ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗಾಗಿ ಹೊಸ ತಂತ್ರ ಪ್ರಯೋಗ!
ಎಚ್.ಎಸ್.ದಿನೇಶ್ ಕುಮಾರ್
ಮೈಸೂರು: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ ಕಡಿಮೆಯಾಗಿಲ್ಲ. ಕಾರುಗಳನ್ನು ಅಡ್ಡಗಟ್ಟಲು ಹೊಸ ಹೊಸ ತಂತ್ರಗಳನ್ನು ಕಳ್ಳರು ಪ್ರಯೋಗ ಮಾಡುತ್ತಿದ್ದಾರೆ. ಹಾಗಾಗಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಅದರಲ್ಲಿಯೂ ಕಾರಿನಲ್ಲಿ ಪ್ರಯಾಣಿಸುವವರು ಆತಂಕಕ್ಕೊಳಗಾಗಿದ್ದಾರೆ.
ನಿರಂತರ ಅಪಘಾತ, ಟೋಲ್ ವಿವಾದಗಳಿಂದ ಸಾಕಷ್ಟು ಚರ್ಚೆಯಲ್ಲಿರುವ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಇದೀಗ ಪದೇ ಪದೆ ಪ್ರಯಾಣಿಕರನ್ನು ದೋಚುತ್ತಿರುವುದು ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಆತಂಕ ಮೂಡುವಂತೆ ಮಾಡಿದೆ.
ಹೆದ್ದಾರಿಯಲ್ಲಿ ವಾಹನ ನಿಲುಗಡೆ ಮಾಡುವುದೇ ಅಪಾಯ ಎಂಬಂತಹಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡುವ ತಂಡ ವ್ಯವಸ್ಥಿತವಾಗಿ ಸಂಚು ಮಾಡುತ್ತಿದೆ ಎಂಬುದು ಅನೇಕ ಪ್ರಕರಣಗಳಿಂದ ಬಹಿರಂಗಗೊಂಡಿದೆ.
ಇದೀಗ ಇಂತಹುದೇ ಒಂದು ಘಟನೆ ಬೆಂಗಳೂರಿನ ಕುಂಬಳಗೋಡು ಬಳಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರನ್ನು ಕುಂಬಳಗೋಡು ಸಮೀಪ ಅಡ್ಡಗಟ್ಟಿ ನಿಲ್ಲಿಸಲು ಖದೀಮನೊಬ್ಬ ಹೊಸ ತಂತ್ರವನ್ನು ಬಳಸಿದ್ದಾನೆ. ಆದರೆ, ಆತನಿಗೆ ಕಾರು ಚಾಲಕ ಸಮಯ ಪ್ರಜ್ಞೆಯಿಂದ ಚಳ್ಳೆಹಣ್ಣು ತಿನ್ನಿಸಿ, ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ.
ಘಟನೆ ವಿವರ: ಎರಡು ದಿನಗಳ ಹಿಂದೆ ಚಾಲಕ ದೀಪ ದರ್ಶನ್ ಎಂಬವರು ತಮ್ಮ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದರು. ಈ ವೇಳೆ ಬಿಡದಿ ಬಳಿಯ ಕುಂಬಳಗೋಡು ಬಳಿ ದುಷ್ಕರ್ಮಿಯೊಬ್ಬ ರಸ್ತೆ ಬದಿಯಲ್ಲಿ ಮರದ ದೊಡ್ಡಕೊಂಬೆಯನ್ನು ಇಟ್ಟುಕೊಂಡುಕುಳಿತಿದ್ದಾನೆ. ಕಾರು ಹತ್ತಿರ ಬರುತ್ತಿದ್ದಂತೆ ಆತ ಮರದ ಕೊಂಬೆಯನ್ನು ರಸ್ತೆಗೆ ತಳ್ಳಿದ್ದಾನೆ. ತಕ್ಷಣವೇ ಎಚ್ಚೆತ್ತ ದೀಪ್ ಕಾರನ್ನು ಎಡಕ್ಕೆ ತಿರುಗಿಸಿ ವೇಗವಾಗಿ ಅಲ್ಲಿಂದ ಬಂದಿದ್ದಾರೆ. ತಕ್ಷಣವೇ ಅವರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಬಿಡದಿ
ಠಾಣಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ನಂತರ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿ ಪತ್ತೆಗೆ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ.
ಸರ್ವೀಸ್ ರಸ್ತೆಯಲ್ಲಿ ಕೂಡ ಸುಲಿಗೆ
ಬೆಂಗಳೂರು ಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಕೂಡ ಆಗಿಂದಾಗ್ಗೆ ಸುಲಿಗೆ ಪ್ರಕರಣಗಳು ವರದಿಯಾಗುತ್ತವೆ. ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿರುವ ಸಮಯದಲ್ಲಿ ಪ್ರಯಾಣಿಕರನ್ನು ದೋಚಲಾಗುತ್ತಿದೆ. ಅಲ್ಲಿ ವಿದ್ಯುತ್ ದೀಪ, ಸಿಸಿ ಕ್ಯಾಮೆರಾ ಇಲ್ಲದಿರುವುದೇ ದರೋಡೆಗೆ ಕಾರಣವಾಗಿದೆ.
ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಜನರು, ಪ್ರಾಣಿಗಳು ವಿನಾಕಾರಣ ಪ್ರವೇಶ ಪಡೆಯದಂತೆ ಅಳವಡಿಸಿರುವ ಫೆನ್ಸಿಂಗ್ ಅಲ್ಲಲ್ಲಿ ಕಿತ್ತು ಹೋಗಿದ್ದು, ಇದರಿಂದಾಗಿ ಸುರಕ್ಷತೆ ಇಲ್ಲದಂತಾಗಿದೆ. ಈ ಮೂಲಕವೂ ಕಳ್ಳರು ಪ್ರವೇಶ ಪಡೆದು ದರೋಡೆಗಿಳಿಯುತ್ತಿದ್ದಾರೆ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ:
ಸರ್ವೀಸ್ ರಸ್ತೆಯಲ್ಲಿ ಸಿಸಿಟಿವಿ ಅಳವಡಿಸುವುದು ಅತ್ಯಗತ್ಯವಾಗಿದೆ. ಹೆದ್ದಾರಿಯಲ್ಲಿ ಕಿತ್ತುಹೋಗಿರುವ ತಂತಿ ಬೇಲಿಗಳನ್ನು ದುರಸ್ತಿ ಮಾಡಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಭದ್ರತಾ ಉಸ್ತುವಾರಿ ವಹಿಸಿಕೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…