Andolana originals

ಎವರೆಸ್ಟ್ ಏರಿದ ಮೈಸೂರಿನ ವೈದ್ಯೆ; ಪ್ರಪಂಚದ ಅತಿ ಎತ್ತರದ ಶಿಖರವೇರಿದ ಡಾ.ಉಷಾ ಹೆಗ್ಡೆ

ಮೈಸೂರು: ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…. ಡಾ.ರಾಜ್‌ಕುಮಾರ್ ರವರ ಸಿನಿಮಾವೊಂದರ ಗೀತೆಯ ಈ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ವೈದ್ಯ ವೃತ್ತಿಯ ಜೊತೆ ಜೊತೆಗೆ ಸಾಧನೆಯ ಉತ್ತುಂಗದ ಗೌರಿಶಂಕರ ಶಿಖರ (ಮೌಂಟ್ ಎವರೆಸ್ಟ್ ) ಏರಿ ಸಾಧನೆ ಮೆರೆದಿದ್ದಾರೆ ನಗರದ ಹೆಸರಾಂತ ವೈದ್ಯ ಕುಟುಂಬದ ಈ ವೈದ್ಯೆ!

ಈ ಸಾಧನೆ ಮಾಡಿದವರು ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿರುವ ಡಾ.ಉಷಾ ಹೆಗ್ಡೆ ಅವರು. ಬೇಸ್ ಕ್ಯಾಂಪ್‌ನಲ್ಲಿ ಒಂದು ತಿಂಗಳ ಕಾಲ ತರಬೇತಿಯೊಂದಿಗೆ ಏ.4ರಂದು ಪರ್ವತಾರೋಹಣ ಆರಂಭಿಸಿ, ಅಂತಿಮವಾಗಿ ಮೇ 19ರಂದು ಮೌಂಟ್ ಎವರೆಸ್ಟ್‌ನ 29,031 ಅಡಿ ಎತ್ತರದ ತುತ್ತ ತುದಿಯನ್ನೇರಿ, ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇದು ಸುಲಭದ ಹಾದಿಯಾಗಿರಲಿಲ್ಲ. ಮೊದಲಿಗೆ 17,598 ಅಡಿ ಎತ್ತರದಲ್ಲಿರುವ ಬೇಸ್ ಕ್ಯಾಂಪ್‌ನಲ್ಲಿ ತರಬೇತಿ ಪಡೆದು ತಮ್ಮ ಗುರಿ ಸಾಧನೆಗೆ ಸಜ್ಜಾದರು.

ಎರಡನೇ ಹಂತವಾಗಿ ಕ್ಯಾಂಪ್ 1ಕ್ಕೆ (19,685 ಅಡಿ) ತಲುಪಿ ಮುಂದಿನ ಹಂತಕ್ಕೆ ಸಜ್ಜಾಗಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕು. ನಂತರ ಆರಂಭವಾಗುವುದೇ ಕಠಿಣ ಹಾದಿ, ಅಲ್ಲಿಂದ ಹಂತ ಹಂತವಾಗಿ ಕ್ಯಾಂಪ್ 2 (21,000 ಅಡಿ) ಕ್ಯಾಂಪ್ 3 (23,625 ಅಡಿ), ಕ್ಯಾಂಪ್ 4 (26,085 ಅಡಿ) ರ ಅಪಾಯಕಾರಿ ಹಾದಿಗಳನ್ನು ಸಾಗಿ ಅಂತಿಮವಾಗಿ ಎವರೆಸ್ಟ್‌ನ ಸಮ್ಮಿಟ್ (29,029 ಅಡಿ) ಅನ್ನು ತಲುಪಿದ್ದಾರೆ.

ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿರುವ ಡಾ.ಉಷಾ ಹೆಗ್ಡೆ ಅವರು, ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಐರನ್ ಮ್ಯಾನ್ ಪ್ರಶಸ್ತಿಯನ್ನು ಪಡೆದ ಮೊದಲ ಮೈಸೂರು ಮಹಿಳೆ, ಬೆಂಗಳೂರು, ಮುಂಬೈ ಮ್ಯಾರಥಾನ್ ಗಳಲ್ಲಿ ಹಲವು ಬಾರಿ ಭಾಗವಹಿಸಿದ್ದಾರೆ. ಮುಂದೊಂದು ದಿನ ಪ್ರಪಂಚದ ಅತ್ಯಂತ ಎತ್ತರದ ಹಿಮಚ್ಛಾಧಿತ ಗಿರಿಶಿಖರ ಏರುವ ಕನಸಿನೊಂದಿಗೆ ಸಾಹಸಮಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನಸು ನನಸಾಗಿಸಿಕೊಂಡರು.

ತಮ್ಮ ಸಾಹಸಮಯ ಕಾರ್ಯಕ್ಕೆ ದೇಶ-ವಿದೇಶಗಳಲ್ಲಿ ಸಾಧನೆ ಮೆರೆಯುತ್ತಾ, ಅಂತಿಮವಾಗಿ 2024ರ ಏಪ್ರಿಲ್ 3ರಂದು ಮೈಸೂರಿನಿಂದ ಹಿಮಾಲಯದತ್ತ ಹೊರಟವರು ನೇಪಾಳದ ಕಠ್ಮಂಡುವಿನಲ್ಲಿ ಪ್ರಾಥಮಿಕ ಸಿದ್ಧತೆಗಳನ್ನು ಮುಗಿಸಿ, ಬೇಸ್ ಕ್ಯಾಂಪ್‌ನಲ್ಲಿ ಒಂದು ತಿಂಗಳ ಕಾಲ ತರಬೇತಿಯೊಂದಿಗೆ ಪರ್ವತಾರೋಹಣ ಆರಂಭಿಸಿ, ಅಂತಿಮವಾಗಿ ಮೇ 19ರಂದು ಮೌಂಟ್ ಎವರೆಸ್ಟ್‌ನ 29000 ಅಡಿ ಎತ್ತರದ ತುತ್ತ ತುದಿಯನ್ನೇರಿ, ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರು ಮೌಂಟ್ ಎವರೆಸ್ಟ್‌ನಿಂದ ಕೆಳಗಿಳಿದ ಮೇಲಷ್ಟೇ ಪೂರ್ಣ ಮಾಹಿತಿ ಸಿಗಲು ಸಾಧ್ಯ ಎಂದು, ಗೌರಿಶಂಕರದ ತುತ್ತ ತುದಿಯನ್ನು ಏರಿದ್ದನ್ನು ಖಚಿತಪಡಿಸಿದ ಕುಟುಂಬದವರು ಆಂದೋಲನ ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಎಸ್.ಚಿಕ್ಕಪ್ಪ ಮತ್ತು ಗಿರಿಜಾ ದಂಪತಿಗೆ 1972ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಬೆಂಗಳೂರಿನಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ ಬಳಿಕ ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಪದವಿ ನಂತರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ಓರಲ್ ಪೆಥಾಲಜಿ ಮತ್ತು ಮೈಕ್ರೋಬಯಾಲಜಿಯಲ್ಲಿ ಎಂಡಿಎಸ್ ಪದವಿ ಪೂರೈಸಿದ್ದಾರೆ. 1998ರ ಜುಲೈ 1ರಂದು ಮೈಸೂರಿನ ಜೆಎಸ್ ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿ, ಹಂತ ಹಂತವಾಗಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸುತ್ತಾ 2016ರಿಂದ ಓರಲ್ ಪೆಥಾಲಜಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿ ವೃತ್ತಿ ಜೀವನ ಆರಂಭಿಸಿದ ಮರು ವರ್ಷವೇ ನಗರದ ಹೆಸರಾಂತ ವೈದ್ಯರಾದ ಡಾ.ಜಿ.ಎಸ್.ಹೆಗ್ಡೆ ಅವರ ಪುತ್ರ ಡಾ. ಅಜಯ್ ಹೆಗ್ಡೆ ಅವರನ್ನು ವಿವಾಹವಾದರು. ಡಾ.ಉಷಾ ಹೆಗ್ಡೆ ಮತ್ತು ಡಾ.ಅಜಯ್ ಹೆಗ್ಡೆ ದಂಪತಿಗೆ ಆಕರ್ಶ್ ಮತ್ತು ಆರ್ಯವ್ ಎಂಬ ಪುತ್ರರಿದ್ದು ಇಬ್ಬರೂ ಎಂಬಿಬಿಎಸ್ ಮಾಡುತ್ತಿದ್ದಾರೆ.

ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಉಷಾ ಹೆಗ್ಡೆ ಅವರಿಗೆ ಮೌಂಟ್ ಎವರೆಸ್ಟ್ ಏರುವುದು ಜೀವನದ ಗುರಿಯಾಗಿತ್ತು. ಅದು ಈಗ ಈಡೇರಿದೆ. ಹವಾಮಾನ ವೈಪರೀತ್ಯಗಳ ನಡುವೆಯೂ ಗುರಿ ಸಾಧಿಸಿದ್ದಾರೆ. ಅವರು ತೆರಳಿದ್ದು ಏಕಾಂಗಿಯಾಗಿ, ಯಾವುದೇ ತಂಡದಲ್ಲಿರಲಿಲ್ಲ. ಇದು ಅಪೂರ್ವ ಸಾಧನೆ. ಸ್ವಲ್ಪ ಕಣ್ಣಿಗೆ ತೊಂದರೆಯಾಗಿದ್ದು ಉಳಿದಂತೆ ಯಶಸ್ವಿಯಾಗಿ ಹಿಂತಿರುಗಿದ್ದಾರೆ.
ಈ ಡಾ.ಅಜಯ್ ಹೆಗ್ಡೆ, ಖ್ಯಾತ ವೈದ್ಯ

ಮೌಂಟ್ ಎವರೆಸ್ಟ್ ಏರಿದ ಮೈಸೂರಿನ ಎರಡನೇ ಮಹಿಳೆ ಡಾ.ಉಷಾ ಹೆಗ್ಡೆ. ಕನ್ನಡತಿ ಹಾಗೂ ಮೈಸೂರಿನವರೇ ಆದ ಸ್ಮಿತಾ ಲಕ್ಷ್ಮಣ್ ಮೊದಲ ಮಹಿಳೆಯಾದರೆ, ಉಷಾ ಹೆಗ್ಡೆ ಎರಡನೇಯವರು. ಆದರೆ ಸ್ಮಿತಾ ಲಕ್ಷ್ಮಣ್ ಸೇನಾ ಅಧಿಕಾರಿಯಾಗಿದ್ದರೆ, ಉಷಾ ಹೆಗ್ಡೆ ವೈದ್ಯೆ. ಈ ಇಬ್ಬರೂ ಮೈಸೂರಿನವರೇ ಎಂಬುದು ಸಂತಸದ ವಿಷಯ. ಎವರೆಸ್ಟ್ ಏರಲು ಕನಿಷ್ಠ 40-45 ದಿನ ಗಳು ಬೇಕಾಗುತ್ತದೆ. ಇದಕ್ಕಾಗಿ ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇದೆಲ್ಲವನ್ನೂ ಮೀರಿ ಈ ಸಾಧನೆ ಮಾಡಿರುವುದು ಸಂತಸದ ವಿಷಯ.
-ಸೋಲಂಕಿ, ಟೈಗರ್

ಗಿರೀಶ್ ಹುಣಸೂರು

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ನಿವಾಸಿಯಾದ ನಾನು 1999ರಿಂದ ಪತ್ರಕರ್ತನಾಗಿ ಕಾರ್ಯ ನಿರ್ವಹಣೆ, 1999ರಿಂದ ಮೂರು ವರ್ಷ ವಿಜಯಕರ್ನಾಟಕ ಪತ್ರಿಕೆ ಅರೆಕಾಲಿಕ ವರದಿಗಾರ, ಮೈಸೂರು ಮಿತ್ರ, ಬಳಿಕ ಮೈಸೂರಿನ ಮಹಾನಂದಿ, ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹೊಸದಿಗಂತ, ಉದಯವಾಣಿ ಪತ್ರಿಕೆಗಳಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಣೆ, ಉದಯವಾಣಿ ಪತ್ರಿಕೆ ಮೈಸೂರು ಬ್ಯುರೋ ಮುಖ್ಯಸ್ಥನಾಗಿ ಆರು ವರ್ಷ ಕಾರ್ಯನಿರ್ವಹಣೆ ಮಾಡಿದ್ದು, ಕಳೆದ ಒಂದೂವರೆ ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ.

Recent Posts

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿಕೆಶಿ

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಸದಾಶಿವನಗರದಲ್ಲಿರುವ ತಮ್ಮ…

1 hour ago

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…

3 hours ago

ಓದುಗರ ಪತ್ರ: ಮಹಿಳಾ ಸಿಬ್ಬಂದಿ ಲಂಚದ ಮಸಿ ಅಂಟಿಸಿಕೊಳ್ಳದಂತೆ ಎಚ್ಚರ ವಹಿಸಬೇಕು

ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…

3 hours ago

ಓದುಗರ ಪತ್ರ: ಅಡಕೆ ಬೆಳೆಗಾರರ ಹಿತವೂ ಮುಖ್ಯವಲ್ಲವೇ?

ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…

3 hours ago

ಓದುಗರ ಪತ್ರ: ಈ ಬಾರಿಯ ದಸರಾ ಉದ್ಘಾಟನೆಗೆ ಹೆಚ್.ಡಿ.ದೇವೇಗೌಡರನ್ನು ಆಯ್ಕೆಮಾಡಲಿ

ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…

3 hours ago

ಮೈಸೂರು ಸ್ವಚ್ಛವಾಗಿಡಲು ಜನರಿಗೆ ಕೆಲ ಅಭ್ಯಾಸ ಅಗತ್ಯ

ಟಿ.ಕೆ.ಹರೀಶ್ ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ…

3 hours ago