Andolana originals

ಭಾರದ ಕಂಟೇನರ್ ಸಂಚಾರ; ಸೇತುವೆ ಕುಸಿಯುವ ಆತಂಕ

ತೆರಕಣಾಂಬಿ ಭಾಗದಲ್ಲಿ ಟಿಪ್ಪರ್‌ಗಳ ಹಾವಳಿಯಿಂದ ಬೇಸತ್ತ ಸಾರ್ವಜನಿಕರು

ಗುಂಡ್ಲುಪೇಟೆ: ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳು ಹಾಗೂ ಹೆದ್ದಾರಿಗಳಲ್ಲಿ ಹಗಲಿರುಳೂ ಸಂಚರಿಸುತ್ತಿರುವ ಟಿಪ್ಪರ್‌ಗಳು ಹಲವಾರು ಅವಾಂತರಗಳನ್ನು ಸೃಷ್ಟಿಸುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಗದಿತ ಮಿತಿಗಿಂತ ಹೆಚ್ಚಿನ ಕಲ್ಲು ತುಂಬಿಕೊಂಡು ಸಂಚರಿಸುವ ಟಿಪ್ಪರ್‌ಗಳ ಸಂಚಾರದಿಂದ ಗ್ರಾಮಾಂತರ ಪ್ರದೇಶಗಳ ರಸ್ತೆಗಳು ಗುಂಡಿ ಬಿದ್ದಿದ್ದರೆ ರಾಷ್ಟ್ರೀಯ ಹೆದ್ದಾರಿಗಳಿಗೆ ಹಾಕಿರುವ ಡಾಂಬರು ಕಿತ್ತುಬರುತ್ತಿದೆ. ಸೇತುವೆಗಳು ಓವರ್‌ಲೋಡ್ ಟಿಪ್ಪರ್‌ಗಳ ನಿರಂತರ ಸಂಚಾರದಿಂದ ಶಿಥಿಲವಾಗುತ್ತಿದ್ದು ಕುಸಿಯುವ ಹಂತಕ್ಕೆ ತಲುಪುತ್ತಿವೆ. ಗುಂಡ್ಲುಪೇಟೆ- ಮೈಸೂರು ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಒಂದು ಬದಿ ಅಗೆದ ಕಾರಣ ರಸ್ತೆ ಸಂಚಾರ ಕಿರಿದಾಗಿದೆ. ಇಲ್ಲಿ ಕಂಟೇನರ್‌ಗಳು ಅಧಿಕ ಭಾರ ಹೊತ್ತು ಸಾಗುತ್ತಿರುವುದರಿಂದ ಬೇರೆ ವಾಹನಗಳಿಗೆ ಸಮಸ್ಯೆಯಾಗುತ್ತದೆ. ಅಲ್ಲದೆ ವೇಗದ ಚಾಲನೆಯಿಂದ ಅಪಘಾತ ಹೆಚ್ಚಾಗುವ ಆತಂಕವಿದೆ.

ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ದೊರಕಿದ್ದರಿಂದ ತೆರಕಣಾಂಬಿ, ಹಿರಿಕಾಟಿ, ಅರೇಪುರ, ಕೂತನೂರು ಗುಡ್ಡ, ರಂಗೂಪುರ, ತೊಂಡವಾಡಿ ಭಾಗಗಳಲ್ಲಿಯೂ ಭಾರೀ ಪ್ರಮಾಣದ ಗಣಿಗಾರಿಕೆ ಆರಂಭಿಸಲಾಗಿದ್ದು, ಇಲ್ಲಿ ತೆಗೆದ ಕಲ್ಲುಗಳನ್ನು ಟಿಪ್ಪರುಗಳ ಮೂಲಕ ತಾಲ್ಲೂಕಿನ ನಾನಾ ಭಾಗಗಳಲ್ಲಿರುವ ಹಾಗೂ ನೆರೆಯ ನಂಜನಗೂಡಿನ ಕ್ರಷರ್‌ಗಳಿಗೆ ಕೊಂಡೊಯ್ಯಲಾಗುತ್ತಿದೆ. ಅಲ್ಲದೆ ಕರಿಕಲ್ಲು ಗಣಿಗಳಲ್ಲಿ ನಿರುಪಯುಕ್ತವಾಗಿರುವ ಕಲ್ಲು ಬಂಡೆಗಳನ್ನೂ ಸಹ ಕ್ರಷರ್‌ಗಳಿಗೆ ಸಾಗಣೆ ಮಾಡಲಾಗುತ್ತಿದೆ. ಇವುಗಳಿಗೆ ರಾಯಲ್ಟಿ ಪಾವತಿಸದೆ ರಾತ್ರಿ ೮ ಗಂಟೆಗೆ ಆರಂಭಿಸಿದರೆ ಬೆಳಿಗ್ಗೆ ೬ ಗಂಟೆವರೆಗೂ ನಿರಂತರವಾಗಿ ಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತೆರಕಣಾಂಬಿ-ಬೊಮ್ಮನಹಳ್ಳಿ ರಸ್ತೆ, ತೆರಕಣಾಂಬಿ- ಗುಂಡ್ಲುಪೇಟೆ ರಸ್ತೆಗಳು ಗುಂಡಿಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದ್ದರೆ ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ರಸ್ತೆಯ ಕಗ್ಗಳ ಗ್ರಾಮದ ಬಳಿ ಯಿರುವ ಪುರಾತನ ಸೇತುವೆಯ ಕೆಳಭಾಗದಲ್ಲಿ ಇಟ್ಟಿಗೆಗಳು ಕಳಚಿ ಬೀಳುತ್ತಿವೆ. ತೆರಕಣಾಂಬಿಯ ಗೃಹ ನಿರ್ಮಾಣ ಮಂಡಳಿಯ ರಸ್ತೆಯಲ್ಲಿ ಕಾಲಿಡಲೂ ಸಾಧ್ಯವಾಗದಂತಾಗಿದ್ದು, ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಮುಖ್ಯರಸ್ತೆಯಲ್ಲಿ ಆವರಿಸುವ ದೂಳಿನಿಂದ ಅಂಗಡಿ ಮುಂಗಟ್ಟುಗಳವರು ಉಸಿರಾಟದ ಸಮಸ್ಯೆ ಸೇರಿದಂತೆ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ. ನಿಯಮಾವಳಿಯಂತೆ ಸಿಂಗಲ್ ಆಕ್ಸೆಲ್ ವಾಹನವು ಗರಿಷ್ಟ ೧೨ ಟನ್, ಡಬಲ್ ಆಕ್ಸೆಲ್ ವಾಹನವು ೧೬.೨೦ ಟನ್ ಭಾರದ ವಸ್ತು ಸಾಗಿಸಲು ಅವಕಾಶವಿದೆ. ಆದರೆ ನಿಯಮ ಉಲ್ಲಂಘಿಸಿ ಸಾಗಣೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ರಸ್ತೆಗಳಲ್ಲಿ ಪರ್ಮಿಟ್ ಇಲ್ಲದೆ ೪೦ರಿಂದ ೫೦ ಟನ್ ಭಾರ ಹೊತ್ತ ವಾಹನಗಳು ಸಂಚರಿ ಸುತ್ತಿರುವುದು ಕಂಡುಬಂದಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಎರಡೆರಡು ಬಾರಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ.

ಆದರೆ ಒಮ್ಮೆಮ್ಮೆ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಟಿಪ್ಪರ್‌ಗಳನ್ನು ಪರಿಶೀಲಿಸಿ ನಿಯಮ ಉಲ್ಲಂಘನೆ ಬಗ್ಗೆ ದಂಡ ವಿಧಿಸುತ್ತಿದ್ದರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

” ಕಾಲ ಕಾಲಕ್ಕೆ ಭೇಟಿ ನೀಡುವ ಸಾರಿಗೆ ಅಧಿಕಾರಿಗಳು ಅಧಿಕ ತೂಕದ ಕಲ್ಲು ಸಾಗಾಣಿಕೆ ಟಿಪ್ಪರ್‌ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.”

ಗಾಯತ್ರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಾಮರಾಜನಗರ

” ಮೊದಲೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಿಸುತ್ತಿರುವ ಸರ್ಕಾರ ಹೊಸದಾಗಿ ಸೇತುವೆ ನಿರ್ಮಿಸುವುದು ದೂರದ ಮಾತಾಗಿದೆ. ರಾತ್ರಿ ವೇಳೆ ಪ್ರಖರ ಎಲ್‌ಇಡಿ ದೀಪಗಳನ್ನು ಹಾಕಿಕೊಂಡು ವೇಗವಾಗಿಹೋಗುವ ಟಿಪ್ಪರ್‌ಗಳಿಂದ ದ್ವಿಚಕ್ರ ವಾಹನ, ಕಾರುಗಳು ಸೇರಿದಂತೆ ಯಾವುದೇ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಮಾನಮನಸ್ಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡು ಜನಾಭಿಪ್ರಾಯ ರೂಪಿಸುತ್ತಿದ್ದೇವೆ.”

ಮಂಜು, ಶಿವಪುರ ಸಾರ್ವಜನಿಕರು

ಮಹೇಂದ್ರ ಹಸಗೂಲಿ

 

ಆಂದೋಲನ ಡೆಸ್ಕ್

Recent Posts

ಮಂಡಿ ಮಾರುಕಟ್ಟೆ : ಹೊರಗೆ ಥಳುಕು-ಒಳಗೆ ಹುಳುಕು

ಶಿಥಿಲಗೊಂಡಿರುವ ಸುಮಾರು 130 ವರ್ಷ ಇತಿಹಾಸ ಹೊಂದಿರುವ ಕಟ್ಟಡ ಕೆ.ಪಿ.ಮದನ್ ಮೈಸೂರು : ಪುಟ್ಟದಾದರೂ ವಿಶಿಷ್ಟ ವಾಸ್ತು ಶೈಲಿಯಿಂದ ಗಮನಸೆಳೆಯುವ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ 14 ಗುರುವಾರ

2 hours ago

ಮಣ್ಣಲ್ಲಿ ಮಣ್ಣಾದ ನಟ ದಿಲೀಪ್‌ ರಾಜ್‌

ರಾಮನಗರ: ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದ ನಟ ದಿಲೀಪ್‌ ರಾಜ್‌ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ರಾಮನಗರ ತಾಲ್ಲೂಕಿನ…

15 hours ago

ಹನೂರು: ಶ್ರೀರಂಗನಾಥಸ್ವಾಮಿ ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಅನುಮತಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದಲ್ಲಿನ ಪುರಾತನ…

16 hours ago

ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದ ಸೋನಿಯಾಗಾಂಧಿ ಮನೆಗೆ ವಾಪಸ್‌

ನವದೆಹಲಿ: ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಗಾ ಗಾಂಧೀ ಅವರು ನಿಯಮಿತ ವೈದ್ಯಕೀಯ ತಪಾಸಣೆಗೆ ತೆರಳಿದ್ದರು. ಇದೀಗ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.…

16 hours ago

ಇನ್ನೊಂದು ವಾರದೊಳಗೆ ನೀಟ್-ಯುಜಿ ಪರೀಕ್ಷೆ ದಿನಾಂಕ ಘೋಷಣೆ

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಪರಿಣಾಮ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಾತಿಗೆ ಕಳೆದ ಮೇ.3ರಂದು ನಡೆದಿದ್ದ ನೀಟ್- ಯುಜಿ ಮರುಪರೀಕ್ಷೆಯ ದಿನಾಂಕವನ್ನು…

17 hours ago