Andolana originals

ಕಾಫಿ ದರ ಏರಿಳಿತ, ಬೆಳೆಗಾರರ ಸ್ಥಿತಿ ಡೋಲಾಯಮಾನ

ನವೀನ್ ಡಿಸೋಜ

ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದ ಕಾಫಿ ಬೆಳೆಗಾರರಿಗೆ ನಿರಾಸೆ; ನಷ್ಟದ ಭೀತಿ

ಮಡಿಕೇರಿ: ಕಾಫಿ ಬೆಳೆಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದರಿಂದ ಕೊಡಗಿನ ಕಾಫಿ ಬೆಳೆ ಗಾರರು ಸಂತಸದಲ್ಲಿದ್ದರು. ಆದರೆ, ಮತ್ತಷ್ಟು ದರ ಹೆಚ್ಚಾಗಲಿದೆ ಎಂದುಕೊಂಡಿದ್ದ ಬೆಳೆಗಾರರು ಕಾಫಿ ದರ ಕುಸಿತದಿಂದ ಕಂಗಲಾಗುವಂತಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ವರ್ಷ ಕಾಫಿ ಬೆಳೆ ಅಷ್ಟೊಂದು ಉತ್ತಮವಾಗಿ ಬಂದಿರಲಿಲ್ಲ. ಆದರೆ ಬಂದ ಬೆಳೆಗೆ ಹಿಂದೆಂದೂ ಸಿಗದ ಬಂಪರ್ ಬೆಲೆ ಸಿಕ್ಕಿತ್ತು. ಇದರಿಂದ ಕಾಫಿ ಬೆಳೆಗಾರರ ಅದೃಷ್ಟ ಖುಲಾಯಿಸಿತ್ತು.

ಪ್ರತಿ ೫೦ ಕೆ.ಜಿ. ತೂಕದ ಚೀಲವೊಂದಕ್ಕೆ ೪-೫ ಸಾವಿರ ರೂ.ಗಳಷ್ಟಿದ್ದ ದರ ಈ ಬಾರಿ ಬರೋಬ್ಬರಿ ೧೪ ಸಾವಿರ ರೂಪಾಯಿಗೆ ಏರಿಕೆ ಕಂಡಿತ್ತು.  ಇದರಿಂದ ರೈತರು ಸಂತಸಗೊಂಡಿದ್ದರು. ಆದರೆ] ಮಾರ್ಚ್ ತಿಂಗಳಿಂದ ನಿರಂತರವಾಗಿ ಕುಸಿತಗೊಳ್ಳುತ್ತಿರುವ ಕಾಫಿ ಬೆಲೆ ಈಗ ೫೦ ಕೆ.ಜಿ ಚೀಲ ವೊಂದಕ್ಕೆ ೧೧,೫೦೦-೧೨,೦೦೦ ರೂ.ಗೆ ಇಳಿದಿದೆ. ಅಂದರೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಎರಡೂವರೆ ಸಾವಿರ ರೂಪಾಯಿ ಕುಸಿತ ವಾಗಿದ್ದು, ಮತ್ತಷ್ಟು ದರ ಕುಸಿತದ ಆತಂಕ ಎದುರಾಗಿದೆ.

ಕಾಫಿ ಕೊಯ್ಲು ಮಾಡಿ ಒಣಗಿಸಿ ಇಡುತ್ತಿದ್ದ ಬೆಳೆಗಾರರು ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ದರ ಕುಸಿತದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ಕಾಫಿ ದರದಲ್ಲಿ ಹೆಚ್ಚಳವಾಗುತಿತ್ತು. ಈ ವೇಳೆ ಕಾಫಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದರು. ಆದರೆ, ಹೀಗೆ ಅಂದುಕೊಂಡಿದ್ದ ಬೆಳೆಗಾರರಿಗೆ ಈ ಬಾರಿ ನಿರಾಸೆ ಆಗಿದೆ. ಏಪ್ರಿಲ್ ತಿಂಗಳ ೪ನೇ ವಾರ ಬಂದಿದ್ದರೂ ದರ ನಿರಂತರವಾಗಿ ಕುಸಿಯುತ್ತಲೇ ಇದೆ. ಈ ಪರಿಸ್ಥಿತಿಯಿಂದಾಗಿ ನಷ್ಟ ಅನುಭವಿಸುವ ಸ್ಥಿತಿ ತಲುಪಬಹುದು ಎನ್ನುವ ಆತಂಕ ಬೆಳೆಗಾರರನ್ನು ಕಾಡಲಾರಂಭಿಸಿದೆ.

ಅಷ್ಟಕ್ಕೂ ಇದಕ್ಕೆಲ್ಲಾ ಅಮೆರಿಕ ಅಧ್ಯಕ್ಷ ಟ್ರಂಪ್ ಜಾರಿಗೆ ತಂದಿರುವ ಹೊಸ ತೆರಿಗೆ ನೀತಿ ಕಾರಣ ಎನ್ನಲಾಗುತ್ತಿದೆ. ಭಾರತದ ವಸ್ತುಗಳ ಮೇಲೆ ಶೇ.೨೬ ತೆರಿಗೆ ವಿಽಸಿರುವುದರಿಂದ ಕಾಫಿ ಬೆಲೆ ಕುಸಿತಗೊಳ್ಳಲು ಕಾರಣವಾಗಿದೆ ಎಂದು ಹೇಳಲಾಗಿದೆ. ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ತೀವ್ರಬಿಸಿಲಿ ನಿಂದಾಗಿ ಕಾಫಿ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದ ಭಾರತದ ಕಾಫಿಗೆ ಇನ್ನಷ್ಟು ಉತ್ತಮ ಬೆಲೆ ಸಿಗುತ್ತದೆ ಎಂದುಕೊಂಡಿದ್ದೆವು. ಆದರೆ ಟ್ರಂಪ್ ತೆರಿಗೆ ನೀತಿಯಿಂದಾಗಿ ನಮಗೆ ಬರೆ ಹಾಕಿದಂತೆ ಆಗಿದೆ ಎನ್ನುತ್ತಿದ್ದಾರೆ ಬೆಳೆಗಾರರು.

ಅರೇಬಿಕಾ ಕಾಫಿಗೆ ೧೬ ಸಾವಿರ ರೂ. ಹಾಗೂ ರೊಬೆಸ್ಟಾ ಕಾಫಿಗೆ ೧೪,೫೦೦ ರೂ. ದರ ಇತ್ತು. ಕಳೆದ ವರ್ಷ ಮಳೆಯ ಸಮಸ್ಯೆಯಿಂದಾಗಿ ಕೇವಲ ೩೦ರಷ್ಟು ಮಾತ್ರವೇ ಇಳುವರಿ ಪಡೆದಿದ್ದೇವೆ. ಜೊತೆಗೆ ಬಹುತೇಕ ರೈತರು ಕಾಫಿ ಮಾರಾಟ ಮಾಡದೆ ಹಾಗೇ ಇರಿಸಿಕೊಂಡಿದ್ದರು. ಈಗ ಬೆಲೆ ಕಡಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂಬುದು ರೈತರ ಅಭಿಪ್ರಾಯ. ಮತ್ತೊಂದೆಡೆ ರೈತರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಕಾಫಿ ಬೆಲೆ ಮತ್ತೆ ಜಾಸ್ತಿಯಾಗಬಹುದು ಎಂದು ಕೂಡ ಹೇಳಲಾಗುತ್ತಿದೆ.

” ಈ ಬಾರಿ ಕಾಫಿಗೆ ನಿರೀಕ್ಷೆಗೂ ಮೀರಿ ಉತ್ತಮ ದರ ಬಂದಿತ್ತು. ವಿಯೆಟ್ನಾಂ, ಬ್ರೆಜಿಲ್‌ಗಳಲ್ಲಿ ಕಾಫಿ ಬೆಳೆ ಇಲ್ಲದ ಕಾರಣ ಇಲ್ಲಿ ಕಾಫಿ ದರ ಏರಿಕೆಯಾಗಿತ್ತು. ಕೊಡಗು ಜಿಲ್ಲೆಯಲ್ಲಿ ಕಾಫಿ ಫಸಲು ಕಡಿಮೆಯಾಗಿದ್ದರೂ ದರ ಹೆಚ್ಚಳದಿಂದ ಕಾಫಿ ಬೆಳೆಗಾರರು ಸಂತಸಗೊಂಡಿದ್ದರು. ಆದರೆ, ಈಗ ದರ ಕುಸಿತದಿಂದ ಬೆಳೆಗಾರರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಕಾಫಿ ದರ ಲಂಡನ್ ಮಾರುಕಟ್ಟೆಯಲ್ಲಿ ನಿರ್ಧರಿಸಲ್ಪಡುವುದರಿಂದ ಹೆದರುವ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.”

-ಕೆ.ಜಿ. ಬೋಪಯ್ಯ, ಮಾಜಿ ವಿಧಾನಸಭಾಧ್ಯಕ್ಷ 

” ಕಾಫಿ ದರ ಈ ಬಾರಿ ಏರಿಳಿತ ಕಾಣುತ್ತಿದ್ದು, ದರ ಕುಸಿಯುತ್ತಲೇ ಇದೆ. ೧೪ ಸಾವಿರ ರೂ.ಗಳಷ್ಟಿದ್ದ ಕಾಫಿ ದರ ಈಗ ೧೧,೫೦೦-೧೨,೦೦೦ ರೂ.ಗಳಷ್ಟಕ್ಕೆ ತಲುಪಿದೆ. ಕಾಫಿಯನ್ನು ಒಣಗಿಸಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ. ಪ್ರತಿದಿನ ಬೆಲೆ ಏರಿಳಿತ ಕಾಣುತ್ತಿದ್ದು, ಸದ್ಯದ ಮಟ್ಟಿಗೆ ೧೪,೦೦೦ ರೂ.ಗಳಷ್ಟು ದರ ಏರಿಕೆಯಾಗುವ ಸಾಧ್ಯತೆ ಕಡಿಮೆ ಇದೆ.”

-ಪೊನ್ನಚ್ಚನ ಮಧು, ಉದ್ಯಮಿ, ಮಡಿಕೇರಿ

“ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಕಾಫಿ ದರ ಕೊಂಚ ಕಡಿಮೆಯಾಗುತ್ತದೆ. ಆದರೆ, ಏಪ್ರಿಲ್ ಮೊದಲ ವಾರದಲ್ಲೇ ಉತ್ತಮ ದರ ಬರಬೇಕಿತ್ತು. ಆದರೆ, ಈ ತಿಂಗಳಲ್ಲಿ ದರ ಕುಸಿತ ಕಂಡಿದೆ. ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆಯ ಸಮಸ್ಯೆಯ ನಡುವೆಯೂ ಕಾಫಿ ಬೆಳೆದ ಬೆಳೆಗಾರರಿಗೆ ದರ ಕುಸಿತದಿಂದ ನಷ್ಟದ ಆತಂಕ ಮನೆ ಮಾಡಿದೆ.”

-ಕವನ್ ಕಾವೇರಪ್ಪ,ಕಾಫಿ ಬೆಳೆಗಾರ,ಮಡಿಕೇರಿ

 

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

14 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

14 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

15 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

15 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

20 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

20 hours ago