ಪ್ರಸಾದ್ ಲಕ್ಕೂರು
ಕನಿಷ್ಠ ಪ್ರಮಾಣದ ಪ್ರವೇಶಾತಿಯೂ ಇಲ್ಲ; ಮುಂದಿನ ವರ್ಷದಿಂದ ಹೆಚ್ಚು ದಾಖಲಾತಿಗೆ ಕ್ರಮ
ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ೨ ಕ್ರೀಡಾ ವಸತಿ ಶಾಲೆಗಳಿಗೆ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ. ಪೋಷಕರು ಕೂಡ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.
ಈ ವಸತಿ ಶಾಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು, ಮಕ್ಕಳಿಗೆ ಸಮರ್ಪಕವಾಗಿ ಕ್ರೀಡಾ ತರಬೇತಿ ಸಿಗದಿರುವುದು, ಮೆನು ಪ್ರಕಾರ ಊಟ, ತಿಂಡಿ ದೊರಕದಿರುವುದು ಹಾಗೂ ಶಾಲೆಯ ಮಕ್ಕಳು ವಿಭಾಗೀಯ, ರಾಜ್ಯ, ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆ ತೋರದಿರುವುದು ಮುಂತಾದ ಕಾರಣಗಳಿಂದ ದಾಖಲಾತಿ ಚೇತರಿಕೆ ಕಾಣುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದಲ್ಲದೆ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಅನುದಾನ ಮತ್ತು ಅಗತ್ಯ ಮೂಲಸೌಕರ್ಯಗಳು ಸಿಗುತ್ತಿಲ್ಲ. ಶಾಲೆಗಳು ಅಥ್ಲೆಟಿಕ್ಸ್ ಕೀಡೆಯಲ್ಲಿ ಮುಂಚೂಣಿಲ್ಲಿರುವ ಮಕ್ಕಳನ್ನು ಕ್ರೀಡಾ ವಸತಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿವೆ.
ಇದರಿಂದಲೂ ಪ್ರವೇಶಾತಿ ಹೆಚ್ಚಳ ಆಗುತ್ತಿಲ್ಲ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಮಂಡ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿರುವ ಕ್ರೀಡಾ ವಸತಿ ಶಾಲೆಗಳಿಗೆ ಮಕ್ಕಳು ದಾಖಲಾಗಲು ತೀವ್ರ ಆಸಕ್ತಿ ತೋರುತ್ತಾರೆ. ಆದರೆ, ಜಿಲ್ಲೆಯ ಮಕ್ಕಳು ನಿರಾಸಕ್ತಿ ಹೊಂದಿದ್ದಾರೆ. ಕ್ರೀಡಾಳುಗಳಾದರೆ ಏನೇನು ಅವಕಾಶಗಳಿವೆ ಎಂಬುದರ ಬಗ್ಗೆ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬಂದಿವೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಕರ ಮತ್ತು ಬಾಲಕಿಯರ ಕ್ರೀಡಾ ವಸತಿ ಶಾಲೆಗಳಿವೆ. ಜಿಲ್ಲೆಯ ಶಾಲೆಗಳಲ್ಲಿ ೫ ರಿಂದ ೯ನೇ ತರಗತಿಗಳ ತನಕ ಓದುತ್ತಿದ್ದು, ಆಟೋಟಗಳಲ್ಲಿ ಆಸಕ್ತಿ ಇರುವ ಮಕ್ಕಳನ್ನು ಕ್ರೀಡಾ ವಸತಿ ಶಾಲೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಒಂದು ಶಾಲೆಗೆ ೨೫ ಮಕ್ಕಳನ್ನು ದಾಖಲು ಮಾಡಲಾಗುತ್ತದೆ. ಆದರೆ, ಬಾಲಕರ ಕ್ರೀಡಾ ವಸತಿ ಶಾಲೆಯಲ್ಲಿ ಈ ವರ್ಷ ೧೨ ಮಕ್ಕಳು ದಾಖಲಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ ಈ ಶಾಲೆಯಲ್ಲಿದ್ದ ಮಕ್ಕಳಿಗೆ ಸರಿಯಾಗಿ ಊಟ, ತರಬೇತಿಯೂ ಸಿಗುತ್ತಿರಲಿಲ್ಲ. ಸದ್ಯ ಪರಿಸ್ಥಿತಿ ಸುಧಾರಣೆ ಕಂಡಿದೆ.
ಮತ್ತೊಂದು ಬಾಲಕಿಯರ ಕ್ರೀಡಾ ವಸತಿ ಶಾಲೆಯ ನೂತನ ಕಟ್ಟಡ ಕೆ.ಆರ್.ಐ.ಡಿ.ಎಲ್.ನಿಂದ ನಿರ್ಮಾಣವಾಗಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುವುದು ಬಾಕಿಯಿದೆ. ಮುಂದಿನ ಶೈಕ್ಷಣಿಕ ಅವಧಿಯೊಳಗೆ ಹಸ್ತಾಂತರ ನಡೆದು ಶಾಲೆ ಆರಂಭವಾಗಲಿದೆ. ಪ್ರವೇಶಾತಿಗೆ ನಿರಾಸಕ್ತಿಗೆ ಕಾರಣಗಳನ್ನು ಪತ್ತೆ ಹಚ್ಚಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ದಾಖಲಾತಿ ಹೆಚ್ಚಳಕ್ಕೆ ಕೆಲವು ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಶಾಲೆಗಳಿಗೆ ಇಲಾಖೆಯ ಸಹಾಯಕ ನಿರ್ದೇಶಕರು ಒಂದು ಸುತ್ತು ಭೇಟಿ ನೀಡಿ ಕ್ರೀಡಾಸಕ್ತಿ ಇರುವ ಮಕ್ಕಳನ್ನು ವಸತಿ ಶಾಲೆಗೆ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಕ್ರೀಡಾ ವಸತಿ ಶಾಲೆಗಳಲ್ಲಿರುವ ಸೌಲಭ್ಯ ಹಾಗೂ ಕ್ರೀಡಾಳುವಾಗಿ ರೂಪುಗೊಂಡರೆ ಆಗುವ ಪ್ರಯೋಜನಗಳಬಗ್ಗೆಯೂ ಮನವರಿಕೆ ಮಾಡಿದ್ದಾರೆ. ನಗರದಲ್ಲಿರುವ ಕ್ರೀಡಾ ಶಾಲೆಯ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ತರಬೇತುದಾರರಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮಕ್ಕಳಿಗೆ ಕ್ರೀಡಾ ತರಬೇತಿ ಕೊಡಿಸಲಾಗುತ್ತಿದೆ.
ಇತರೆ ಶಾಲೆ ಮಕ್ಕಳಿಗೂ ತರಬೇತಿ: ಕ್ರೀಡಾ ವಸತಿ ಶಾಲೆಯಿಂದ ಇತರೆ ಶಾಲೆಗಳ ಮಕ್ಕಳಿಗೂ ಅಥ್ಲೆಟಿಕ್ಸ್ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದು ಜಿಲ್ಲಾ ಖೋ ಖೋ ಅಸೋಸಿಯೇಷನ್, ನೆಟ್ಬಾಲ್ ಅಸೋಸಿಯೇಷನ್ ಜೊತೆ ಮಾತನಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
” ಜಿಲ್ಲೆಯ ಶಾಲೆಗಳಿಗೆ ಡಿಸೆಂಬರ್ನಿಂದ ಭೇಟಿ ನೀಡಿ ಕ್ರೀಡೆಯಲ್ಲಿ ಮುಂದಿರುವ ಮಕ್ಕಳನ್ನು ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆಗೆ ದಾಖಲಿಸುವಂತೆ ಮನವಿ ಮಾಡುತ್ತೇವೆ. ಎರಡೂ ಶಾಲೆಗಳಿಗೆ ಕನಿಷ್ಠ ತಲಾ ೨೫ ಮಕ್ಕಳನ್ನು ಸೇರಿಸಿಕೊಳ್ಳಲು ಪ್ರಯತ್ನ ಮಾಡಲಾಗುವುದು.”
ಕೆ.ಸುರೇಶ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…