ಕೆ.ಬಿ.ರಮೇಶನಾಯಕ
೨,೦೦೦ ರೂ. ಟಿಕೆಟ್ಗೆ ಭರ್ಜರಿ ಬೇಡಿಕೆ
ಪ್ರಾಧಿಕಾರದ ಖಜಾನೆಗೆ ೩೭ ಲಕ್ಷ ರೂ. ಆದಾಯ
ಟಿಕೆಟ್ಗೆ ಬೇಡಿಕೆ ಮತ್ತಷ್ಟು ಹೆಚ್ಚಳ ಸಾಧ್ಯತೆ
ಟಿಕೆಟ್ ಖರೀದಿಸಿದವರಿಗೆ ಗಿಫ್ಟ್ ಬಾಕ್ಸ್ ವಿತರಣೆ
ನೂತನ ವ್ಯವಸ್ಥೆ ನಿರಂತರ ಮುಂದುವರಿಕೆ: ರೂಪಾ
ಮೈಸೂರು: ಆಷಾಢಮಾಸ ಶುಕ್ರವಾರದ ಪ್ರಯುಕ್ತ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ನೇರ ಅವಕಾಶ ಕಲ್ಪಿಸಲು ಮೊದಲ ಬಾರಿಗೆ ಜಾರಿಗೆ ತಂದಿರುವ ೨ ಸಾವಿರ ರೂ.ದರ್ಶನದ ಟಿಕೆಟ್ಗಳು ಭರ್ಜರಿಯಾಗಿ ಬಿಕರಿಯಾಗಿವೆ. ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕಳೆದ ಮೂರು ದಿನಗಳಲ್ಲಿ ೨ ಸಾವಿರ ರೂ. ಟಿಕೆಟ್ ಅನ್ನು ಪಡೆದು ದೇವರ ದರ್ಶನ ಮಾಡುವುದಕ್ಕೆ ನಿರೀಕ್ಷೆ ಮೀರಿ ಭಕ್ತರು ಒಲವು ತೋರಿರುವ ಕಾರಣ ಈ ವ್ಯವಸ್ಥೆಯನ್ನು ನಿರಂತರವಾಗಿ ಮುಂದು ವರಿಸಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ದೇವರ ದರ್ಶನಕ್ಕೆ ಬಂದವರು ಬರಿಗೈಲಿ ಹೋಗದಂತೆ ಹಾಗೂ ಹಣ ಕೊಟ್ಟದ್ದಕ್ಕೂ ಸಾರ್ಥಕ ಎನ್ನುವಂತೆ ಒಂದು ಉಡುಗೊರೆಯುಳ್ಳ ಬ್ಯಾಗ್ನ್ನು ಕೊಡುತ್ತಿರುವುದು ಕೂಡ ೨,೦೦೦ ರೂ. ಟಿಕೆಟ್ಗೆ ಬೇಡಿಕೆ ಹೆಚ್ಚಳಕ್ಕೆ ಪೂರಕವಾಗಿದೆ. ಆಷಾಢಮಾಸ ಹಾಗೂ ನವರಾತ್ರಿಯ ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ ಲಕ್ಷಾಂತರ ಜನರು ಭೇಟಿ ನೀಡಿ ದರ್ಶನ ಪಡೆಯುವುದು ಮಾಮೂಲಿಯಾಗಿದೆ. ಅದರಲ್ಲೂ ಆಷಾಢ ಮಾಸದ ನಾಲ್ಕು ಶುಕ್ರವಾರಗಳಂದು ಮತ್ತು ಚಾಮುಂಡೇಶ್ವರಿ ವರ್ಧಂತಿಯ ದಿನದಂದು ಅಂದಾಜು ೧ರಿಂದ ಒಂದೂವರೆ ಲಕ್ಷ ಭಕ್ತಾದಿಗಳು ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ಸಾಮಾನ್ಯವಾಗಿದೆ. ಹಾಗಾಗಿ, ಆಷಾಢ ಶುಕ್ರವಾರದಂದು ೧೦೦ ರೂ. ಮತ್ತು ೩೦೦ ರೂ.ಟಿಕೆಟ್ ವ್ಯವಸ್ಥೆ ಯನ್ನು ಕಲ್ಪಿಸಲಾಗಿತ್ತು. ಆದರೆ, ಮುಜರಾಯಿ ಇಲಾಖೆಯಿಂದ ಬೇರ್ಪಟ್ಟು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವಾಗಿ ರೂಪುಗೊಂಡ ನಂತರ ಬಂದಿರುವ ಮೊದಲನೇ ವರ್ಷದಲ್ಲಿ ಜಾರಿಗೊಳಿಸಿದ ೨,೦೦೦ ರೂ.ಟಿಕೆಟ್ ದರ್ಶನದ ವ್ಯವಸ್ಥೆ ಯಶಸ್ವಿಯಾಗಿದೆ. ಈ ವ್ಯವಸ್ಥೆ ಯನ್ನು ಅನುಷ್ಠಾನಕ್ಕೆ ತರುವಾಗ ಜಿಲ್ಲಾಧಿಕಾರಿಗಳು ಮತ್ತು ಕಾರ್ಯದರ್ಶಿಗಳಲ್ಲಿ, ವಿರೋಧ ಕಂಡು ಬಂದರೆ ಯಾವ ರೀತಿ ಹೆಜ್ಜೆ ಇಡಬೇಕೆಂಬ ಆಲೋ ಚನೆ ಬಂದಿತ್ತು. ಹಾಗಾಗಿ, ಸರ್ಕಾರದ ಗಮನಕ್ಕೆ ತಂದು ಅಂತಿಮವಾಗಿ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಿದರು.
೨ ಸಾವಿರ ರೂ. ಕೊಟ್ಟು ದೇವರ ದರ್ಶನ ಮಾಡಬೇಕಾ ಎಂಬ ಕುಹಕದ ಮಾತುಗಳ ನಡುವೆ ಆಷಾಢ ಮಾಸದ ಮೊದಲನೇ ಶುಕ್ರವಾರ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಅಧಿಕಾರಿಗಳ ಮನದಲ್ಲಿ ಸಂತಸವನ್ನುಂಟು ಮಾಡಿದೆ.
ಪ್ರಾಧಿಕಾರಕ್ಕೆ ಆದಾಯ: ಎರಡು ಸಾವಿರ ರೂ.ಟಿಕೆಟ್ ವ್ಯವಸ್ಥೆಗೆ ಉತ್ತಮ ಸ್ಪಂದನೆ ದೊರೆತಿರುವುದರಿಂದ ಪ್ರಾಧಿಕಾರಕ್ಕೆ ಆದಾಯ ತಂದುಕೊಟ್ಟಿದೆ. ಆಷಾಢ ಶುಕ್ರವಾರ ೨,೦೦೦ ರೂ. ಟಿಕೆಟ್ನ್ನು ೧,೮೮೧ ಮಂದಿ, ೩೦೦ ರೂ.ಟಿಕೆಟ್ನ್ನು ೩,೪೧೫ ಮಂದಿ ಪಡೆದಿದ್ದರೆ, ಶನಿವಾರ ೨೦೦ ಮಂದಿ ೨ ಸಾವಿರ ರೂ. ಟಿಕೆಟ್, ೨,೩೮೪ ಜನರು ೩೦೦ ರೂ. ಟಿಕೆಟ್ ಪಡೆದು ದರ್ಶನ ಮಾಡಿದ್ದಾರೆ. ಭಾನುವಾರ ಕೂಡ ೨ ಸಾವಿರ ರೂ.ಟಿಕೆಟ್ ಪಡೆದು ದರ್ಶನ ಮಾಡಿರುವುದು ಗಮನಾರ್ಹವಾಗಿದೆ. ೨ ಸಾವಿರ ಟಿಕೆಟ್ನಿಂದಲೇ ಬರೋಬ್ಬರಿ ೩೭ ಲಕ್ಷ ರೂ. ಆದಾಯ ಪ್ರಾಧಿಕಾರದ ಖಜಾನೆಗೆ ಸೇರಿದೆ.
ಗಿಫ್ಟ್ ಬಾಕ್ಸ್ ವಿಶೇಷತೆ: ಚಾಮುಂಡಿಬೆಟ್ಟಕ್ಕೆ ಬಂದಾಗ ಏನಾದರೂ ವಸ್ತು ಖರೀದಿಸಬೇಕೆಂಬ ಹಂಬಲ ಹೊತ್ತು ಬರುವವರಿಗೆ, ೨,೦೦೦ ರೂ. ಜತೆಗೆ ದೊರೆಯುವ ಗಿಫ್ಟ್ ಬಾಕ್ಸ್ ವಿಶೇಷವಾಗಿ ಗಮನ ಸೆಳೆದಿದೆ.
ಪ್ರಾಧಿಕಾರದ ಲೋಗೋ ಇರುವ ಬ್ಯಾಗ್ನಲ್ಲಿ ನೀರು ತುಂಬಿದ ಒಂದು ಗಾಜಿನ ಬಾಟಲ್, ಚಾಮುಂಡೇಶ್ವರಿ ವಿಗ್ರಹದ ಫೋಟೊ, ಲಡ್ಡು, ಕುಂಕುಮ ಮತ್ತಿತರ ಪ್ರಸಾದ ಇರುತ್ತವೆ. ಅಲ್ಲದೆ, ದರ್ಶನದ ನಂತರ ಸಕ್ಕರೆ ಬಾಳೆ ಹಣ್ಣಿನ ಪ್ರಸಾದ ವಿತರಿಸಿದರೆ, ಹೊರಬರುವಾಗ ಗಿಫ್ಟ್ ಬಾಕ್ಸ್ ಸಿಗುತ್ತದೆ. ಇದರಿಂದಾಗಿ ಎರಡು ಸಾವಿರ ರೂ. ಖರ್ಚು ಮಾಡಿದೆವು ಎಂಬ ಚಿಂತೆ ಕಾಡುವುದಿಲ್ಲ.
ನಿರಂತರವಾಗಿ ಮುಂದುವರಿಸಲು ಚಿಂತನೆ: ಆಷಾಢ ಮಾಸದಲ್ಲಿ ಜಾರಿಗೆ ತಂದಿರುವ ೨ ಸಾವಿರ ರೂ.ಟಿಕೆಟ್ ದರ್ಶನದ ವ್ಯವಸ್ಥೆಯನ್ನು ನಿರಂತರವಾಗಿ ಮುಂದುವರಿಸಲು ಪ್ರಾಧಿಕಾರ ಮಾನಸಿಕವಾಗಿ ತಯಾರಾಗಿದೆ. ಆಷಾಢ ಮತ್ತು ನವರಾತ್ರಿ ಹೊರತುಪಡಿಸಿ ಉಳಿದ ರಜಾದಿನಗಳಲ್ಲೂ ಸಾಕಷ್ಟು ಭಕ್ತರು ಆಗಮಿಸುವ ಕಾರಣ ಖರೀದಿ ಮಾಡಲು ನೆರವಾಗಲಿದೆ. ಹಾಗಾಗಿ, ಆಷಾಢದ ನಂತರವೂ ಇದೇ ಟಿಕೆಟ್ ದರದ ದರ್ಶನ ವ್ಯವಸ್ಥೆಯನ್ನು ಮುಂದುವರಿಸುವ ತೀರ್ಮಾನ ಮಾಡಲಾಗುವುದು ಎಂದು ಹೇಳಲಾಗಿದೆ.
” ಆಷಾಢ ಮಾಸದ ಮೊದಲನೇ ಶುಕ್ರವಾರ ೨ ಸಾವಿರ ರೂ. ಟಿಕೆಟ್ ಪಡೆದು ದರ್ಶನ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಭಕ್ತಾದಿಗಳಿಂದ ಸ್ಪಂದನೆ ದೊರೆತಿದೆ. ಭಾನುವಾರ ಕೂಡ ನಿರೀಕ್ಷೆಗೆ ಮೀರಿ ೨ ಸಾವಿರ ರೂ.ಟಿಕೆಟ್ ಪಡೆದು ದರ್ಶನ ಮಾಡಿರುವವರ ಸಂಖ್ಯೆ ಕಂಡುಬಂದಿದೆ. ಈ ವ್ಯವಸ್ಥೆಯನ್ನು ನಿರಂತರವಾಗಿ ಮುಂದುವರಿಸಲಾಗುವುದು.”
-ಎಂ.ಜೆ.ರೂಪಾ, ಕಾರ್ಯದರ್ಶಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.
ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…
ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…
ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…
ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…
ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…