Andolana originals

ವಿ.ನಾಲೆಯುದ್ದಕ್ಕೂ ತಡೆಗೋಡೆ ನಿರ್ಮಾಣಕ್ಕೆ ಕ್ರಮ

ಸರಣಿ ಅವಘಡಗಳ ಕೂಪ: ಕೊನೆಗೂ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ

೨.೫ ಕಿ.ಮೀ. ದೂರ ಮೆಟಲ್ ಕ್ರಾಸ್‌ಬ್ಯಾರಿಯರ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿ

ಹೇಮಂತ್‌ಕುಮಾರ್

ಮಂಡ್ಯ: ಹಲವು ಅವಘಡಗಳು ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡ ಆಡಳಿತ ಕೊನೆಗೂ ವಾಹನ ಸಂಚಾರ ದಟ್ಟಣೆ ಇರುವ ಆಯ್ದ ಸ್ಥಳಗಳಲ್ಲಿ ವಿಶ್ವೇಶ್ವರಯ್ಯ ನಾಲೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಡೆಗಟ್ಟಲು ಕ್ರಮ ಕೈಗೊಂಡಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಮಂಡ್ಯ ತಾಲ್ಲೂಕಿನ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತಿಬ್ಬನಹಳ್ಳಿ (ಜಯಪುರ) ಗ್ರಾಮವು ಕೆಆರ್‌ಎಸ್‌ನಿಂದ ೩೨ನೇ ಕಿ.ಮೀ. ದೂರಲ್ಲಿದೆ. ಏಷ್ಯಾದ ಮೊದಲ ಜಲ ಸುರಂಗವಿರುವ ಸ್ಥಳವಿದು. ಹಾಗಾಗಿ ಟನಲ್ ಹುಲಿಕೆರೆಯೆಂದೇ ಪ್ರಸಿದ್ಧಿ. ಇಲ್ಲಿಂದ ಜಯಪುರದವರೆಗೆ ಮೂರು ಕಿ.ಮೀ. ದೂರದ ಕಾಲುವೆಯು ಬಲಭಾಗದಲ್ಲಿ ಹರಿಯುತ್ತದೆ. ಈ ಕಾಲುವೆಯ ಒಂದು ಬದಿಗೆ ತಡೆಗೋಡೆಯನ್ನು ಆರು ಅಡಿ ಎತ್ತರದಲ್ಲಿ ನಿರ್ಮಿಸಿದರೆ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದು ಗ್ರಾಮಸ್ಥರ ಆಗ್ರಹ. ಈ ಭಾಗದಲ್ಲಿ ಶಾಲೆ ಕಾಲೇಜಿನ ಮಕ್ಕಳು ಓಡಾಡುತ್ತಿರುತ್ತಾರೆ. ಖಾಸಗಿ ಸಂಸ್ಥೆ ಬಸ್ಸುಗಳು ಹಾಗೂ ಸರ್ಕಾರಿ ಬಸ್ಸುಗಳು ಹೆಚ್ಚು ಸಂಚರಿಸುತ್ತವೆ. ಹಾಗೆಯೇ ಈ ಭಾಗದ ತರಕಾರಿ, ಕಬ್ಬು, ಭತ್ತ, ಬೆಳೆಯುವ ರೈತರು ಇದೇ ಮಾರ್ಗವಾಗಿ ಕೃಷಿ ಉತ್ಪನ್ನಗಳನ್ನು ಸಾಗಿಸುತ್ತಾರೆ.

ಮಂಡ್ಯದಿಂದ ಹುಲಿಕೆರೆ ಮಾರ್ಗವಾಗಿ ಪಾಂಡವಪುರ, ಮೈಸೂರು-ಬೆಂಗಳೂರಿಗೆ ಹೋಗುವ ಖಾಸಗಿ ವಾಹನಗಳು ಸೇರಿದಂತೆ ಇತರ ಹಳ್ಳಿಗಳಿಗೆ ಹೋಗುವ ಬಸ್ಸುಗಳು ಕೂಡ ಇದೇ ಹಾದಿಯಲ್ಲಿ ಸಾಗುತ್ತವೆ. ಈಗಾಗಲೇ ಈ ಭಾಗದಲ್ಲಿ ಸರಣಿ ದುರಂತಗಳು ಸಂಭವಿಸಿವೆ.

ನಾಮಕಾವಸ್ತೆಗೆ ತಡೆಗೋಡೆ ನಿರ್ಮಾಣ ಜಯಪುರ ಗ್ರಾಮದಲ್ಲಿ ಹೆಚ್ಚು ಕಡಿದಾದ ತಿರುವಿದೆ. ನಾಮಕಾವಸ್ತೆಗೆ ಅರ್ಧ ಕಿ.ಮೀ. ಮಾತ್ರ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದಾರೆ. ಇಂತಹ ಅನಾಹುತಗಳನ್ನು ತಡೆಯಲು ಕಾಲುವೆಯ ಪಕ್ಕ ತಡೆಗೋಡೆ ಹಾಗೂ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ಜಾಗವನ್ನು ವಿಸ್ತರಿಸಿ ಪೂರ್ಣ ಪ್ರಮಾಣದ ರಸ್ತೆಯನ್ನು ನಿರ್ಮಿಸುವ ಮೂಲಕ ಅವಘಡಗಳನ್ನು ತಡೆಗಟ್ಟುವಂತೆ ಜಯಪುರದ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.

ಕಾಮಗಾರಿ ಆರಂಭ: ಇದೀಗ ಜಿಲ್ಲಾಡಳಿತ, ನೀರಾವರಿ ಇಲಾಖೆ ಎಚ್ಚೆತ್ತುಕೊಂಡಿದ್ದು, ವಿಸಿ ನಾಲೆ ಟನಲ್‌ನ ಎಕ್ಸಿಟ್ ಪಾಯಿಂಟ್‌ನಿಂದ ಹಳೆ ಮದ್ದೂರು ಶಾಖಾ ನಾಲೆಯವರೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭಿಸಿದೆ.ತಮ್ಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಜಿಲ್ಲಾಧಿಕಾರಿ ಕುಮಾರ್ ಅವರಿಗೆ ಸ್ಥಳೀಯ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಅಸಲಿಗೆ ಇದು ವಾಹನ ಸಂಚಾರದ ರಸ್ತೆಯೇ ಅಲ್ಲ!:

ಮಂಡ್ಯ: ಯಾವುದೇ ಅವಘಡಗಳು ಸಂಭವಿಸಿದ ಕೂಡಲೇ ನೀರಾವರಿ ಇಲಾಖೆಯವರು ತಡೆಗೋಡೆ ನಿರ್ಮಿಸಿಲ್ಲ. ಅವರಿಗೆ ಮಾನವೀಯತೆಯೇ ಇಲ್ಲ ಎಂದು ಜನರು ಆರೋಪಿಸುವುದು ವಾಡಿಕೆಯಾಗಿದೆ. ಆದರೆ, ವಾಸ್ತವವೇ ಬೇರೆ ಇದೆ. ಟನಲ್ ಹುಲಿಕೆರೆ ಉದ್ದಕ್ಕೂ ಇರುವ ರಸ್ತೆಯು ವಿ.ನಾಲೆಯ ಸರ್ವೀಸ್ ರಸ್ತೆಯಾಗಿದ್ದು, ಇದನ್ನು ಲೋಕೋಪಯೋಗಿ ಇಲಾಖೆ ಸಾರ್ವಜನಿಕ ಸಂಚಾರ ರಸ್ತೆಯನ್ನಾಗಿ ಬಳಸಿಕೊಂಡು ಡಾಂಬರು ಹಾಕಿ ವಾಹನಗಳಿಗೆ ಅನುವು ಮಾಡಿಕೊಟ್ಟಿದೆ. ಆದರೂ ನಮ್ಮ ಕಾವೇರಿ ನೀರಾವರಿ ನಿಗಮವು ಮಾನವೀಯತೆ ದೃಷ್ಟಿಯಿಂದ ಸುಮಾರು ೨.೫ ಕಿ.ಮೀ. ದೂರ ಮೆಟಲ್ ಕ್ರಾಸ್‌ಬ್ಯಾರಿಯರ್ ಅಳವಡಿಸುವ ಕಾರ್ಯ ಕೈಗೊಂಡಿದೆ ಎಂದು ನಿಗಮದ ಪಾಂಡವಪುರ ವಿಭಾಗದ ಎಇಇ ಜಯರಾಮ್ ತಿಳಿಸಿದ್ದಾರೆ.

ಅವಘಡಗಳ ಸರಣಿ: 

■ ೨೦೧೮ ನವೆಂಬರ್: ಪಾಂಡವಪುರ ತಾಲ್ಲೂಕಿನ ಕನಗನಮರಡಿಯ ವಿಶ್ವೇಶ್ವರಯ್ಯ ವಿತರಣಾ ನಾಲೆ ಯಲ್ಲಿ ಬಸ್ ಅಪಘಾತಕ್ಕೆ ಒಳಗಾಗಿ ೩೦ ಜನ ಸಾವು

■ ೨೦೨೩ನವೆಂಬರ್ ೭: ಪಾಂಡವಪುರ ಬಳಿಯ ಬನಘಟ್ಟದ ವಿ.ನಾಲೆಯಲ್ಲಿ ಕಾರು ಬಿದ್ದು, ಐವರು ಸಾವನ್ನಪ್ಪಿದ್ದರು

■ ೨೦೨೩ ಜುಲೈ ೨೭: ಮಂಡ್ಯ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ಕಾರು ವಿ.ನಾಲೆಗೆ ಪಲ್ಟಿಯಾಗಿ, ಚಾಲಕ ಲೋಕೇಶ್ ಮೃತಪಟ್ಟಿದ್ದರು.

 ■೨೦೨೩ ಜುಲೈ ೨೯: ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿ ಕಾರೊಂದು ವಿ.ನಾಲೆಗೆ ಬಿದ್ದು, ನಾಲ್ವರು ಮೃತಪಟ್ಟಿದ್ದರು.

■ ೨೦೨೩ ನವೆಂಬರ್ ೮: ಪಾಂಡವಪುರ ತಾಲ್ಲೂಕಿನ ಬನಘಟ್ಟ ಬಳಿ ಕಾರು ವಿ.ನಾಲೆಗೆ ಬಿದ್ದು ಐವರು ದಾರುಣವಾಗಿ ಸಾವನ್ನಪ್ಪಿದ್ದರು.

■ ೨೦೨೪ ಮಾ.೧೨: ಮಂಡ್ಯದ ಅವ್ವೇರಹಳ್ಳಿ ಗ್ರಾಮದ ಬಳಿ ಸ್ವಿಫ್ಟ್ ಕಾರೊಂದು ನಾಲೆಯೊಳಗೆ ಬಿದ್ದು, ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಆಂದೋಲನ ಡೆಸ್ಕ್

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

9 hours ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

9 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

10 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

10 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

10 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

10 hours ago