Andolana originals

ಅನಘ ಗೋಲ್ಡ್ ಕಂಪೆನಿಯಿಂದ ರೈತರಿಗೆ ವಂಚನೆ

ಕಡಿಮೆ ಬಡ್ಡಿ ಆಸೆ ತೋರಿಸಿ ಅಮಾಯಕರಿಗೆ ದೋಖಾ

ಚಿನ್ನ ಬಿಡಿಸಿಕೊಳ್ಳಲು ಹೋದವರಿಗೆ ಬಾಗಿಲು ಬಂದ್

ಮೈಸೂರು: ನಿಮ್ಮ ಚಿನ್ನಕ್ಕೆ ಕಡಿಮೆ ಬಡ್ಡಿಗೆ ಹೆಚ್ಚು ಹಣ ನೀಡುತ್ತೇವೆ ಎಂದು ಹೇಳುತ್ತಲೇ ನಮ್ಮ ಚಿನ್ನಾಭರಣ ಪಡೆದು ವಂಚಿಸಿದರು. ಬ್ಯಾಂಕ್ ನಲ್ಲಿ ಇರಿಸಿದ್ದಲ್ಲಿ ಚಿನ್ನಾ ಭರಣ ಉಳಿಯುತ್ತಿತ್ತು… ಇದು ಸಾಕಷ್ಟು ರೈತರ ನೋವಿನ ನುಡಿಗಳು.

ನಿಮ್ಮ ಚಿನ್ನ ಅಡವಿಟ್ಟುಕೊಂಡು ಸಾಲ ನೀಡುತ್ತೇವೆ. ನೀವು ಯಾವುದೇ ಬ್ಯಾಂಕ್ ಅಥವಾ ಗಿರವಿ ಅಂಗಡಿಯಲ್ಲಿ ಚಿನ್ನವನ್ನು ಇಟ್ಟಿದ್ದರೂ ನಾವು ಬಿಡಿಸಿ ತಂದು ಹೆಚ್ಚಿನ ಬೆಲೆ ನೀಡುತ್ತೇವೆ ಎಂದು ಹೇಳಿ ಸಾಕಷ್ಟು ಜನರನ್ನು ವಂಚಿಸಿರುವ ಅನಘ ಗೋಲ್ಡ್ ಕಂಪೆನಿಯ ಕಥೆಯಿದು.

ಕಡಿಮೆ ಬಡ್ಡಿಗೆ ಹೆಚ್ಚಿನ ಹಣ ಸಿಗುತ್ತದೆ ಎಂಬ ಸಣ್ಣ ಆಸೆಯಿಂದ ತಮ್ಮ ಚಿನ್ನಾಭರಣಗಳನ್ನು ಗಿರವಿಯಿಟ್ಟ ಜನರು ಇದೀಗ ಚಿನ್ನ ಬಿಡಿಸಿಕೊಳ್ಳಲು ಹಣದೊಂದಿಗೆ ಬಂದರೆ ಅನಘ ಗೋಲ್ಡ್ ಕಂಪೆನಿಯ ಬೀಗ ಹಾಕಿದ ಕಚೇರಿಯನ್ನು ನೋಡಿ ದಂಗಾಗಿ ವಾಪಸ್ಸಾಗುವಂತಾಗಿದೆ.

ಅನಘ ಗೋಲ್ಡ್ ಕಂಪೆನಿಯಲ್ಲಿ ಚಿನ್ನವನ್ನು ಅಡವಿಟ್ಟ ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಜನರು ಇದೀಗ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದು ನಮ್ಮ ಚಿನ್ನವನ್ನು ನಮಗೆ ಕೊಡಿಸಿಕೊಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಕೆಲವರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ.

ರೈತರೇ ಗುರಿ: ನಗರದ ನಾರಾಯಣಶಾಸ್ತ್ರಿ ರಸ್ತೆಯ ನಂಜುಮಳಿಗೆ ವೃತ್ತದ ಬಳಿಯಲ್ಲಿರುವ ಅನಘ ಗೋಲ್ಡ್ ಕಂಪೆನಿಯಲ್ಲಿ ಸಾಕಷ್ಟು ಮಂದಿ ರೈತರು, ಮಹಿಳೆಯರು ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ಹಣ ಪಡೆದಿದ್ದಾರೆ.

ಮೂರು ತಿಂಗಳ ಒಳಗೆ ನೀವು ಯಾವುದೇ ಬಡ್ಡಿ ಇಲ್ಲದೆ ಚಿನ್ನವನ್ನು ಬಿಡಿಸಿಕೊಳ್ಳಬಹುದು ಎಂಬ ಕಂಪೆನಿಯವರ ಮಾತಿಗೆ ಮರುಳಾಗಿ ಅವರೀಗ ಮತ್ತೆ ತಮ್ಮ ಚಿನ್ನವನ್ನು ಬಿಡಿಸಿಕೊಳ್ಳಲು ಬಂದ ವೇಳೆ ಅವರ ಆಭರಣಗಳು ಮಾತ್ರ ನಾಪತ್ತೆ.

ಚಿನ್ನ ಕೊಡಿಸುವಂತೆ ಮನವಿ: ಸಾಕಷ್ಟು ಮಂದಿ ಗ್ರಾಮೀಣ ಭಾಗದ ಜನರು ಪ್ರತಿದಿನ ಅನಘ ಗೋಲ್ಡ್ ಕಂಪೆನಿ ಮಳಿಗೆಗೆ ಅಲೆದಾಡುತ್ತಿದ್ದಾರೆ. ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ೨೦ಕ್ಕೂ ಹೆಚ್ಚು ಮಂದಿಯಿಂದ ದೂರುಗಳು ದಾಖಲಾಗಿವೆ. ನಾವು ಅಡವಿಟ್ಟ ಚಿನ್ನ ಅಥವಾ ಅದರ ಮೌಲ್ಯದಷ್ಟು ಹಣವನ್ನು ಸಂಸ್ಥೆಯವರು ಹಿಂದಿರುಗಿಸುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ ಗ್ರಾಹಕರಿದ್ದಾರೆ.

ತನಿಖೆಗೆ ಆಗ್ರಹ: ಅನಘ ಗೋಲ್ಡ್ ಕಂಪೆನಿ ವಿರುದ್ಧ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಈ ಕಂಪೆನಿಯಲ್ಲಿ ನಡೆದಿರುವ ವಂಚನೆ ವಿರುದ್ಧ ಗೃಹ ಸಚಿವರು ಸಮಗ್ರ ತನಿಖೆಗೆ ಆದೇಶಿಸಬೇಕು. ಕೆಲವರು ಚಿನ್ನಾಭರಣ ಹೋದರೆ ಹೋಗಲಿ ಎಂದು ಮರ್ಯಾದೆಗೆ ಅಂಜಿ ದೂರು ನೀಡುತ್ತಿಲ್ಲ. ಅಂತಹವರಿಗೂ ನ್ಯಾಯ ಸಿಗಬೇಕು ಎಂಬುದು ಸ್ಥಳೀಯರ ಅನಿಸಿಕೆ. ಚಿನ್ನಾಭರಣಗಳನ್ನು ಅಡವಿಟ್ಟ ಕೆಲವರು ತಮ್ಮ ನೋವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು. ಕೆಲವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಾವು ಮೊದಲು ಚಿನ್ನವನ್ನು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗಿರವಿ ಇಟ್ಟಿದ್ದೆವು. ಅನಘ ಗೋಲ್ಡ್ ಕಂಪೆನಿಯಲ್ಲಿ ಹೆಚ್ಚು ಹಣ ನೀಡುತ್ತಾರೆಂದು ನಮ್ಮೂರಿನವರು ಹೇಳಿದರು. ನಂತರ ನಮಗೆ ಒಂದು ಗ್ರಾಂ ಚಿನ್ನಕ್ಕೆ ೮.೫೦೦ ರೂ. ನಂತೆ ೭೧ ಗ್ರಾಂ ಚಿನ್ನಕ್ಕೆ ೩ ಲಕ್ಷ ರೂ. ನೀಡಿದರು.

ನಾವು ಹಣ ಹೊಂದಿಸಿಕೊಂಡು ಚಿನ್ನವನ್ನು ಬಿಡಿಸಿಕೊಳ್ಳಲು ಹೋದಾಗ ಸಬೂಬು ಹೇಳುತ್ತಿದ್ದರು. ಅನುಮಾನ ಬಂದು ಮತ್ತೆ ಹೋದಾಗ ಅಂಗಡಿ ಬಂದ್ ಮಾಡಿದ್ದರು. ಇದೀಗ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನ್ಯಾಯ ಸಿಗುತ್ತದೆ ಎಂದು ನಂಬಿದ್ದೇವೆ ಎಂದು ದಾರಿಪುರ ಗ್ರಾಮದ ಪುಟ್ಟಸ್ವಾಮಿ ಹೇಳುತ್ತಾರೆ.

” ಅನಘ ಗೋಲ್ಡ್ ಕಂಪೆನಿಯಿಂದ ಯುವತಿಯೊಬ್ಬಳು ಕರೆ ಮಾಡಿ, ನಿಮ್ಮಲ್ಲಿ ಚಿನ್ನಾಭರಣವಿದ್ದರೆ ಒಂದು ಗ್ರಾಂಗೆ ೮,೦೦೦ ರೂ.ಗಳಂತೆ ಹಣ ನೀಡುತ್ತೇವೆ ಎಂದರು. ಅದರಂತೆ ನಾವು ಅಲ್ಲಿಗೆ ತೆರಳಿ ೬೨ ಗ್ರಾಂ ಚಿನ್ನಕ್ಕೆ ೨.೯೩ ಲಕ್ಷ ರೂ. ಹಣ ಪಡೆದಿದ್ದೆವು. ನಂತರ ನಮ್ಮ ಚಿನ್ನವನ್ನು ಬಿಡಿಸಿಕೊಳ್ಳಲು ಹೋದಾಗೆಲ್ಲಾ ಇಲ್ಲಸಲ್ಲದ ನೆಪಹೇಳಿ ಕಳುಹಿಸುತ್ತಿದ್ದರು. ಪತ್ರಿಕೆಯಲ್ಲಿ ವಂಚನೆ ಸುದ್ದಿ ವರದಿ ನೋಡಿ ನಾವು ಮೋಸ ಹೋಗಿರುವುದು ತಿಳಿಯಿತು. ತಕ್ಷಣ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕಂಪೆನಿ ವಿರುದ್ಧ ದೂರು ನೀಡಿದ್ದೇವೆ. ನಮಗೆ ನ್ಯಾಯ ಸಿಗಲಿದೆಯೇ ಎಂಬುದನ್ನು ನೋಡಬೇಕು.”

-ಮೂರ್ತಿ, ದಾರಿಪುರ

” ಕಂಪೆನಿಯವರಿಗೆ ನಮ್ಮ ಮೊಬೈಲ್ ನಂಬರ್ ಯಾರು ಕೊಟ್ಟರು ಎಂಬುದು ಗೊತ್ತಿಲ್ಲ. ನಮಗೆ ಕರೆ ಮಾಡಿದ ಅವರು ನಿಮ್ಮ ಚಿನ್ನಕ್ಕೆ ಹೆಚ್ಚು ಹಣ ನೀಡುತ್ತೇವೆಂದು ಹೇಳಿದರು. ಒಂದು ಗ್ರಾಂ ಚಿನ್ನಕ್ಕೆ ೮ ಸಾವಿರ ರೂ. ಎಂದು ಹೇಳಿ ೩೪ ಗ್ರಾಂ ಚಿನ್ನಕ್ಕೆ ೧.೫೦ ಲಕ್ಷ ರೂ. ನೀಡಿದ್ದರು. ನಂತರ ಚಿನ್ನ ಬಿಡಿಸಿಕೊಳ್ಳಲು ಹಣ ತೆಗೆದುಕೊಂಡು ಅನಘ ಕಂಪೆನಿಗೆ ಹೋದಾಗ ಈಗ ಹಣ ಕಟ್ಟಿ ೧೫ ದಿನಗಳ ನಂತರ ನಿಮ್ಮ ಚಿನ್ನವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದರು.ಅಷ್ಟರಲ್ಲಿ ಅವರ ಸಂಪೂರ್ಣ ವಿಚಾರ ಪತ್ರಿಕೆ ಮೂಲಕ ತಿಳಿಯಿತು. ಚಿನ್ನ ಅಡವಿಟ್ಟ ಎಲ್ಲ ಗ್ರಾಹಕರಿಗೂ ಮೋಸ ಮಾಡಿದ್ದಾರೆ. ನಮ್ಮ ಚಿನ್ನ ಮತ್ತು ಹಣವನ್ನು ವಾಪಸ್ ಕೊಡಿಸಿ ಕೊಡಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ.”

ನಾಗಮ್ಮ, ದಾರಿಪುರ

” ನಿಮ್ಮ ಚಿನ್ನಕ್ಕೆ ಹೆಚ್ಚು ಹಣ ನೀಡುತ್ತೇವೆ. ಬಡ್ಡಿ ಕೂಡ ಕಡಿಮೆ ಇದೆ ಎಂದು ಹೇಳಿಅನಘ ಗೋಲ್ಡ್ ಕಂಪೆನಿಯವರು ನಂಬಿಸಿದರು. ಅವರ ಮಾತಿಗೆ ಮರುಳಾಗಿ ನಾನು ವ್ಯಾಪಾರ ಉದ್ದೇಶಕ್ಕಾಗಿ ೨೬ ಗ್ರಾಂ ಚಿನ್ನ ಅಡವಿಟ್ಟು ಒಂದು ಲಕ್ಷ ರೂ. ಸಾಲ ಪಡೆದಿದ್ದೇನೆ. ಮತ್ತೆ ಚಿನ್ನ ಬಿಡಿಸಿಕೊಳ್ಳಲು ಹೋದಾಗ ನಮ್ಮ ಮೇಲೆಯೇ ಗಲಾಟೆ ಮಾಡಿ ವಾಪಸ್ ಕಳುಹಿಸಿದ್ದರು. ಮತ್ತೆ ಅಂಗಡಿಗೆ ಹೋದಾಗ ಬಾಗಿಲು ಮುಚ್ಚಿತ್ತು. ಹೀಗಾಗಿ ನಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಚಿನ್ನ ಕೊಡಲು ಸಾಧ್ಯವಾಗದಿದ್ದರೆ ಅದರ ಮೌಲ್ಯದಷ್ಟು ಹಣವನ್ನಾದರೂ ಕೊಡಲಿ.”

ಟಿ.ಎನ್.ಸಿದ್ದರಾಜು, ತಳೂರು

 

ಆಂದೋಲನ ಡೆಸ್ಕ್

Recent Posts

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

21 mins ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

3 hours ago

ಗಾಂಧೀ ಅಭಿಯಾನ ಅರಿವಿನ ಯಾನ | ಗಾಂಧೀಜಿ ಅಹಿಂಸಾ ಮಾರ್ಗಕ್ಕೆ ಮೈಲಾರ ಮಹಾದೇವ

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…

3 hours ago

ಗಾಂಧಿ ಅಭಿಯಾನ ಅರಿವಿನ ಯಾನ | ವಿಲಾಯತಿಗೆ ತೆರಳಲು ಅಮ್ಮ ಒಪ್ಪಿದರು

೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ…

4 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 27 ಶನಿವಾರ

7 hours ago

ಚಿರಕನಹಳ್ಳಿ ; ಬೋನಿಗೆ ಬಿದ್ದ ಹುಲಿ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…

23 hours ago