ನವೀನ್ ಡಿಸೋಜ
ಪ್ರತಿ ಮನೆಗೂ ಕೊಳವೆ ಸಂಪರ್ಕ; ಒಟ್ಟು ೧೨೧.೯೪ ಕಿ.ಮೀ. ಪೈಪ್ಲೈನ್, ೭೯,೧೧೭ ಮನೆಗಳಿಗೆ ನೀರಿನ ಸೌಲಭ್ಯ
ಮಡಿಕೇರಿ: ಅಮೃತ್ ೨.೦ ಯೋಜನೆಯಡಿ ನಗರದ ಹಾಲಿ ನೀರಿನ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ರತಿ ಮನೆಗೂ ಕೊಳವೆ ಸಂಪರ್ಕ ಕಲ್ಪಿಸುವ ೪೭.೪೧ ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದೆ.
೨ ಹಂತಗಳಲ್ಲಿ ನಡೆಯಲಿರುವ ಯೋಜನೆಯ ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಮನೆ ಮನೆಗೆ ನೀರಿನ ಪೈಪ್ಲೈನ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಮೃತ್ ೨.೦ ಯೋಜನೆಯಡಿ ರಾಜ್ಯದಲ್ಲಿರುವ ೧ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಮಡಿಕೇರಿ ನಗರವೂ ಒಳಗೊಂಡಿದೆ.
ಮೊದಲ ಹಂತದಲ್ಲಿ ೫೭.೮೭ ಕಿ.ಮೀ. ಮತ್ತು ೨ನೇ ಹಂತದಲ್ಲಿ ೭೦.೦೭ ಕಿ.ಮೀ. ಸೇರಿದಂತೆ ಒಟ್ಟು ೧೨೧.೯೪ ಕಿ. ಮೀ. ಪೈಪ್ಲೈನ್ ನಿರ್ಮಾಣ ಮಾಡುವುದರೊಂದಿಗೆ ನಗರದ ೭೯,೧೧೭ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಹಾಲಿ ಇರುವ ನೀರಿನ ಸಂಗ್ರಹ, ಶುದ್ಧೀಕರಣ ಘಟಕಗಳನ್ನೂ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ.
೨೦೧೬ರಲ್ಲಿ ಕುಂಡಾ ಮೇಸ್ತ್ರಿ ಮತ್ತು ಕೂಟು ಹೊಳೆಯಿಂದ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಯೋಜನೆ ಆರಂಭವಾಗಿದ್ದು, ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಆದರೆ, ಕುಂಡಾಮೇಸ್ತ್ರಿ ಯೋಜನೆಯಲ್ಲಿ ನಗರದೊಳಗಿನ ಕೊಳವೆ ಸಂಪರ್ಕಗಳನ್ನು ಬದಲಿಸಿರಲಿಲ್ಲ. ಬದಲಿಗೆ ಹಳೆಯ ಪೈಪ್ಲೈನ್ಗೆ ಸಂಪರ್ಕ ಕಲ್ಪಿಸುವ ಮೂಲಕ ನೀರಿನ ಸರಬರಾಜು ಮಾಡಲಾಗುತ್ತಿದೆ. ನಗರಕ್ಕೆ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಭೇಟಿ ನೀಡುವುದರಿಂದ ಮತ್ತು ಈಗಿರುವ ಹಳೆಯ ಪೈಪ್ ಲೈನ್ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಳವಾಗುವ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಪೂರೈಕೆ ಕಷ್ಟವಾಗಲಿದೆ.
ಈ ಹಿನ್ನೆಲೆಯಲ್ಲಿ ಪೈಪ್ಲೈನ್ ಬದಲಾವಣೆ, ಹೊಸ ಸಂಪರ್ಕಗಳನ್ನು ಕಲ್ಪಿಸಲಾಗುತ್ತಿದೆ. ಆ ಮೂಲಕ ನಗರದ ಎಲ್ಲ ಮನೆಗಳಿಗೂ ಮೀಟರ್ ಸೌಲಭ್ಯದೊಂದಿಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ನಗರದಲ್ಲಿ ೩೯,೦೦೦ ಜನಸಂಖ್ಯೆಯಿದ್ದು, ನೀರಿನ ಬೇಡಿಕೆ(ತಲಾ ೧೩೫ ಲೀ.ನಂತೆ) ಪ್ರತಿ ದಿನ ೫.೨೭ ಮೆಗಾ ಲೀ. ಅವಶ್ಯವಿದೆ.
೪೭.೪೧ ಕೋಟಿ ರೂ. ಯೋಜನೆ:
ಅಮೃತ್ ೨.೦ ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ.೫೦ ರಷ್ಟನ್ನು ಕೇಂದ್ರ ಸರ್ಕಾರ ಭರಿಸಿದರೆ, ಶೇ.೪೦ರಷ್ಟನ್ನು ರಾಜ್ಯ ಸರ್ಕಾರ ಉಳಿದ ಶೇ.೧೦ರಷ್ಟನ್ನು ಸ್ಥಳೀಯ ಸಂಸ್ಥೆ ಭರಿಸಲಿದೆ. ಅದರಂತೆ ಮೊದಲ ಹಂತದ ಕಾಮಗಾರಿಯ ೧೯.೯೦ ಕೋಟಿ ರೂ.ಗಳ ಪೈಕಿ ಕೇಂದ್ರ ಸರ್ಕಾರ ೮.೫೫ ಕೋಟಿ ರೂ., ರಾಜ್ಯ ಸರ್ಕಾರ ೬.೮೪ ಕೋಟಿ ರೂ. ಮತ್ತು ನಗರಸಭೆಯಿಂದ ಶೇ.೪.೫೨ ಕೋಟಿ ರೂ. ಭರಿಸಲಾಗುತ್ತದೆ. ೨ನೇ ಹಂತದ ಕಾಮಗಾರಿಯ ಅಂದಾಜು ವೆಚ್ಚ ೨೭.೫೧ ಕೋಟಿ ರೂ. ಆಗಿದ್ದು, ಕೇಂದ್ರ ಸರ್ಕಾರ ೧೨.೭೭ ಕೋಟಿ ರೂ., ರಾಜ್ಯ ಸರ್ಕಾರ ೧೦.೨೨ ಕೋಟಿ ರೂ. ಮತ್ತು ನಗರಸಭೆ ೬.೧೬ ಕೋಟಿ ರೂ. ಭರಿಸಲಿದೆ.
” ಅಮೃತ್ ೨.೦ ಯೋಜನೆಯಡಿ ೨ ಹಂತಗಳ ಯೋಜನೆಯ ಕಾಮಗಾರಿ ಒಟ್ಟಾಗಿ ಆರಂಭವಾಗಿದೆ. ನಗರದ ಮನೆ ಮನೆಗೂ ಪೈಪ್ ಲೈನ್ ಮತ್ತು ಮೀಟರ್ ಅಳವಡಿಕೆ ಜತೆಗೆ ನೀರಿನ ಸಂಗ್ರಹಾಗಾರಗಳ ದುರಸ್ತಿ, ಅಭಿವೃದ್ಧಿ ಕಾಮಗಾರಿಯನ್ನೂ ಈ ಯೋಜನೆ ಒಳಗೊಂಡಿದೆ.”
-ಎ.ಪ್ರಸನ್ನ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಮೈಸೂರು: ಮೂವರು ಬೇಟೆಗಾರರ ಎನ್ಕೌಂಟರ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…
ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…
ಮಹಾದೇಶ್ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…
ಹೊಸದಿಲ್ಲಿ : ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ ಪ್ರಧಾನಿ…
ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಸದಾಶಿವನಗರದಲ್ಲಿರುವ ತಮ್ಮ…