Andolana originals

ಕೇರಳ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಿಮೆ ಯೋಜನೆಗೆ ಬೇಡಿಕೆ

ಗಿರೀಶ್ ಹುಣಸೂರು

ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆ; ರಾಜ್ಯದಲ್ಲೂ ಯೋಜನೆ ಜಾರಿಗೆ ಮಕ್ಕಳ ಹಕ್ಕು ಗಳ ರಕ್ಷಣಾ ಆಯೋಗ ಮನವಿ

ಮೈಸೂರು: ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತ ಮತ್ತು ಇತರೆ ಅವಘಡಗಳಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜೀವ ಹಾನಿ, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಮಾದರಿಯಲ್ಲಿ ರಾಜ್ಯದ ಶಾಲಾ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಅಪಘಾತ ಮತ್ತು ಜೀವ ವಿಮೆ ಯೋಜನೆ ಜಾರಿಗೆ ತರುವಂತೆ ಒತ್ತಾಯ ಕೇಳಿಬಂದಿದೆ.

ಶಾಲಾ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರ ೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ೧ರಿಂದ ೧೨ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಮಗ್ರ ಅಪಘಾತ ಮತ್ತು ಜೀವ ವಿಮಾ ಯೋಜನೆಯನ್ನು ಘೋಷಿಸಿದೆ. ಸರ್ಕಾರಿ, ಅನುದಾನಿತ ಮತ್ತು ಅನುಮೋದಿತ ಶಾಲೆಗಳ ಸುಮಾರು ೪೩ ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಈ ಯೋಜನೆಗೆ ೧೫ ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ರಾಜ್ಯ ವಿಮಾ ಇಲಾಖೆ ಮತ್ತು ಕೇರಳ ಸರ್ಕಾರ ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಈ ವಿಮಾ ಯೋಜನೆಯು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.

ಈ ಹಿನ್ನೆಲೆಯಲ್ಲಿ ಕೇರಳ ಮಾದರಿಯಲ್ಲಿ ರಾಜ್ಯದ ಶಾಲಾ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಅಪಘಾತ ಮತ್ತು ಜೀವ ವಿಮೆ ಯೋಜನೆ ಜಾರಿಗೆ ತರಲು ಕೋರಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಮಕ್ಕಳ ಜೀವ, ಭದ್ರತೆ ಮತ್ತು ಗೌರವವನ್ನು ರಕ್ಷಿಸುವುದು ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರದ ಮೂಲ ಕರ್ತವ್ಯವಾಗಿದೆ. ಮಕ್ಕಳು ಭಯವಿಲ್ಲದೆ, ಅಪಾಯರಹಿತ ವಾತಾವರಣದಲ್ಲಿ ಕಲಿಯುವಂತೆ ಮಾಡುವ ಜವಾಬ್ದಾರಿಯು ಸರ್ಕಾರದ ಮೇಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಅನೇಕ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸಂಭವಿಸಿದ ದುರ್ಘಟನೆಗಳು (ಬಿಸಿಯೂಟದ ಪಾತ್ರೆಗಳಿಗೆ ಬಿದ್ದು ಗಾಯ, ಶಾಲಾ ಪ್ರವಾಸ ಮತ್ತು ಕ್ರೀಡಾಕೂಟಗಳಲ್ಲಿ ಅಪಘಾತಗಳು, ವಿದ್ಯುತ್ ಅವಘಡಗಳು, ಕಟ್ಟಡ ಮತ್ತು ಮೂಲಸೌಕರ್ಯ ವೈಫಲ್ಯಗಳು) ಅತ್ಯಂತ ಗಂಭೀರ ಆತಂಕಕ್ಕೆ ಕಾರಣವಾಗಿವೆ. ಇವುಗಳಲ್ಲಿ ಕೆಲವು ಪ್ರಕರಣಗಳು ಮಕ್ಕಳ ಸಾವಿನಲ್ಲಿಯೇ ಅಂತ್ಯಗೊಂಡಿವೆ.

ಇಂತಹ ಅನೇಕ ಘಟನೆಗಳಿಗೆ ಸಂಬಂಧಿಸಿದ ದೂರುಗಳು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಂದೆಯೂ ದಾಖಲಾಗಿವೆ. ಶಾಲೆಗಳಲ್ಲಿ ಅಥವಾ ಶಾಲಾ ಚಟುವಟಿಕೆಗಳಲ್ಲಿನ ದುರ್ಘಟನೆಗಳು ಸಂಭವಿಸಿದಾಗ ಮಕ್ಕಳಿಗೆ ಕೇವಲ ‘ಜೀವ ವಿಮೆ’ ಇದ್ದರೆ ಸಾಲದು; ಏಕೆಂದರೆ ಜೀವ ವಿಮೆ ಮರಣದ ಸಂದರ್ಭದಲ್ಲಿ ಮಾತ್ರ ಪರಿಹಾರ ನೀಡುತ್ತದೆ.

ಆದರೆ, ಶಾಲಾ ಅವಘಡಗಳಲ್ಲಿ ಬಹುಪಾಲು ಮಕ್ಕಳು ಗಾಯಗೊಂಡು, ಶಾಶ್ವತ ಅಂಗವೈಕಲ್ಯಕ್ಕೊಳಗಾಗಿ ಅಥವಾ ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುವ ಸ್ಥಿತಿಗೆ ತಲುಪುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತ ವಿಮೆ ಮಾತ್ರ ಚಿಕಿತ್ಸೆ ವೆಚ್ಚ, ಅಂಗವೈಕಲ್ಯ ಪರಿಹಾರ ಮತ್ತು ತುರ್ತು ನೆರವನ್ನು ಒದಗಿಸಬಲ್ಲದು. ಆದ್ದರಿಂದ, ಮಕ್ಕಳ ರಕ್ಷಣೆಗೆ ಅಪಘಾತ ವಿಮೆ ಮತ್ತು ಜೀವ ವಿಮೆ ಎರಡೂ ಅನಿವಾರ್ಯ.

ಕೇರಳ ರಾಜ್ಯ ಸರ್ಕಾರವು ೨೦೨೬-೨೭ರ ಬಜೆಟ್‌ನಲ್ಲಿ ಶಾಲಾ ಮಕ್ಕಳಿಗೆ ಅಪಘಾತ ಮತ್ತು ಜೀವ ವಿಮೆ ಯೋಜನೆಯನ್ನು ಜಾರಿಗೆ ತಂದಿರುವುದು ಮಕ್ಕಳ ರಕ್ಷಣೆಯಲ್ಲಿ ಮಾದರಿಯಾಗುವಂತಹ ಕ್ರಮವಾಗಿದೆ. ಈ ಯೋಜನೆಯು ಯಾವುದೇ ಶಾಲಾ ಚಟುವಟಿಕೆಯಲ್ಲಿ ಸಂಭವಿಸುವ ಅಪಘಾತದಿಂದ ಗಾಯಗೊಂಡ ಅಥವಾ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಕ್ಷಣ ಆರ್ಥಿಕ ರಕ್ಷಣೆ ಒದಗಿಸುತ್ತದೆ. ಕೇರಳದ ಮಾದರಿಯನ್ನು ಆಧರಿಸಿ ಕರ್ನಾಟಕದಲ್ಲೂ ‘ಶಾಲಾ ಮತ್ತು ಪಿಯುಸಿ ವಿದ್ಯಾರ್ಥಿಗಳ ಅಪಘಾತ ಮತ್ತು ಜೀವ ವಿಮೆ ಯೋಜನೆ’ ಜಾರಿಗೆ ತರಬೇಕಾದ ಅಗತ್ಯವಿದೆ.

ಆಯೋಗದ ಶಿಫಾರಸ್ಸುಗಳು: 

೧ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಒಂದರಿಂದ ದ್ವಿತೀಯ ಪಿಯುಸಿವರೆಗೆ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳು ಸ್ವಯಂಚಾಲಿತವಾಗಿ ಈ ಯೋಜನೆಗೆ ಒಳಗೊಳ್ಳಬೇಕು.

೨ ಶಾಲಾ ಅವರಣ, ಬಿಸಿಯೂಟ ಸಂಬಂಧಿತ, ಪ್ರಯೋಗಾಲಯ, ಆಟದ ಮೈದಾನ, ಶಾಲಾ ಪ್ರವಾಸ, ಕ್ರೀಡಾಕೂಟ, ಸಾರಿಗೆ ಇನ್ನಿತರೆಡೆ ಸಂಭವಿಸುವ ಎಲ್ಲ ಅಪಘಾತಗಳು. ಗಾಯ, ಶಾಶ್ವತ ಅಂಗವೈಕಲ್ಯ ಮತ್ತು ಸಾವಿನ ಸಂದರ್ಭಗಳಲ್ಲಿ ಪರಿಹಾರ.

೩ ಗಂಭೀರ ಗಾಯಗಳಿಗೆ ಚಿಕಿತ್ಸೆ ವೆಚ್ಚ. ಶಾಶ್ವತ ಅಂಗವೈಕಲ್ಯಕ್ಕೆ ನಿಗದಿತ ಪರಿಹಾರ ಮೊತ್ತ. ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ತಕ್ಷಣ ಪರಿಹಾರ.

೪ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಮಾ ಸಂಸ್ಥೆ, ಸಾರ್ವಜನಿಕ ವಿಮಾ ಕಂಪೆನಿಗಳ ಮೂಲಕ ಗುಂಪು ವಿಮೆ ಮಾದರಿಯಲ್ಲಿ ಪ್ರತಿ ವಿದ್ಯಾರ್ಥಿಗೂ ಸರ್ಕಾರವೇ ಪ್ರೀಮಿಯಂ ಪಾವತಿಸಬೇಕು. ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಸರಳ ಕ್ಲೈಮ್ ವ್ಯವಸ್ಥೆ ಹಾಗೂ ಕಾಲಮಿತಿಯೊಳಗೆ ಪರಿಹಾರ ನೀಡಿಕೆ.

೫ ಪಾರದರ್ಶಕತೆ ಮತ್ತು ಜವಾಬ್ದಾರಿ: ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಯೋಜನೆಯ ವಿವರಗಳನ್ನು ಪ್ರಕಟಿಸುವುದು. ಜಿಲ್ಲಾಮಟ್ಟದಲ್ಲಿ ಮೇಲ್ವಿಚಾರಣೆ ಮಾಡಬೇಕು.

 

 

 

ಆಂದೋಲನ ಡೆಸ್ಕ್

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: 24 ರೂ. ಹಿಡಿದು ಮುಂಬೈಗೆ ಬಂದ ಮುನ್ನಾ ಈಗ ಸೆಲೆಬ್ರೆಟಿ ಫೋಟೋಗ್ರಾಫರ್!

ಪ್ರಸಿದ್ಧ ಬಾಲಿವುಡ್ ತಾರೆಗಳ ಜೊತೆಯಲ್ಲಿ ಕೆಲಸ ಮಾಡಿದ ಅನುಭವ ಮುಂಬೈ ಎಂಬ ಮಾಯಾನಗರಿಗೆ ಪ್ರತಿ ದಿನ ಬದುಕು ಹುಡುಕಿಕೊಂಡು, ಕನಸುಗಳನ್ನು…

44 mins ago

ಟಿ-20 ವಿಶ್ವಕಪ್: ಕೌಂಟ್‌ಡೌನ್ ಶುರು

ಆರ್.ಎಲ್.ಮಂಜುನಾಥ್ ಮೈಸೂರು: ಕ್ರಿಕೆಟ್ ಪ್ರಿಯರಿಗೆ ಈಗ ಹಬ್ಬವೋ ಹಬ್ಬ. ಅದರಲ್ಲೂ ಕ್ರಿಕೆಟ್‌ನ ಭಾಷ್ಯವನ್ನೇ ಬದಲಿಸುತ್ತಿರುವ ಟಿ-೨೦ ಪಂದ್ಯಗಳು ಎಲ್ಲರಿಗೂ ಅಚ್ಚುಮೆಚ್ಚು.…

1 hour ago

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ..!

ಕೃಷ್ಣ ಸಿದ್ದಾಪುರ ಪೊಲೀಸರು ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರು ಹೂಡಿಕೆ ಹಣ ದೋಚುತ್ತಿರುವ ಖದೀಮರು  ಸಿದ್ದಾಪುರ: ಸೈಬರ್ ಅಪರಾಧ ಪ್ರಕರಣಗಳ…

1 hour ago

ಫೆ.6ರಂದು ಮಹದೇಶ್ವರ ದೇವಾಲಯದ ಉದ್ಘಾಟನೆ

ಎಂ.ಯೋಗಾನಂದ್ ಹಿರಿಕ್ಯಾತನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇಗುಲ; ಭಕ್ತರಿಂದ ಅನ್ನಸಂತರ್ಪಣೆ  ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಮಹದೇಶ್ವರ…

1 hour ago

ರೈಲ್ವೆ ಕಂಬಿಗಳಿಗೆ ತಂತಿ ಜಾಲರಿ ಅಳವಡಿಕೆ ಪ್ರಯೋಗ ಯಶಸ್ವಿ

ಮಂಜು ಕೋಟೆ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ; ರೈತರು, ಸಾರ್ವಜನಿಕರು ನಿರಾಳ  ಎಚ್.ಡಿ.ಕೋಟೆ: ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ತಡೆಗಟ್ಟಲು…

1 hour ago

ಕ್ಯಾನ್ಸರ್ ಚಿಂತೆ ಬಿಡಿ, ಚಿಕಿತ್ಸೆ ಬಗ್ಗೆ ಗಮನ ಕೊಡಿ

ಫೋನ್ ಇನ್ ಕಾರ್ಯಕ್ರಮಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಿಂದ ಹಲವು ಸಲಹೆ  ಕುಮಾರ್, ಬೆಂಗಳೂರು: ರೊಬೊಟಿಕ್ಸ್ ಶಸಚಿಕಿತ್ಸೆಗೂ, ಸಾಮಾನ್ಯ ಶಸ್ತ್ರಚಿಕಿತ್ಸೆಗೂ ಇರುವ…

1 hour ago