ನಮ್ಮ ಜಾತಿಯ ಜನರು ನನ್ನ ವಿದೇಶ ಪ್ರಯಾಣವನ್ನು ಕುರಿತು ಗೊಂದಲವನ್ನು ಎಬ್ಬಿಸಿದರು. ಅಲ್ಲಿಯವರೆಗೆ ಮೋಧ್ ಬನಿಯರ ಪೈಕಿ ಯಾರೂ ವಿಲಾಯತಿಗೆ ಹೋಗಿರಲಿಲ್ಲ. ನಾನು ಈ ಸಾಹಸವನ್ನು ಮಾಡುವುದಾದರೆ ನನಗೆ ತಕ್ಕ ಶಿಕ್ಷೆಯಾದೀತೆಂದು ನುಡಿದರು.
ಜಾತಿಯವರ ಪಂಚಾಯಿತಿ ಸಭೆಯಲ್ಲಿ ನಾನು ಹಾಜರಾಗಬೇಕೆಂದು ನನಗೆ ಅಪ್ಪಣೆ ಬಂತು. ನಾನು ಹಾಜರಾದೆ. ನನಗೆ ಆ ಧೈರ್ಯ ಇದ್ದಕ್ಕಿದ್ದಂತೆ ಹೇಗೆ ಬಂದಿತೆಂಬುದು ಈಶ್ವರನಿಗೇ ಗೊತ್ತು. ಅಲ್ಲಿಗೆ ಹೋಗಲು ನನಗೆ ಅಧೈರ್ಯವೇ ಇರಲಿಲ್ಲ. ಶಂಕೆಯೂ ಆಗಲಿಲ್ಲ. ಜಾತಿಯ ಮುಖಂಡ ನನ್ನ ದೂರದ ಬಂಧುವೂ ಆಗಿದ್ದರು. ನಮ್ಮ ತಂದೆಯವರೊಂದಿಗೆ ಅವರ ಸಂಬಂಧ ಚೆನ್ನಾಗಿದ್ದಿತು. ಅವರು ನನಗೆ ಹೇಳಿದರು: ‘ನೀನು ವಿಲಾಯತಿಗೆ ಹೋಗುವ ವಿಚಾರ ಸರಿಯಾದುದಲ್ಲ ವೆಂದು ಪಂಚಾಯಿತರ ಅಭಿಪ್ರಾಯ, ನಮ್ಮ ಧರ್ಮಪಾಲನೆ ಅಲ್ಲಿ ಸಾಧ್ಯವಿಲ್ಲ. ಅಲ್ಲಿ ಆಂಗ್ಲೆಯರ ಜತೆ ಆಹಾರ ಪಾನೀಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.’
ನಾನು ಹೀಗೆ ಪ್ರತ್ಯುತ್ತರವಿತ್ತೆನು: ‘ವಿಲಾಯತಿಗೆ ಹೋಗುವುದು ಯಾವ ರೀತಿಯಲ್ಲಿಯೂ ಅಧರ್ಮವಲ್ಲವೆಂದು ನಾನು ತಿಳಿದಿದ್ದೇನೆ. ನಾನು ಅಲ್ಲಿಗೆ ಹೋಗುವುದು ಬರಿಯ ವಿದ್ಯಾಧ್ಯಯನಕ್ಕಾಗಿಯೇ, ಯಾವ ವಿಷಯಗಳಲ್ಲಿ ನಿಮಗೆ ಭಯವಿದೆಯೋ ಅವುಗಳಿಂದ ದೂರವಿರುವುದಾಗಿ ತಾಯಿಗೆ ವಚನ ಕೊಟ್ಟಿದ್ದೇನೆ. ನಾನು ಅವುಗಳಿಂದ ದೂರವಿರಬಲ್ಲೆನು.’ ‘ಆದರೆ ನಾವು ನಿನಗೆ ಹೇಳುತ್ತೇವೆ. ಅಲ್ಲಿ ನಮ್ಮ ಧರ್ಮಪಾಲನೆ ಸಾಧ್ಯವಿಲ್ಲ. ನಿಮ್ಮ ತಂದೆಗೂ ನನಗೂ ಎಂತಹ ಸಂಬಂಧವಿದ್ದಿತೆಂದು ನಿನಗೂ ಗೊತ್ತು. ನಾನು ಹೇಳಿದುದನ್ನು ನೀನು ಆದರಿಸಲೇಬೇಕು’ ಎಂದು ಜಾತಿಯ ಮುಖ್ಯಸ್ಥ ಹೇಳಿದರು.
‘ಹೌದು, ನಿಮ್ಮ ಮತ್ತು ನಮ್ಮ ತಂದೆಯ ಸಂಬಂಧ ನನಗೆ ಜ್ಞಾಪಕವಿದೆ. ನೀವು ನಮ್ಮ ತಂದೆಯ ಸಮಾನರು. ಆದರೆ ಈ ವಿಷಯದಲ್ಲಿ ನಾನು ನಿರುಪಾಯ. ವಿಲಾಯತಿಗೆ ಹೋಗುವ ನನ್ನ ನಿಶ್ಚಯವನ್ನು ನಾನು ಬದಲಾಯಿಸಲಾರೆನು. ನಮ್ಮ ತಂದೆಯ ಮಿತ್ರರೂ ಸಲಹೆಗಾರರೂ ಆದ ವಿದ್ವಾಂಸ ಬ್ರಾಹ್ಮಣರೊಬ್ಬರು, ನಾನು ವಿಲಾಯತಿಗೆ ಹೋಗುವುದು ತಪ್ಪಲ್ಲವೆಂದು ಭಾವಿಸಿದ್ದಾರೆ. ತಾಯಿಯೂ, ಅಣ್ಣನೂ ನನಗೆ ಅನುಮತಿ ಕೊಟ್ಟಿದ್ದಾರೆ? ಎಂದು ನಾನು ಉತ್ತರವಿತ್ತೆನು.
‘ಹಾಗಾದರೆ ನೀನು ಪಂಚಾಯಿತಿಯ ಅಪ್ಪಣೆಯನ್ನು ನಡೆಸುವುದಿಲ್ಲವೆ?’‘ನಾನು ನಿರುಪಾಯ. ಈ ವಿಷಯದಲ್ಲಿ ಪಂಚಾಯಿತಿಯವರು ಪ್ರವೇಶಿಸುವುದು ಅವಶ್ಯವಿಲ್ಲವೆಂದು ನಾನು ಭಾವಿಸುತ್ತೇನೆ.’ ನನ್ನ ಈ ಪ್ರತ್ಯುತ್ತರದಿಂದ ಆ ಮುಖಂಡರಿಗೆ ಕೋಪ ಬಂತು. ನನ್ನನ್ನು ಕುರಿತು ನಾಲ್ಕಾರು ಕೆಟ್ಟ ಮಾತುಗಳನ್ನು ಆಡಿದರು. ನಾನು ಸುಮ್ಮನೆ ಕುಳಿತೆ. ಸೇಠರು ತಮ್ಮ ತೀರ್ಮಾನವನ್ನು ಹೇಳಿದರು: ‘ಇಂದಿನಿಂದ ಈ ಹುಡುಗನನ್ನು ಜಾತಿಬಾಹಿರನೆಂದು ಪರಿಗಣಿಸಿ. ಇವನಿಗೆ ಸಹಾಯ ಮಾಡುವವರು, ಇವನನ್ನು ಕಳುಹಿಸಲು ಬಂದರಿಗೆ ಹೋಗಿ ಬರುವವರು, ಜಾತಿಗೆ ಅಪರಾಧಿಗಳು. ಅಂತಹವರಿಗೆ ಒಂದೂಕಾಲು ರೂಪಾಯಿ ಜುಲ್ಮಾನೆ ವಿಧಿಸಲ್ಪಡುತ್ತದೆ.’
ಈ ಘಟನೆಯಿಂದ ನನ್ನ ಮೇಲೆ ಏನೂ ಪರಿಣಾಮವಾಗಲಿಲ್ಲ. ನಾನು ಸೇಠರ ಅಪ್ಪಣೆ ಪಡೆದು ಹಿಂದಿರುಗಿದೆನು. ಈ ನಿರ್ಣಯದ ಪರಿಣಾಮ ನಮ್ಮಣ್ಣನ ಮೇಲೆ ಏನಾಗುವುದೋ ಎಂದು ನಾನು ಚಿಂತಿಸಿದೆ. ಅವರಿಗೇನಾದರೂ ಭಯವಾಗುವುದೋ ಎಂದು ಯೋಚಿಸಿದೆ. ಭಾಗ್ಯವರದಿಂದ ಅವರು ವಿಚಲಿತರಾಗಲಿಲ್ಲ. ‘ಜಾತಿಯವರ ತೀರ್ಮಾನ ಹೀಗಿದ್ದರೂ ನೀನು ವಿಲಾಯತಿಗೆ ಹೋಗುವುದನ್ನು ನಾನು ತಡೆಯುವುದಿಲ್ಲ’ ಎಂದು ಬರೆದರು. ಹೀಗೆ ಸೆಪ್ಟೆಂಬರ್ ನಾಲ್ಕರಂದು (೧೮೮೮) ನಾನು ಬೊಂಬಾಯಿ ಬಂದರನ್ನು ಬಿಟ್ಟು ವಿಲಾಯತಿಗೆ ಹೊರಟೆನು.
ಮಹಾತ್ಮನ ಚಿಂತನೆಯ ಹಾದಿಯಲ್ಲಿ ನಡೆಯಬೇಕಿದೆ ನಾನು ಕಂಡ ಗಾಂಧಿಜಿಯವರಲ್ಲಿ, ಅವರ ಜೀವನದಲ್ಲಿ ನನ್ನನ್ನು ಅತ್ಯಂತ ಹೆಚ್ಚಾಗಿ ಆಕರ್ಷಿಸಿದ ವಿಷಯ ಎಂದರೆ…
ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ…
ಸ್ವಾಮಿ ಪೊನ್ನಾಚ್ಚಿ ನಾನು ಹುಚ್ಚೇಗೌಡರನ್ನು ನೋಡಿದ್ದು ಇತ್ತೀಚೆಗೆ. ಅದೂ ಅತ್ತಿಖಾನೆ ಎಸ್ಟೇಟ್ ಸ್ಥಾಪಕ ಮಾರಿಸ್ ಬಗ್ಗೆ ತಿಳಿಯಲು ಹೋದಾಗ. ಸಿಕ್ಕ…
ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತವಾಗಿ ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕಿದೆ.ಪಾದಚಾರಿ ಮಾರ್ಗಗಳ ಒತ್ತುವರಿ ಎಂದರೆ ನಾಗರಿಕರ ಸುರಕ್ಷತೆ ಕಸಿದುಕೊಂಡಂತೆ. ಇದು ಕೇವಲ…
ಮೈಸೂರಿನ ಹಯಗ್ರೀವ ಕಾಲೇಜು ಹಿಂಭಾಗದ ದಿವಾನ್ಸ್ ರಸ್ತೆಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿಗಾಗಿ ತೆಗೆದಿರುವ ಮಣ್ಣನ್ನು ರಸ್ತೆಯ ಮೇಲೆ…
ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಬಹುತೇಕ ಪ್ರದೇಶಗಳು ಬೆಟ್ಟಗುಡ್ಡ ಹಾಗೂ ಅರಣ್ಯ ಅಂಚಿನ ಪ್ರದೇಶಗಳಿಂದ ಕೂಡಿದ್ದು, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ…