Andolana originals

ಫುಟ್‌ಪಾತ್ ಒತ್ತುವರಿ ತೆರವು; ವ್ಯಾಪಾರಸ್ಥರ ನೋವು

ಚಿರಂಜೀವಿ ಸಿ ಹುಲ್ಲಹಳ್ಳಿ

ಹಲವರಿಗೆ ಮಕ್ಕಳ ಶಾಲಾ ಶುಲ್ಕ ಕಟ್ಟುವುದಕ್ಕೂ ಫುಟ್‌ಪಾತ್ ಆಧಾರ!

ಕೆಲವರಿಗೆ ಅರ್ಧ ಶತಮಾನದಿಂದಲೂ ಈ ವ್ಯಾಪಾರದಿಂದಲೇ ಜೀವನ

ಮೈಸೂರು: ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಗರಪಾಲಿಕೆಯು ನಗರದ ಪ್ರಮುಖ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಆದರೆ ಈ ಕಾರ್ಯಾಚರಣೆಯ ಹಿಂದೆ ನೂರಾರು ಕುಟುಂಬಗಳ ಬದುಕಿನ ನೋವು ಅಡಗಿದ್ದು, ಜೀವನೋಪಾಯ ಕಳೆದುಕೊಳ್ಳುವ ಭೀತಿಯಲ್ಲಿ ಬೀದಿಬದಿ ವ್ಯಾಪಾರಿಗಳು ದಿನದೂಡುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ನಡೆದ ಫುಟ್‌ಪಾತ್ ಒತ್ತುವರಿ ಕಾರ್ಯಾಚರಣೆಯಲ್ಲಿ ಕೆಲ ಪೆಟ್ಟಿಗೆ ಅಂಗಡಿಗಳು ಹಾಗೂ ತಾತ್ಕಾಲಿಕ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಒಂದು ಕಡೆ ಫುಟ್ ಪಾತ್ ಒತ್ತುವರಿಯನ್ನು ತೆರವುಗೊಳಿಸುತ್ತಿದ್ದರೆ, ಮತ್ತೊಂದು ಕಡೆ ವ್ಯಾಪಾರಿಗಳ ಪುನರ್ವಸತಿಗಾಗಿ ವ್ಯಾಪಾರ ಕೇಂದ್ರಗಳು ನಿರ್ಮಾಣ ವಾಗಿ ಹಲವು ವರ್ಷಗಳು ಕಳೆದರೂ ಬಳಕೆಯಾಗದೆ ಅನಾಥವಾಗಿ ನಿಂತಿವೆ.

ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ಸಣ್ಣ ರೈತರು ಹಾಗೂ ಸ್ಥಳೀಯ ಉತ್ಪಾದಕರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಗರದ ವಿವಿಧ ಭಾಗಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ಆದರೆ, ಇವುಗಳನ್ನು ಬೀದಿ ವ್ಯಾಪಾರಸ್ಥರಿಗಾಗಿ ನಿರ್ಮಿಸಿಲ್ಲ. ಅಶೋಕಪುರಂ ಅಶೋಕ (ಬಲ್ಲಾಳ್) ವೃತ್ತದ ಬಳಿ, ಶಕ್ತಿನಗರ, ವಾಲ್ಮೀಕಿ ಭವನದ ಸಮೀಪ ಹಾಗೂ ಶಾರದಾದೇವಿ ನಗರದ ಪ್ರದೇಶಗಳಲ್ಲಿ ನಿರ್ಮಿಸಲಾದ ಈ ಕೇಂದ್ರಗಳು, ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗದೆ ಇಂದು ದುಸ್ಥಿತಿಗೆ ತಲುಪಿವೆ.

ಸಣ್ಣ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣಗೊಂಡ ಈ ಕೇಂದ್ರಗಳಲ್ಲಿ ವ್ಯಾಪಾರ ಚಟುವಟಿಕೆಗಳು ನಡೆಯದ ಕಾರಣ ಕ್ರಮೇಣ ಅವು ನಿರ್ಲಕ್ಷ್ಯಕ್ಕೆ ಒಳಗಾದವು. ಕೆಲವೆಡೆ ನಿರ್ವಹಣೆ ಕೊರತೆ ಕಂಡು ಬಂದರೆ, ಇನ್ನೂ ಕೆಲವೆಡೆ ರೈತರು ಆಸಕ್ತಿ ತೋರಿಲ್ಲ. ಪರಿಣಾಮವಾಗಿ ಸಾರ್ವಜನಿಕ ಹಣದಲ್ಲಿ ನಿರ್ಮಿಸಲಾದ ಮೂಲಸೌಕರ್ಯಗಳು ಇಂದು ಬಹುತೇಕ ಬಳಕೆಯಾಗದೆ ಉಳಿದಿವೆ.

ಈ ನಡುವೆ ಪಾಲಿಕೆಯ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇದೇ ಕೇಂದ್ರಗಳನ್ನು ಪರ್ಯಾಯ ವ್ಯವಸ್ಥೆಯಾಗಿ ನೀಡಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಮುಡಾ ನಿರ್ಮಿಸಿರುವ ಈ ಕೇಂದ್ರಗಳು ಇನ್ನೂ ಸಂಪೂರ್ಣವಾಗಿ ನಗರಪಾಲಿಕೆ ಆಡಳಿತ ವ್ಯಾಪ್ತಿಗೆ ಬಂದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅವುಗಳನ್ನು ತಕ್ಷಣವೇ ಬೀದಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಲು ಆಡಳಿತಾತ್ಮಕ ಅಡಚಣೆಗಳು ಎದುರಾಗಿವೆ. ನಮ್ಮ ಬಳಿ ಅಂಗಡಿ ಮಳಿಗೆ ಕಟ್ಟುವಷ್ಟು ಹಣವಿಲ್ಲ. ಪ್ರತಿದಿನ ದುಡಿದರೆ ಮಾತ್ರ ಕುಟುಂಬಕ್ಕೆ ಊಟ. ಈಗ ಗಾಡಿಯನ್ನೂ ತೆರವುಗೊಳಿಸಿದರೆ ನಾವು ಏನು ಮಾಡಬೇಕು. ಹೀಗಾಗಿ ಒಂದೇ ಸಾಲಿನಲ್ಲಿ ಕುಳಿತು ವ್ಯಾಪಾರ ಮಾಡುವಂತೆ ಅವಕಾಶ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದೆ.

ಬಲ್ಲಾಳ್ ವೃತ್ತದ ಇನ್ನೊಂದು ಭಾಗದ ಫುಟ್‌ಪಾತ್ನಲ್ಲೂ ಸುಮಾರು ೨ ಲಕ್ಷ ರೂ. ವೆಚ್ಚದಲ್ಲಿ ವ್ಯಾಪಾರ ವಲಯ ನಿರ್ಮಿಸುವ ಕುರಿತು ಪಾಲಿಕೆಯ ಎರಡನೇ ವಲಯ ಕಚೇರಿ ಅಧಿಕಾರಿಗಳು ರೂಪರೇಷೆ ತಯಾರಿಸಿ, ಆಯುಕ್ತರಿಗೆ ಸಲ್ಲಿಸಿದ್ದಾರೆ ಎಂದು ಮಾರಾಟಗಾರರ ಸಂಘದ ಮೂಲಗಳು ತಿಳಿಸಿವೆ. ಹಲವು ವರ್ಷಗಳಿಂದ ತಿಂಡಿ ಮಾರಾಟ ಮಾಡಿಕೊಂಡು ಮಕ್ಕಳನ್ನು ಓದಿಸುತ್ತಿದ್ದೇವೆ. ನಮಗೆ ಒಂದು ನಿಗದಿತ ಜಾಗ ಕೊಟ್ಟರೆ ಅಲ್ಲೇ ವ್ಯಾಪಾರ ಮಾಡುತ್ತೇವೆ. ಆದರೆ ಬದುಕಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ತೆರವು ಮಾಡುವುದು ಅನ್ಯಾಯ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಇವರ ಪುನರ್ವಸತಿಗೂ ಆದ್ಯತೆ ನೀಡಬೇಕಿದೆ.

ಅಶೋಕ ವೃತ್ತ, ಕಲ್ಯಾಣಗಿರಿ, ವಾಲ್ಮೀಕಿ ಭವನದ ಸಮೀಪ ಹಾಗೂ ಶಾರದಾದೇವಿ ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡು ಖಾಲಿ ಉಳಿದಿರುವ ವ್ಯಾಪಾರ ಕೇಂದ್ರಗಳನ್ನು ಪುನರುಜ್ಜೀವನಗೊಳಿಸಿ, ಫುಟ್‌ಪಾತ್ ವ್ಯಾಪಾರಿಗಳಿಗೆ ಹಂಚಿಕೆ ಮಾಡುವ ಕುರಿತು ಸರ್ಕಾರ, ಮುಡಾ ಮತ್ತು ನಗರಪಾಲಿಕೆ ಸಮನ್ವಯದೊಂದಿಗೆ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇಲ್ಲವಾದರೆ ಖಾಲಿಯಾದ ಫುಟ್‌ಪಾತ್‌ಗಳ ಮೇಲೆ ಸರಾಗವಾಗಿ ನಡೆದಾಡುವ ಜನರ ಪಾದಗಳ ಕೆಳಗೆ ನೂರಾರು ಕುಟುಂಬಗಳ ಕಣ್ಣೀರ ಕಥೆಗಳು ಸದಾ ನರಳಾಡುತ್ತಿರುತ್ತವೆ. ಅದಕ್ಕೆ ಯಾರನ್ನು ಹೊಣೆ ಮಾಡುವುದು?

ಸರ್ಕಾರದಿಂದ ನಿರ್ಮಿಸಿರುವ ಫುಡ್ ಕೋರ್ಟ್ ಮತ್ತು ವ್ಯಾಪಾರ ಕೇಂದ್ರ ಬಹಳ ಚಿಕ್ಕವು. ಜನರು ನಿಲ್ಲವುದಕ್ಕೂ ಇಲ್ಲಿ ಜಾಗವಿಲ್ಲ. ಒಂದು ರಸ್ತೆಯಲ್ಲಿ ಹತ್ತಾರು ವ್ಯಾಪಾರಿಗಳು ಜೀವನ ಕಟ್ಟಿಕೊಂಡಿದ್ದಾರೆ. ಇನ್ನೂ ವಲಯ ಕಚೇರಿಗಳ ವ್ಯಾಪ್ತಿಯಲ್ಲಿರುವ ವಸತಿ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ಮೊದಲು ವ್ಯಾಪಾರ ಕೇಂದ್ರಗಳನ್ನು ನಿರ್ಮಿಸಲಿ. ನಂತರ ನಮ್ಮನ್ನು ತೆರವುಗೊಳಿಸಲಿ ಎಂದು ಫುಟ್‌ಪಾತ್ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.

” ೧೯೭೮ರಿಂದ ನಾವು ಫುಟ್ ಪಾತ್ ಮೇಲೆ ಜೀವನ ನಡೆಸುತ್ತಿದ್ದೇವೆ. ಪರ್ಯಾಯ ಮಾರ್ಗ ಕಲ್ಪಿಸದೆ ಏಕಾಏಕಿ ನಮ್ಮನ್ನು ಅಂಗಡಿಗಳನ್ನು ತೆಗೆದು ಹಾಕಿ ಎನ್ನುತ್ತಿದ್ದಾರೆ. ನಾವು ಎಲ್ಲಿಗೆ ಹೋಗಬೇಕು? ಇದರಿಂದಲೇ ನಮ್ಮ ಕುಟುಂಬ ನಡೆಯುತ್ತಿರುವುದು. ನನಗೀಗ ಇಳಿ ವಯಸ್ಸು. ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮನ್ನು ಖಾಲಿ ಮಾಡಿಸಿದರೆ ಜೀವನ ಮಾಡುವುದು ಹೇಗೆ?”

– ಶಂಕರ್, ಚುರುಮುರಿ ವ್ಯಾಪಾರಿ

” ೨೫ ವರ್ಷಗಳಿಂದ ಅಶೋಕ ವೃತ್ತದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಮಂಗಳವಾರದೊಳಗೆ ಖಾಲಿ ಮಾಡಿ ಎಂದು ಅಧಿಕಾರಿಗಳು ತಾಕೀತು ಮಾಡಿ ಹೋಗಿದ್ದಾರೆ. ಇಲ್ಲಿಂದ ಖಾಲಿ ಮಾಡಿಸಿದರೆ ನಮ್ಮ ಜೀವನ ನಡೆಯುವುದು ಹೇಗೆ? ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಹೇಗೆ? ಇಲ್ಲಿ ನಿರ್ಮಿಸಿರುವ ಫುಡ್‌ಕೋರ್ಟ್ ಸಂಪೂರ್ಣ ಚಿಕ್ಕದು. ಜೊತೆಗೆ ಕೇಂದ್ರವನ್ನು ಉದ್ಘಾಟಿಸುವ ಯಾವ ಪ್ರಕ್ರಿಯೆಯೂ ನಡೆದಿಲ್ಲ.”

– ಮಂಜುನಾಥ್, ಹೋಟೆಲ್ ವ್ಯಾಪಾರಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಉಳುವ ‘ಯೋಗಿ’ ಕೂಗಿಗೆ ಸರ್ಕಾರ ತರ್ತಾಗಿ ಸ್ಪಂದಿಸಲಿ

ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ…

39 mins ago

ಓದುಗರ ಪತ್ರ: ರಾಷ್ಟ್ರಕವಿ ಶ್ಲಾಘನೆಯ ಸ್ಮರಣೆ

೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ…

41 mins ago

ಓದುಗರ ಪತ್ರ: ಸೈಬರ್ ವಂಚನೆ: ಜಾಗೃತಿಯೂ ಫಲ ನೀಡುತ್ತಿಲ್ಲವಲ್ಲ…

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ…

43 mins ago

ಸೇವೆ, ಶಿಕ್ಷಣ, ಸಂಸ್ಕಾರದ ಸಂಗಮವಾಗಿದ್ದ ರಾಜೇಂದ್ರ ಶ್ರೀ

ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…

4 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ…

4 hours ago

ಗಾಂಧಿವಾದಕ್ಕೆ ಮರುಳಾಗಿದ್ದ ಮೈಸೂರಿನ ಯಶೋಧರಾ ದಾಸಪ್ಪ

ರೋಹಿಣಿ ಸಂಗಪ್ಪ ದಳವಾಯಿ ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು,…

4 hours ago