ಕೆ.ಬಿ ರಮೇಶ್ ನಾಯಕ
ಮೈಸೂರು: ಸತತ ಎರಡು ಬಾರಿ ಮೈಸೂರನ್ನು ದೇಶದ ಸ್ವಚ್ಛ ನಗರವಾಗಿ ರೂಪಿಸುವಲ್ಲಿ ಪೌರಕಾರ್ಮಿಕರು ವಹಿಸಿರುವ ಪಾತ್ರ ಅಪಾರವಾಗಿದ್ದು, ನಗರವನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುತ್ತಿರುವ ಬಹಳಷ್ಟು ಪೌರ ಕಾರ್ಮಿಕರಿಗೆ ಇಂದಿಗೂ ತಲೆ ಮೇಲೆ ಸ್ವಂತದೊಂದು ಸೂರು ಇಲ್ಲ. ಈ ಸಮಸ್ಯೆಯನ್ನು ನಿವಾರಿಸಲು ನಗರಪಾಲಿಕೆಯು ಖಾಯಂ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಮೂರು ತಿಂಗಳ ಒಳಗೆ ಮನೆಗಳ ನಿಮಾರ್ಣ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರು-ಮೈಸೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ವೃತ್ತದಿಂದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳುವ ವರ್ತುಲ ರಸ್ತೆ (ಕೆಸರೆ) ಬಳಿಯಲ್ಲಿ ನಗರಪಾಲಿಕೆಗೆ ಸೇರಿದ ಜಾಗದಲ್ಲಿ ಜಿ ಪ್ಲಸ್-೩ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯು ಬಹುತೇಕ ಮುಕ್ತಾಯ ಹಂತದಲ್ಲಿದೆ. ವಿದ್ಯುತ್ ಸಂಪರ್ಕ ಹಾಗೂ ಸುಣ್ಣ ಬಣ್ಣ ಬಳಿಯುವ ಹಾಗೂ ಸಣ್ಣ ಪುಟ್ಟ ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ.
ರಾಜ್ಯ ಸರ್ಕಾರದ ಅನುದಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಶೇ. ೨೪. ೧ ನಿಧಿ ಹಾಗೂ ನಗರ ಪಾಲಿಕೆ ಅನುದಾನವನ್ನು ಬಳಕೆ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗುತ್ತಿದೆ. ಪುಷ್ಪಲತಾ ಜಗನ್ನಾಥ್ ಅವರು ಮಹಾಪೌರರಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಯಿತು. ಆದರೆ, ಜಾಗ ಗುರುತಿಸಲು ಆದ ವಿಳಂಬ ಹಾಗೂ ಕೋವಿಡ್ ಕಾರಣಗಳಿಂದ ಮನೆಗಳ ನಿರ್ಮಾಣ ತಡವಾಯಿತು.
ಪ್ರತಿಮನೆಗೆ ೧೪. ೨೭ ಲಕ್ಷ ರೂ. : ಒಟ್ಟು ೨೨. ೫೪ ಕೋಟಿ ರೂ. ವೆಚ್ಚದಲ್ಲಿ ೧೫೮ ಸುವ್ಯವಸ್ಥಿತ ಜಿ ಪ್ಲಸ್ ೩ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಯನ್ನು ೧೪. ೨೭ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ಮನೆಯು ೧ ಲಿವಿಂಗ್ ಹಾಲ್, ೨ ಬೆಡ್ರೂಂ, ತಲಾ ಒಂದು ಅಡುಗೆ ಮನೆ, ಬಾತ್ ರೂಂ, ಶೌಚಗೃಹವನ್ನು ಒಳಗೊಂಡಿದೆ.
ಜಿ ಪ್ಲಸ್ ೩ ಮನೆಗಳಲ್ಲಿ ವಾಸಿಸುವವರು ಮಹಡಿಗಳಿಗೆ ಹೋಗಿ, ಬರುವುದಕ್ಕಾಗಿ ಲಿಫ್ಟ್ ವ್ಯವಸ್ಥೆಯನ್ನೂ ಒದಗಿಸಲಾಗುವುದು. ವಸ್ತುಗಳನ್ನು ಸಾಗಿಸಲು ಕೂಡ ಲಿಫ್ಟ್ ನೆರವಾಗಲಿದೆ. ಪ್ರತಿ ಮನೆಗೆ ಪಾಲಿಕೆ ೧. ೨೭ ಲಕ್ಷ ರೂ. ವಂತಿಕೆ ನೀಡಲಿದೆ. ರಾಜ್ಯ ಸರ್ಕಾರ ೬ ಲಕ್ಷ ರೂ. , ಶೇ. ೨೪. ೧೦ ನಿಽಯಡಿ ೩ ಲಕ್ಷ ರೂ. , ಫಲಾನುಭವಿ ವಂತಿಕೆ ೨. ೫೦ ಲಕ್ಷ ರೂ. , ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೧. ೫೦ ಲಕ್ಷ ರೂ. ನೀಡಲಾಗುವುದು. ಆದರೆ, ಇಷ್ಟೊಂದು ಮೊತ್ತ ನಮಗೆ ಪಾವತಿಸಲು ಸಾಧ್ಯವಿಲ್ಲ. ಉಚಿತವಾಗಿ ಮನೆಗಳನ್ನು ನೀಡಬೇಕು ಎಂಬುದು ಪೌರಕಾರ್ಮಿಕರ ಒತ್ತಾಯವಾಗಿದೆ.
ಎರಡು ಬಾರಿ ಜಾಗ ಬದಲು: ಪ್ರಾರಂಭದಲ್ಲಿ ಪೌರ ಕಾರ್ಮಿಕರಿಗೆ ಸೀವೇಜ್ ಫಾರ್ಮ್ಗೆ ಹೊಂದಿಕೊಂಡಿರುವ ಮೈಸೂರು-ಊಟಿ ರಸ್ತೆಯಲ್ಲಿರುವ ಎರಡು ಎಕರೆ ಜಾಗದಲ್ಲಿ ಜಿ ಪ್ಲಸ್ ೩ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯು ೨೦೧೪ರಲ್ಲಿ ಸೀವೇಜ್ ಫಾರ್ಮ್ ಸುತ್ತಲಿನ ೫೦೦ ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಿದ್ದು, ಪಾಲಿಕೆ ಗುರುತಿಸಿದ ಜಾಗವು ೫೦೦ ಮೀಟರ್ ಒಳಗೆ ಇದ್ದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಕೈಬಿಡಲಾಯಿತು. ನಂತರ ಪಾಲಿಕೆಯ ಮನವಿ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಽಕಾರವು ಮಳಲ ವಾಡಿಯಲ್ಲಿ ೧. ೨೦ ಎಕರೆ ಜಾಗವನ್ನು ಒದಗಿಸಿತ್ತು. ಆದರೆ, ವಿವಿಧ ಕಾರಣಗಳಿಂದ ಅಲ್ಲಿ ಮನೆಗಳನ್ನು ನಿರ್ಮಿಸಲು ಪಾಲಿಕೆಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಸರೆಯಲ್ಲಿರುವ ಪಾಲಿಕೆಗೆ ಸೇರಿದ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಜಾಗ ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿಯಲ್ಲಿಯೇ ಇದ್ದು, ಸುಂದರವಾದ ಪರಿಸರವನ್ನು ಹೊಂದಿದ್ದು, ಮೈಸೂರಿಗೂ ಹತ್ತಿರವಾಗಿದೆ. ನಗರಪಾಲಿಕೆಯಲ್ಲಿ ೪೦೦ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಸ್ವಂತ ಮನೆ ಇಲ್ಲ. ಈ ಯೋಜನೆ ಜಾರಿಗೆ ಬಂದರೆ ೧೫೮ ಜನರಿಗೆ ಸ್ವಂತ ಸೂರು ಲಭ್ಯವಾಗಲಿದೆ.
• ಅನಧಿಕೃತ ಜಾಹೀರಾತು ಹಾಕಿದರೆ ಕ್ರಿಮಿನಲ್ ಕೇಸ್ • ವಿಧಾನಸಭೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತು ನೀತಿ ಮಸೂದೆ ಮಂಡನೆ,…
ಬೆಂಗಳೂರು : ರಾಜ್ಯದಲ್ಲಿ ವಕ್ಛ್ ಆಸ್ತಿಗಳ ಒತ್ತುವರಿಯನ್ನು ತೆರವುಗೊಳಿಸಿ ಆಸ್ತಿಗಳನ್ನು ಮರಳಿ ಪಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಸತಿ,…
ಮಳವಳ್ಳಿ : ಒಳಮೀಸಲಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿಗಳನ್ನು ಒಡೆಯುವ ನೀತಿಯನ್ನು ಅನುಸರಿಸಿದೆ…
ಚಾಮರಾಜನಗರ : ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಯುಗಾದಿ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದ ಸಭೆ…
ಮಂಡ್ಯ : 2027ರ ಜನಗಣತಿಯು ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ, ಕಾರ್ಯಾಚರಣೆಯನ್ನು ದೋಷರಹಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕುಮಾರ ಅವರು ತಾಂತ್ರಿಕ…
ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ…