೊಡಗಿಕೊಂಡವರಲ್ಲ. ಬಡ ಮತ್ತು ಕೆಳ ಮಧ್ಯಮ ಕುಟುಂಬದಿಂದ ಬಂದ ಆಟಗಾರ್ತಿ, ಸಿಕ್ಕಸಣ್ಣ ಅವಕಾಶವನ್ನೇ ಬಳಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹಾದಿ ಹಿಡಿದಿದ್ದಾರೆ.

ಕೊಡಗು ಜಿಲ್ಲೆಯ ಕುಟ್ಟ ಗ್ರಾಮದ ಎಸ್.ಸುರೇಶ್ ಹಾಗೂ ಸುನಂದಾ ದಂಪತಿಯ ಪುತ್ರಿ ಅದಿರಾ, ಹಾಕಿ ಬಗೆಗಿನ ವ್ಯಾಮೋಹ ಅವರನ್ನು ರಾಷ್ಟ್ರೀಯ ಕ್ರೀಡಾಕೂಟಕ್ಕೂ ಕರೆದೊಯ್ದಿದೆ. ಕುಟ್ಟದ ಸೇಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪೊನ್ನಂಪೇಟೆಯ ಕೆಪಿಎಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ವ್ಯಾಸಂಗ ಮಾಡಿದ್ದಾರೆ. ಅದಿರಾ ಅವರಲ್ಲಿನ ಓಟದ ಕಲೆಯನ್ನು ನೋಡಿ ಅವರ ಶಿಕ್ಷಕಿ ಅನುಪಮಾ ಇವರಿಗೆ ಹಾಕಿ ಆಡಲು ಸಲಹೆ ನೀಡಿ ಪ್ರೋತ್ಸಾಹಿಸಿದರು. ಅಂದಿನಿಂದ ಇವರ ಹಾಕಿಯ ಬದುಕು ಆರಂಭವಾಯಿತು.

ವಿದ್ಯಾಭ್ಯಾಸದೊಂದಿಗೆ ಕ್ರೀಡೆಗೂ ಒತ್ತು ನೀಡುತ್ತಿದ್ದ ಅದಿರಾ ಪ್ರತಿಭಾವಂತ ವಿದ್ಯಾರ್ಥಿನಿಯೂ ಹೌದು. ಮೈಸೂರಿನ ಟೇರಿಷಿಯನ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬಿಎಗೆ ಪ್ರವೇಶ ಪಡೆದರು. ಅಲ್ಲಿಯೂ ಹಾಕಿಗೆ ಉತ್ತಮ ಪ್ರೋತ್ಸಾಹ ಸಿಕ್ಕಿತು. ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ಅದಿರಾ ಹಲವಾರು ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

ಕಠಿಣ ಅಭ್ಯಾಸ
ಅದಿರಾ ನಿತ್ಯವೂ ಪೊನ್ನಂಪೇಟೆಯ ಡಿವೈಇಎಸ್ ತರಬೇತುದಾರ ಡ್ಯಾನಿ ಹಿರಪ್ಪ, ಸುಬ್ಬಯ್ಯ, ಸಂಗಪ್ಪ ಹಾಗೂ ಮೈಸೂರಿನ ಟೇರಿಷಿಯನ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಅಂತೋಣಿ ಮೋಸೆಸ್ ಹಾಗೂ ಮೈಸೂರಿನ ಡಿವೈಇಎಸ್ ತರಬೇತುದಾರ ಆರ್.ಸುಂದರೇಶ್ ಅವರ ಮಾರ್ಗದರ್ಶನವನ್ನು ಸ್ಮರಿಸುತ್ತಾರೆ. ತರಬೇತುದಾರರು ನೀಡಿದ ಕಠಿಣ ಅಭ್ಯಾಸವೇ ತಾನು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲು ಕಾರಣ ಎನ್ನುವ ಅದಿರಾ ಅವರು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮೈಸೂರಿನ ಡಿವೈಇಎಸ್ ತರಬೇತುದಾರ ಆರ್.ಸುಂದರೇಶ್ ಅವರ ಮಾರ್ಗದರ್ಶನದಲ್ಲಿ ನಿತ್ಯ ಬೆಳಿಗ್ಗೆ ಮೂರೂವರೆ ಗಂಟೆ ಹಾಗೂ ಸಂಜೆ ಮೂರೂವರೆ ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದಾರೆ.

ತಂದೆ-ತಾಯಿಯ ಪ್ರೋತ್ಸಾಹ: ಅದಿರಾ ತಂದೆ ಎಸ್.ಸುರೇಶ್ ಪೇಯಿಂಟ‌. ತಾಯಿ ಸುನಂದಾ ಕೂಲಿ ಕೆಲಸ ಮಾಡುತ್ತಾರೆ. ಪೋಷಕರು ತಮ್ಮ ಕಷ್ಟವನ್ನು ಎಂದಿಗೂ ಮಗಳ ಬಳಿ ಸುಳಿಯಲು ಬಿಟ್ಟಿಲ್ಲ. ತಮಗೆ ಕಷ್ಟವಾದರೂ ಮಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಸಾಧನೆಗೆ ಒಲಿದ ನೌಕರಿ: ಸದ್ಯ ಟೇರಿಷಿಯನ್ ಕಾಲೇಜಿನಲ್ಲಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ಎಸ್.ಅದಿರಾ ಅವರು ಅವರ ಗುರಿಯಂತೆ ಕ್ರೀಡಾ ಕೋಟಾದಿಂದ ರೈಲ್ವೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಕ್ರೀಡಾ ಕೋಟಾದಿಂದ ಭಾರತದಾದ್ಯಂತ 3 ಹುದ್ದೆಗಳು ಖಾಲಿ ಇದ್ದವು. ಅದರಿಂದ ಕರ್ನಾಟಕದಿಂದ ಅದಿರಾ ಆಯ್ಕೆಯಾಗಿದ್ದಾರೆ.

ಗೆದ್ದ ಪದಕಗಳು
• ಪೊನ್ನಂಪೇಟೆಯಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹಾಕಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ.
• 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ
• 2022ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ 12ನೇ ಹಾಕಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ
• 2023ರಲ್ಲಿ ತಮಿಳುನಾಡಿನಲ್ಲಿ ನಡೆದ ಸದರನ್‌ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಚಿನ್ನದ ಪದಕ.

ನಾನು ಹಾಕಿ ಆಡಲು ನನ್ನ ತಂದೆ, ತಾಯಿ ಮತ್ತು ತರಬೇತುದಾರರೇ ಕಾರಣ. ಇದುವರೆಗೆ ಹಲವಾರು ಹಾಕಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಗಳಿಸಿರುವುದು ಮತ್ತು ರೈಲ್ವೆ ಇಲಾಖೆಯಲ್ಲಿ ನಾಕು ದೊರೆತಿರುವುದು ಖುಷಿ ಆಗಿದೆ. ಮುಂದೆ ಭಾರತ ತಂಡದ ಪರವಾಗಿ ಆಡುವ ಗುರಿ ಇದೆ. ಅದಕ್ಕಾಗಿ ನಿತ್ಯ ಅಭ್ಯಾಸ ಮಾಡುತ್ತಿದ್ದೇನೆ. ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು.
-ಎಸ್.ಅದಿರಾ, ಹಾಕಿ ಪಟು.

ಆಂದೋಲನ ಡೆಸ್ಕ್

Recent Posts

ಮಳೆಗಾಲ ಸಮೀಪಿಸುತ್ತಿದ್ದಂತೆ ಎಚ್ಚೆತ್ತ ಅರಮನೆ ಆಡಳಿತ ಮಂಡಳಿ: ಕೋಟೆ ದುರಸ್ತಿ ಕಾರ್ಯ ಪ್ರಗತಿಯಲ್ಲಿ

ಮೈಸೂರು: ಮಳೆಗಾಲ ಸಮೀಪಿಸುತ್ತಿದ್ದಂತೆ ಮೈಸೂರು ಅರಮನೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಅರಮನೆ ಸುತ್ತ ಇರುವ ಕೋಟೆಯ ದುರಸ್ತಿಯನ್ನು ಕಾರ್ಯ ಕೈಗೊಂಡಿದೆ.…

27 mins ago

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ಸಂಗ್ರಹಿಸುವ ಯೋಜನೆಗೆ ಇರಾನ್‌ ಸಮ್ಮತಿ: ಮಿತ್ರ ರಾಷ್ಟ್ರಗಳಿಗಷ್ಟೇ ಅನ್ವಯ

ಟೆಹರಾನ್:‌ ಹಾರ್ಮುಜ್‌ ಜಲಸಂಧಿಯಲ್ಲಿ ಸುಂಕ ಸಂಗ್ರಹಿಸುವ ಹೊಸ ಯೋಜನೆಗೆ ಇರಾನ್‌ ಸಂಸತ್ತಿನ ಭದ್ರತಾ ಸಮಿತಿಯು ಅನುಮೋದನೆ ನೀಡಿದೆ. ಈ ಯೋಜನೆಯು…

37 mins ago

ಸಿಎಂ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್‌ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ: ಆರ್.‌ಅಶೋಕ್‌

ಚಿತ್ರದುರ್ಗ: ಸಿಎಂ ಸ್ಥಾನಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ ವ್ಯಂಗ್ಯವಾಡಿದ್ದಾರೆ. ಈ ಕುರಿತು…

56 mins ago

ಬಾಗಲಕೋಟೆಯಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರ ಪರವಾಗಿ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು…

1 hour ago

ಪಾಕಿಸ್ತಾನದಲ್ಲಿ ಮಜೂದ್‌ ಅಜರ್‌ ಸಹೋದರ ಅನುಮಾನಾಸ್ಪದ ಸಾವು

ಇಸ್ಲಾಮಾಬಾದ್:‌ ಭಾರತದಲ್ಲಿ ಈ ಹಿಂದೆ ನಡೆದಿದ್ದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ…

1 hour ago

ಮಾಲ್ದಾರೆ ಅರಣ್ಯ ಮಾರ್ಗದಲ್ಲಿ ಪ್ರವಾಸಿಗರಿಗೆ ಹುಲಿ ದರ್ಶನ

ಮಡಿಕೇರಿ: ಸಿದ್ದಾಪುರದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮಾಲ್ದಾರೆ ಗ್ರಾಮ ಸಮೀಪದ ಕುಶಾಲನಗರ ಹಾಗೂ ದೇವಮತಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಹುಲಿಯೊಂದು…

2 hours ago