Andolana originals

ಗೂಡ್ಸ್ ವಾಹನ ಚಾಲಕರಿಗೆ ಸಮವಸ್ತ್ರದಿಂದ ವಿನಾಯಿತಿ!

ನವೀನ್ ಡಿಸೋಜ
ಮಡಿಕೇರಿ: ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಸಾಗಾಟಕ್ಕೆ ಬಳಸುವ ಲಘು ಮೋಟಾರು ಸಾರಿಗೆ ವಾಹನಗಳ ಚಾಲಕರಿಗೆ ಸಮವಸ್ತ್ರ ಧರಿಸುವುದರಿಂದ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಸ್ವಂತಕ್ಕೆ ಪಿಕ್‌ಅಪ್ ಮುಂತಾದ ವಾಹನ ಬಳಸುತ್ತಿರುವವರಿಗೆ ಅನುಕೂಲ ವಾದಂತಾಗಿದೆ.

ಸ್ವಂತ ಬಳಕೆಯ ಗೂಡ್ಸ್ ವಾಹನಗಳ ಚಾಲಕರಿಗೆ ಸಮವಸ್ತ್ರ ನಿಯಮದಿಂದ ವಿನಾಯಿತಿ ಕೊಡಿಸಬೇಕು ಮತ್ತು ತೋಟದ ಕೆಲಸಗಳಿಗೆ ಬಳಸುವ ಗೂಡ್ಸ್ ವಾಹನಗಳನ್ನು ಸ್ವಂತ ಬಳಕೆಯ ವಾಹನಗಳೆಂದು(ವೈಟ್ ಬೋರ್ಡ್) ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ಜಿಲ್ಲೆಯ ಹಲವು ಬೆಳೆಗಾರರ ಒತ್ತಾಯವಾಗಿತ್ತು. ಈ ಸಂಬಂಧ ಇತ್ತೀಚೆಗೆ ಬೆಳೆಗಾರರಾದ ಮಂಞೀರ ಕೆ. ಕುಟ್ಟಪ್ಪ, ಚೋವಂಡ ವಿಷ್ಣು, ಬೊಳ್ಳಂಡ ಶರೀನ್, ಪಾಡಿಯಂಡ ದೀಪಕ್ ಶಾಸಕ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಪೊನ್ನಣ್ಣ ಅವರು ಇಲಾಖೆಯೊಂದಿಗೆ ಚರ್ಚಿಸಿದ್ದು, ಅದರ ಫಲವಾಗಿ ಸಾರಿಗೆ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

ಕರ್ನಾಟಕ ಮೋಟಾರು ವಾಹನ ನಿಯಮಾವಳಿ ೧೯೮೯ರ ನಿಯಮ ೧೪ರಲ್ಲಿ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರಿಗೆ ಪ್ರತ್ಯಜಿಸಿರುವ ಅಧಿಕಾರದಡಿ ಕೊಡಗು ಜಿಲ್ಲೆಯ ಕೃಷಿ ಉತ್ಪನ್ನ ಪದಾರ್ಥಗಳನ್ನು ಸಾಗಿಸಲು ಬಳಸುವ ಲಘು ಮೋಟಾರು ಸಾರಿಗೆ ವಾಹನಗಳನ್ನು ಓಡಿಸುವ ಚಾಲಕರಿಗೆ ಸಮವಸ್ತ್ರ ಧರಿಸುವುದರಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಈ ವಿನಾಯಿತಿ ಕೃಷಿ ಉತ್ಪನ್ನ ಸಾಗಿಸುವ ಲಘು ಮೋಟಾರು ಸಾರಿಗೆ ವಾಹನಗಳ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಎಂ. ಎಂ. ಯೋಗೀಶ್ ಅಧಿಸೂಚನೆ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿರುವ ಒಟ್ಟು ೭,೯೬೯ ಲಘು ಮೋಟಾರು ಸಾರಿಗೆ ವಾಹನಗಳಿದ್ದು, ಇವುಗಳಲ್ಲಿ ಸುಮಾರು ಶೇ. ೭೫ ರಷ್ಟು ವಾಹನಗಳು ಸ್ವಂತ ಬಳಕೆಯದ್ದೇ ಆಗಿವೆ. ಕಾಫಿ ತೊಟ ಹೊಂದಿರುವವರಿಗೆ ಕಾಫಿ ಸಾಗಿಸಲು, ಗೊಬ್ಬರ ಕೊಂಡೊಯ್ಯಲು, ನೀರಿನ ಪೈಪ್ ಸಾಗಣೆ ಸೇರಿದಂತೆ ಹಲವು ಕೆಲಸಗಳಿಗೆ ಈ ವಾಹನಗಳು ಬಳಕೆಯಾಗುತ್ತವೆ.

ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲದ ಕಾಫಿ ತೋಟ ಹೊಂದಿರುವವರೆಲ್ಲರೂ ಇಂತಹ ವಾಹನಗಳನ್ನು ಹೊಂದಿರುತ್ತಾರೆ. ಇಂತಹ ಬೆಳೆಗಾರರಿಗೆ ಎಲ್ಲ ಸಮಯದಲ್ಲಿಯೂ ಸಮವಸ್ತ್ರ ಧರಿಸಿ ವಾಹನ ಓಡಿಸುವುದು ಕಷ್ಟವಾಗುತ್ತದೆ. ಸಮವಸ್ತ್ರ ಧರಿಸದೇ ಹೋದಾಗ ಟ್ರಾಫಿಕ್ ಪೊಲೀಸರು ನಿಲ್ಲಿಸಿ ಪ್ರಶ್ನಿಸುವ ಪ್ರಸಂಗಗಳು ಎದುರಾಗುತ್ತವೆ. ಹೀಗಾಗಿ ಈ ಆದೇಶದಿಂದ ವಾಹನ ಹೊಂದಿರುವ ಎಲ್ಲ ಬೆಳೆಗಾರರಿಗೂ ಅನುಕೂಲವಾದಂತಾಗಿದೆ.

ಪಿಕ್‌ಅಪ್‌ನಂತಹ ವಾಹನಗಳು ಈಗ ಕೇವಲ ಸರಕು ಸಾಗಣೆಗೆ ಮಾತ್ರವಲ್ಲದೇ ಸಂಚಾರಕ್ಕೂ ಅನುಕೂಲವಾಗುವಂತೆ ಬರುತ್ತಿವೆ. ತೋಟದಲ್ಲಿ ಕೆಲಸವಿದೆ ಎಂದರೆ ಬೆಳೆಗಾರರು ಅದೇ ವಾಹನಗಳಲ್ಲಿ ಹೋಗುತ್ತಾರೆ. ಕೆಲವೊಮ್ಮೆ ಪಟ್ಟಣಕ್ಕೆ ಬರಬೇಕೆಂದರೂ ಅದರಲ್ಲೇ, ತೆರಳುತ್ತಾರೆ. ಆದರೆ ಈ ವಾಹನಗಳನ್ನು ಬಾಡಿಗೆ ನೀಡುವುದಿಲ್ಲ. ಇಂತಹ ವಾಹನಗಳನ್ನು ಡೀಸೆಲ್ ತುಂಬಿಸುವುದಕ್ಕೋ, ಗೊಬ್ಬರ ಕೊಂಡೊ ಯ್ಯುವುದಕ್ಕೋ ನಗರ, ಪಟ್ಟಣಕ್ಕೆ ತಂದಾಗ ಅವರನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸುವುದು, ಸಮವಸ್ತ್ರ ಹಾಕಿಲ್ಲವೆಂದು ದಂಡ ವಿಧಿಸುವುದು ನಡೆಯುತ್ತಿತ್ತು. ಇದೀಗ ಹೊಸ ಆದೇಶದಿಂದ ಬೆಳೆಗಾರರು ನಿಟ್ಟುಸಿರುಬಿಟ್ಟಿದ್ದಾರೆ.

ಯಾವ ವಾಹನಗಳಿಗೆ ಅನ್ವಯ?
ಲಘು ಮೋಟಾರು ಸಾರಿಗೆ ವಾಹನಗಳೆಂದರೆ ೭. ೫ ಟನ್ ಒಳಗಿನ ವಾಹನಗಳಾಗಿದ್ದು, ಇದರಲ್ಲಿ ಮಹೀಂದ್ರಾ ಪಿಕ್-ಅಪ್, ಬೊಲೇರೊ ಪಿಕ್ ಅಪ್, ಇಸುಜು ಎಸ್. ಕ್ಯಾಬ್, ಟಾಟಾ ಯೋಧ ಹಾಗೂ ಇದಕ್ಕಿಂತ ಸಣ್ಣ ಸರಕು ವಾಹನಗಳು ಸೇರುತ್ತವೆ. ಸದ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಸಂಚರಿಸುವ ಕೃಷಿ ಉತ್ಪನ್ನಗಳ ಸಾಗಣೆಗೆ ಬಳಸುವ ವಾಹನಗಳ ಚಾಲಕರಿಗಷ್ಟೇ ಸಮವಸ್ತ್ರ ವಿನಾಯಿತಿ ಅನ್ವಯಿಸುತ್ತದೆ.

ವೈಟ್ ಬೋರ್ಡ್ ನೋಂದಣಿಗೆ ಬೇಡಿಕೆ ಸರಕು ವಾಹನಗಳಿಗೆ ಹಳದಿ ಬೋರ್ಡ್ ಅಳವಡಿಸುವುದರಿಂದ ಪ್ರತಿ ವರ್ಷ ಎಫ್‌ಸಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದ್ದು, ಸ್ವಂತ ಬಳಕೆಗೆ ಉಪಯೋಗಿಸುವ ವಾಹನಗಳಿಗೆ ಬಿಳಿ ಬೋರ್ಡ್ ನೋಂದಣಿ ಮಾಡಿಸಲು ಅವಕಾಶ ನೀಡಬೇಕು. ವಿಶೇಷವಾಗಿ ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಇತರೆಡೆ ಇದನ್ನು ಜಾರಿಗೆ ತರಬೇಕು ಎಂಬುದೂ ಬೆಳೆಗಾರರ ಬೇಡಿಕೆಯಾಗಿದೆ.

ನಮ್ಮ ಬೇಡಿಕೆ ಈಡೇರಿಸಲು ಕಾರಣರಾದ ಶಾಸಕ ಎ. ಎಸ್ ಪೊನ್ನಣ್ಣ ಅವರಿಗೆ ಧನ್ಯವಾದಗಳು. ಈಗಿನ ಗೂಡ್ಸ್ ವಾಹನ ಗಳು ಅತ್ಯುತ್ತಮ ಸೀಟಿಂಗ್ ನೊಂದಿಗೂ ಬರುತ್ತಿದ್ದು ನಾಲ್ಕು ಮಂದಿ ಪ್ರಯಾಣಿಸಬಹುದು. ಹೀಗಾಗಿ ನಾವು ಕೆಲವೊಮ್ಮೆ ಅದರಲ್ಲಿಯೇ ಪ್ರಯಾಣವೂ ಮಾಡುತ್ತೇವೆ. ಆದ್ದರಿಂದ ಇಂತಹ ವಾಹನಗಳಿಗೆ ವೈಟ್ ಬೋರ್ಡ್ ರಿಜಿಸ್ಟ್ರೇಷನ್ ಮಾಡಿಸಲು ಅವಕಾಶ ನೀಡಬೇಕೆಂಬುದೂ ನಮ್ಮ ಬೇಡಿಕೆಯಾಗಿದೆ. –ಮಂಞೀರ ಕೆ. ಕುಟ್ಟಪ್ಪ, ಬೆಳೆಗಾರ.

ಆಂದೋಲನ ಡೆಸ್ಕ್

Recent Posts

ಫೆ.17ರಂದು ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್‌ ಪ್ರಮಾಣವಚನ ಸ್ವೀಕಾರ: ಪ್ರಧಾನಿ ಮೋದಿಗೆ ಆಹ್ವಾನ

ಢಾಕಾ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷ ತಾರಿಕ್‌ ರೆಹಮಾನ್‌ ಅವರು ಫೆಬ್ರವರಿ.17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ…

43 mins ago

ಮಾದಪ್ಪನ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಶಿವಕುಮಾರ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ…

51 mins ago

ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಸಿಐಡಿ ಕಸ್ಟಡಿಗೆ

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಅವರನ್ನು ಸಿಐಡಿ ಕಸ್ಟಡಿಗೆ ವಹಿಸಿ…

2 hours ago

ಸಾಲೂರು ಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಶಿವಕುಮಾರ್‌ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿಯ ಜಾತ್ರಾ…

2 hours ago

ನಂಜನಗೂಡು ತಾಯಿ-ಮಕ್ಕಳ ಆಸ್ಪತ್ರೆಗೆ ಶಾಸಕ ದರ್ಶನ್ ದಿಢೀರ್ ಭೇಟಿ, ಪರಿಶೀಲನೆ

ನಂಜನಗೂಡು: ನಂಜನಗೂಡು ಪಟ್ಟಣದಲ್ಲಿರುವ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಕಳೆದ ತಡರಾತ್ರಿ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ದಿಢೀರ್…

2 hours ago

ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್:‌ ಗಣಿಗ ರವಿಕುಮಾರ್‌ ವ್ಯಂಗ್ಯ

ಮಂಡ್ಯ: ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಹೈಕಮಾಂಡ್.‌ ನಮಗೆ ಹೈಕಮಾಂಡ್‌ ನೋಟಿಸ್‌ ಕೊಡಬಹುದು. ಆದರೆ ಹೈಕಮಾಂಡ್‌ಗೆ ನಾವು ನೋಟಿಸ್‌ ಕೊಡಲು…

2 hours ago