ಲಕ್ಷ್ಮೀಕಾಂತ್ ಕೊಮಾರಪ್ಪ
ಸೋಮವಾರಪೇಟೆ: ತಾಲ್ಲೂಕಿನ ಬಹುತೇಕ ಪ್ರದೇಶಗಳು ಬೆಟ್ಟಗುಡ್ಡ ಹಾಗೂ ಅರಣ್ಯ ಅಂಚಿನ ಪ್ರದೇಶಗಳಿಂದ ಕೂಡಿದ್ದು, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿದೆ. ವಿಶೇಷವಾಗಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳು ಪಶ್ಚಿಮಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಗಾಳಿ-ಮಳೆಗೆ ಮರಗಳು, ಮರದ ರೆಂಬೆ-ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಬೀಳುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಹಳ್ಳಿ, ಕುಡಿಗಾಣ, ಕೊತ್ನಳ್ಳಿ, ಹೆಗ್ಗಡಮನೆ, ಪುಷ್ಪಗಿರಿ, ಮಲ್ಲಹಳ್ಳಿ,ಕೂತಿ, ನಗರಹಳ್ಳಿ, ತೋಳುರು ಶೆಟ್ಟಳ್ಳಿ, ಸೋಮವಾರಪೇಟೆ ಕಸಬಾ ಹೋಬಳಿಯ ಸೂರ್ಲಬ್ಬಿ, ಕಿರಗಂದೂರು, ತಾಕೇರಿ ಗ್ರಾಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಒಂದು ವಿದ್ಯುತ್ ಕಂಬದ ಮೇಲೆ ಮರ ಬಿದ್ದರೆ ಸಂಪರ್ಕ ಮಾರ್ಗದಲ್ಲಿನ ಹಲವು ಕಂಬಗಳು ಹಾನಿಗೊಳಗಾಗಿ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತದೆ. ಇದರಿಂದ ಗ್ರಾಮೀಣ ಭಾಗದ ಜನರು ರಾತ್ರಿ ವೇಳೆ ಕತ್ತಲೆಯಲ್ಲೇ ಕಾಲ ಕಳೆಯುವಂತಾಗುತ್ತದೆ. ವಿದ್ಯುತ್ ಸಮಸ್ಯೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ಓದಿಕೊಳ್ಳಲು ಬೆಳಕಿನ ಸಮಸ್ಯೆ ಎದುರಾಗುತ್ತದೆ. ಒಂದೆರಡು ದಿನಗಳ ಕಾಲ ತಾತ್ಕಾಲಿಕವಾಗಿ ಸೋಲಾರ್ ದೀಪ, ಇತರ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ, ನಿರಂತರವಾಗಿ ಮಳೆ ಆದರೆ ಸೋಲಾರ್ ಲ್ಯಾಂಪ್ಗಳು ಚಾರ್ಜ್ ಆಗದೆ ಮತ್ತಷ್ಟು ಸಮಸ್ಯೆ ಎದುರಾಗುತ್ತದೆ. ವಿದ್ಯಾರ್ಥಿಗಳು ಮೇಣದಬತ್ತಿಯ ಬೆಳಕಿನಲ್ಲಿ ಓದಲು ಸಾಧ್ಯವಾಗುವುದಿಲ್ಲ.
ಇಂಟರ್ನೆಟ್ ಸಂಪರ್ಕವೂ ಕಡಿತ…:
ಬಿಸಿಎ ಮುಂತಾದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳು ಆನ್ಲೈನ್ನಲ್ಲೇ ಲಭ್ಯವಿರುವುದರಿಂದ ಇಂಟರ್ನೆಟ್ ಅತ್ಯಗತ್ಯವಾಗಿದೆ. ಆದರೆ, ವಿದ್ಯುತ್ ಸಮಸ್ಯೆಯಿಂದ ಕಂಪ್ಯೂಟರ್ ಬಳಕೆಯೂ ಅಸಾಧ್ಯವಾಗಿದೆ. ಒಂದು ದಿನ ಹೇಗೋ ಯುಪಿಎಸ್ನಲ್ಲಿ ಕಂಪ್ಯೂಟರ್ ಬಳಸಿದರೂ ಮರು ದಿನ ಅದೂ ಸ್ಥಗಿತವಾಗುತ್ತದೆ. ಇದರೊಂದಿಗೆ ಇಂಟರ್ನೆಟ್ ಸಂಪರ್ಕವೂ ಸ್ಥಗಿತಗೊಳ್ಳುವುದರಿಂದ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಈ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ, ಸಿಇಟಿ ಮುಂತಾದ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳೂ ಈ ಸಮಸ್ಯೆ ಎದುರಿಸುವಂತಾಗಿದೆ.
“ಮನೆಯಲ್ಲಿ ಅಭ್ಯಾಸ ನಡೆಸುವ ಸಲುವಾಗಿ ಶಿಕ್ಷಕರು ಹೋಂ ವರ್ಕ್ ಕೊಡುತ್ತಾರೆ. ಜತೆಗೆ ಮನೆಯಲ್ಲಿ ಪಠ್ಯ ವಿಷಯ ಸೇರಿದಂತೆ ನೋಟ್ಬುಕ್ಗಳನ್ನೂ ಓದಿಕೊಳ್ಳಬೇಕಾಗುತ್ತದೆ. ಆದರೆ, ಮಳೆಗಾಲದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುವುದರಿಂದ ಮನೆಯಲ್ಲಿ ರಾತ್ರಿ ವೇಳೆ ಓದಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಓದಲು ನಮಗೆ ತೊಂದರೆಯಾಗುತ್ತದೆ.”
-ಎ.ಎಲ್.ಯುಗನ್, ೬ನೇ ತರಗತಿ ವಿದ್ಯಾರ್ಥಿ, ಕಿರಗಂದೂರು ಗ್ರಾಮ
” ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಹಾಗೂ ಗಾಳಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಹೆಚ್ಚಿರುವ ಕಾರಣ ಮೈಸೂರು, ಮಂಡ್ಯ ಭಾಗದಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ತೊಂದರೆ ಉಂಟಾಗದಂತೆ ತ್ವರಿತವಾಗಿ ಕಾರ್ಯನಿರ್ವಹಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.”
– ಒ.ಕೆ.ವಿನಯ್ ಕುಮಾರ್, ಎಇಇ, ಸೆಸ್ಕ್, ಸೋಮವಾರಪೇಟೆ
” ಕುಡಿಗಾಣ ವ್ಯಾಪ್ತಿಯಲ್ಲಿ ಗಾಳಿ-ಮಳೆಯ ಸಂದರ್ಭದಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ. ಒಮ್ಮೆ ಈ ರೀತಿಯ ಅವಘಡ ಸಂಭವಿಸಿದರೆ ವಾರಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತದೆ. ಇದರಿಂದ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತದೆ. ರಾತ್ರಿ ವೇಳೆಯಲ್ಲಿ ಓದಲು ಸಾಧ್ಯವಾಗದೆ ಪರೀಕ್ಷಾ ತಯಾರಿಗೂ ಅಡಚಣೆಯಾಗುತ್ತದೆ. ಆದ್ದರಿಂದ ವಿದ್ಯುತ್ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಂಬದ ಪಕ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕೂಡಲೇ ತೆರವುಗೊಳಿಸಬೇಕು.”
-ಶ್ರೇಯಾ, ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿನಿ, ಕುಡಿಗಾಣ ಗ್ರಾಮ
ಹೇಮಂತ್ ಕುಮಾರ್ ಜಾತಿ, ಆದಾಯ ಪ್ರಮಾಣ ಪತ್ರಕ್ಕೂ ಅಲೆದಾಟ; ಸರತಿ ಸಾಲಿನಲ್ಲಿ ನಿಂತು ಜನರ ಗೊಣಗಾಟ ಮಂಡ್ಯ: ತಾಲ್ಲೂಕು ಕೇಂದ್ರವಾದ…
ಎಂ.ನಾರಾಯಣ ತಿ.ನರಸೀಪುರ ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ; ಒಣಗುತ್ತಿರುವ ಬೆಳೆ ತಿ.ನರಸೀಪುರ: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ…
ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ಟಯೋಟ ಕಾರು, ಪಿಸ್ತೂಲ್ ವಶ: ಎಸ್ಪಿ ಮಂಡ್ಯ : ನಗರದ ಹೊರವಲಯದ ಹೆದ್ದಾರಿಯಲ್ಲಿ ಜು.2ರ ಗುರುವಾರ…
ಚಿತ್ರೋದ್ಯಮಿಗಳೂ ಆಗಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಮೊನ್ನೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರ…