Andolana originals

ದಸರಾ ಅಭಿಮನ್ಯು ಪಡೆಗೆ ಭೂರಿ ಭೋಜನ

ಗಂಡಾನೆಗಳಿಗೆ ನಿತ್ಯ ೭೫೦ ಕೆಜಿ ಮತ್ತು ಹೆಣ್ಣಾನೆಗಳಿಗೆ ೫೫೦-೬೦೦ ಕೆಜಿ ಮೇವು

ಮೈಸೂರು: ದಸರಾ ಮಹೋತ್ಸವಕ್ಕೆ ಮೈಸೂರು ಅಣಿಯಾಗುತ್ತಿದೆ. ಈಗಾಗಲೇ ಅಂಬಾವಿಲಾಸ ಅರಮನೆಯಲ್ಲಿ ದಸರಾ ಗಜಪಡೆ ಬೀಡುಬಿಟ್ಟಿದ್ದು, ಅಭಿಮನ್ಯು ಪಡೆಗೆ ದಿನದಿಂದ ದಿನಕ್ಕೆ ಆರೈಕೆ ಜೋರಾಗುತ್ತಿದೆ. ಇಂದಿನಿಂದ ವಿಶೇಷ ಮೇವಿನ ಔತಣ ಆರಂಭವಾಗಿದೆ.

ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳ ನಿತ್ಯದ ವ್ಯಾಯಾಮದ ದೃಷ್ಟಿ ಮತ್ತು ತೂಕ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕಾಂಶಯುಕ್ತ ವಿಶೇಷ ಮೇವು ನೀಡುವ ಪ್ರಕ್ರಿಯೆಗೆ ಭೀಮ ಮತ್ತು ಕಾವೇರಿ ಆನೆಗಳಿಗೆ ವಿಶೇಷ ಮೇವನ್ನು ತಿನ್ನಿಸಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಈ ಕುರಿತು ಮಾಧ್ಯಮಗಳೊಂದಿಗೆ ಡಿಸಿಎಫ್‌ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ದಸರಾ ಹಿನ್ನೆಲೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ನಿತ್ಯ ೧೦-೧೨ ಕಿಲೋ ಮೀಟರ್ ಆನೆಗಳು ನಡೆದು ವ್ಯಾಯಾಮ ಮಾಡುತ್ತಿವೆ. ಇಷ್ಟು ದೂರ ಕ್ರಮಿಸಲು ಆನೆಗಳಿಗೆ ವಿಶೇಷ ಆಹಾರ ಅವಶ್ಯವಾಗಿದ್ದು, ಎಲ್ಲ ಆನೆಗಳಿಗೂ ಯಾವುದೇ ಕೊರತೆಯಾಗದಂತೆ ನಿತ್ಯ ಭರ್ಜರಿ ಮೇವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಹೆಚ್ಚಿನ ಸಾಮರ್ಥ್ಯದ ಅವಶ್ಯಕತೆ ಇದೆ. ಆನೆಗಳ ಸಾಮರ್ಥ್ಯ ವೃದ್ಧಿಗೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಅವಲಕ್ಕಿ, ಕಾಳು, ಬೆಲ್ಲ, ಕಬ್ಬು, ಭತ್ತ, ತೆಂಗಿನಕಾಯಿ, ತರಕಾರಿ ಮಿಶ್ರಣದ ಪೌಷ್ಟಿಕ ಮೇವನ್ನು ನೀಡಲಾಗುತ್ತಿದೆ. ಗಂಡಾನೆಗಳಿಗೆ ನಿತ್ಯ ೭೫೦ ಕೆಜಿ ಮತ್ತು ಹೆಣ್ಣಾನೆಗಳಿಗೆ ೫೫೦-೬೦೦ ಕೆಜಿ ಮೇವನ್ನು ನೀಡಲಾಗುವುದು ಎಂದು ತಿಳಿಸಿದರು.

೪೫೦-೫೦೦ ಕೆಜಿ ಟನ್ ಬ್ರಾಂಚ್ ಪೌಡರ್, ೧೭೦-೨೦೦ ಕೆಜಿ ಹುಲ್ಲು, ಭತ್ತ ೨೫ ಕೆಜಿ ಮತ್ತು ಒಣ ಹುಲ್ಲು ೧೫ ಕೆಜಿ ನೀಡುತ್ತೇವೆ. ಇದರ ಜೊತೆಗೆ ವಿಶೇಷ ಮೇವನ್ನು ನಿತ್ಯ ಗಂಡಾನೆಗೆ ೧೦ರಿಂದ ೧೨ ಕೆಜಿ ಕೊಟ್ಟರೆ ಹೆಣ್ಣಾನೆಗಳಿಗೆ ಇದಕ್ಕಿಂತ ಎರಡು ಕೆಜಿಯಷ್ಟು ಕಡಿಮೆ ನೀಡಲಾಗುವುದು. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೇವು ಕೊಟ್ಟರೇ ಆನೆಗಳ ವ್ಯಾಯಾಮಕ್ಕೆ ಸಮಸ್ಯೆಯಾಗಲಿದೆ ಎಂದರು.

ಗೋಧಿ, ಬೆಣ್ಣೆ ಕ್ಯಾನ್ಸಲ್: ಯಾವ ಆನೆ ಶಿಬಿರದಲ್ಲಿಯೂ ಬೆಣ್ಣೆ ಕೊಡುತ್ತಿರಲಿಲ್ಲ. ದಸರಾದಲ್ಲಿ ಮಾತ್ರ ಕೊಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೇವಲ ನಾಲ್ಕು ಮಾತ್ರಗಳು ಬೆಣ್ಣೆ ತಿನ್ನುತ್ತಿದ್ದವು. ಬೆಣ್ಣೆಯಿಂದ ಆನೆಗಳಿಗೆ ಹೇಳಿಕೊಳ್ಳುವ ಮಟ್ಟದಲ್ಲಿ ಪೋಷಕಾಂಶಗಳು ಸೇರುತ್ತಿರಲಿಲ್ಲ. ಕೇವಲ ಸರಾಗವಾಗಿ ಲದ್ದಿ ವಿಸರ್ಜನೆಗೆ ಮಾತ್ರ ಅನುಕೂಲವಾಗುತ್ತಿತ್ತು. ಹೀಗಾಗಿ ಆನೆ ವೈದ್ಯರು ಮತ್ತು ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಈ ಬಾರಿಯಿಂದ ಗೋಧಿ ಮತ್ತು ಬೆಣ್ಣೆ ನೀಡುವುದನ್ನು ಕೈ ಬಿಡಲಾಗಿದೆ ಎಂದು ವಿವರಿಸಿದರು.

ಹುರುಳಿ ಮತ್ತು ರಾಗಿ ವಿಶೇಷ: ಕಳೆದ ದಸರಾ ಮಹೋತ್ಸವದಲ್ಲಿ ಭಾಗಿಯಾದ ಆನೆಗಳಿಗೆ ಗೋಧಿ ಬೆಣ್ಣೆಯನ್ನು ನೀಡಲಾಗುತ್ತಿತ್ತು. ಆದರೆ, ಈ ಬಾರಿಯಿಂದ ಇವೆರಡು ಮೇವನ್ನು ಕೈ ಬಿಟ್ಟಿರುವುದರಿಂದ ಹುರುಳಿ ಮತ್ತು ರಾಗಿ ಕೊಡಲಾಗುತ್ತಿದೆ. ಹುರುಳಿ ಆಹಾರದ ಜೀರ್ಣಕ್ರಿಯೆ ಸರಾಗವಾಗಿಸಲಿದೆ. ರಾಗಿ ಪೌಷ್ಟಿಕ ಆಹಾರವಾಗಿದೆ. ದಸರಾ ಮುಗಿಯುವವರೆಗೂ ಇದೆ ಮೇವನ್ನು ಕೊಡಲಾಗುವುದು ಎಂದು ಹೇಳಿದರು.

” ಪ್ರಶಾಂತನ ಆರೋಗ್ಯ ಸ್ಥಿರ: ಇಂದಿನಿಂದ ವಿಶೇಷ ಮೇವನ್ನು ಕೊಡುತ್ತಿರುವುದರಿಂದ ಆನೆಗಳ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗಲಿದೆ. ಹೀಗಾಗಿ ಪ್ರಶಾಂತ ಆನೆಗೆ ಭೇದಿ ಆಗುತ್ತಿದೆ. ಈಗ ಚೇತರಿಸಿಕೊಂಡಿದ್ದು, ಮತ್ತೆ ತಾಲೀಮಿನಲ್ಲಿ ಭಾಗಿಯಾಗುತ್ತಾನೆ.”

-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ತಾಲೀಮು ನಡೆಸಿದ ಗಜಪಡೆ: ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ ರಸ್ತೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ತಂಡ ೯ ಆನೆಗಳು ಶನಿವಾರ ಮುಂಜಾನೆ ಮತ್ತು ಸಂಜೆ ತಾಲೀಮು ಮುಂದುವರಿಸಿದರು. ಬೆಳಿಗ್ಗೆ ೬.೩೦ಕ್ಕೆ ಹೊರಟ ಆನೆಗಳು ಮೆರ ವಣಿಗೆ ಸಾಗುವ ರಸ್ತೆಯಲ್ಲಿ ಸಾಗಿ ಬನ್ನಿಮಂಟಪ ತಲುಪಿದವು.

ಪ್ರತಿದಿನ ಬೆಳಿಗ್ಗೆ-ಸಂಜೆ ವಿಶೇಷ ಆಹಾರ:  ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುತ್ತದೆ. ಬೆಳಿಗ್ಗೆ ೬.೩೦ ಮತ್ತು ರಾತ್ರಿ ೭ಕ್ಕೆ ಹೆಸರು ಕಾಳು, ಕುಸುಬಲಕ್ಕಿ, ಉದ್ದಿನ ಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ನೀಡಲಾಗುತ್ತದೆ. ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಒಂದೆರಡು ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಹುರುಳಿ ಮತ್ತು ರಾಗಿಯನ್ನು ನೀಡಲಾಗುವುದು.

ಆಂದೋಲನ ಡೆಸ್ಕ್

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

3 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

5 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

5 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

9 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

14 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

14 hours ago