Accidents increasing on highways in Virajpet area
ಅತಿ ವೇಗ, ನಿರ್ಲಕ್ಷ್ಯದ ವಾಹನ ಚಾಲನೆಗೆ ಬೇಕಿದೆ ನಿಯಂತ್ರಣ, ಸಿಸಿ ಕ್ಯಾಮೆರಾ ಕಣ್ಗಾವಲು
ವಿರಾಜಪೇಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ ದ ವಾಹನ ಚಾಲನೆಯಿಂದ ಅಪಘಾತ ಪ್ರಕಣಗಳು ಹೆಚ್ಚುತ್ತಿದ್ದು, ವೈಜ್ಞಾನಿಕ ಕ್ರಮದ ಮೂಲಕ ಅಪಘಾತವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
ತಾಲ್ಲೂಕು ವ್ಯಾಪ್ತಿಯ ಹೆದ್ದಾರಿಗಳ ಕೆಲ ಭಾಗಗಳಲ್ಲಿ ರಸ್ತೆ ಹದಗೆಟ್ಟರೂ ದುರಸ್ತಿ ಕಾರ್ಯ ನಡೆಯುತ್ತಿಲ್ಲ.ಅಪಘಾತ ವಲಯಗಳಲ್ಲಿ ನಾಮಫಲಕ ಹಾಕಿ ಇಲಾಖೆ ಕೈ ತೊಳೆದುಕೊಂಡಿದೆ. ಇದರ ಜೊತೆಗೆ ಚಾಲಕರು ನಿರ್ಲಕ್ಷ ದಿಂದ ವಾಹನ ಚಾಲನೆ ಮಾಡುವುದರಿಂದಲೂ ತಾಲ್ಲೂಕು ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಅಪಘಾತ ವಲಯಗಳಲ್ಲಿ ಪೊಲೀಸ್ ಇಲಾಖೆ, ಗ್ರಾ.ಪಂ. ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಲ್ಲಿ ಅಪಘಾತಗಳನ್ನು ತಡೆಗಟ್ಟಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ ವಾಗಿದೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಣಿಕೊಪ್ಪ ಸಂಪರ್ಕ ಹೆದ್ದಾರಿಯಲ್ಲಿ ಬಿಟ್ಟಂಗಾಲ ನೇರ ರಸ್ತೆ ನಂತರ ಬಿ.ಶೆಟ್ಟಿಗೇರಿ ಜಂಕ್ಷನ್ನ ನಿಮದ ಮುಂದೆ ಸಾಗಿದ ಬಳಿಕ ತೀವ್ರ ಅಪಘಾತಗಳು ನಡೆಯುತ್ತವೆ. ಕೆಲವು ವಾಹನ ಚಾಲಕರ ಅತೀ ವೇಗ ಮತ್ತು ಅಜಾಗರೂಕ ಚಾಲನೆ ಇದಕ್ಕೆ ಕಾರಣವಾಗಿದೆ. ಇದಾದ ಬಳಿಕ ಮುಂದೆಯೂ ಅಪಘಾತ ವಲಯ ಇದೆ. ಜೊತೆಗೆ ಕೇರಳದ ಕಾರು ಚಾಲಕರು ಅತಿ ವೇಗದಲ್ಲಿ ಚಾಲನೆ ಮಾಡುತ್ತಾರೆ.
ಕೊಡಗು ಜಿಲ್ಲೆಯ ಗಡಿಗೆ ಬಂದ ಬಳಿಕ ಮೊದಲು ಮದ್ಯದ ಅಂಗಡಿಗೆ ಧಾವಿಸುತ್ತಾರೆ. ಚೆನ್ನಾಗಿ ನಶೆ ಏರಿಸಿ, ನಂತರ ಮನ ಬಂದಂತೆ ಚಾಲನೆ ಮಾಡುತ್ತಾರೆ. ಆದರೆ ಕೇರಳ ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅತಿ ವೇಗ, ಸೀಟ್ ಬೆಲ್ಟ್ ಧರಿಸದೆ ಚಾಲನೆ ಮಾಡುವುದು ಸೇರಿದಂತೆ ಹಲವು ಅಪರಾಧಗಳಿಗೆ ಹೆಚ್ಚಿನ ದಂಡ ವಿಽಸಲಾಗುತ್ತದೆ. ಆದರೆ ಕೊಡಗಿನಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಹೆಚ್ಚಿನ ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ.
ವಿರಾಜಪೇಟೆ ಪ್ರವೇಶದ್ವಾರ ಪಂಜರುಪೇಟೆಯಿಂದ ಮಾಂಸ ಮಾರುಕಟ್ಟೆ ಜಂಕ್ಷನ್ವರಗೆ ಮನಬಂದಂತೆ ವಾಹನ ಚಾಲನೆ ಮಾಡಲಾಗುತ್ತಿದೆ. ಕೆಲ ಚಾಲಕರು ಪಟ್ಟಣದೊಳಗೂ ವೇಗವಾಗಿ ವಾಹನ ಚಲಾಯಿಸುವುದರಿಂದ ಸ್ಥಳೀಯ ನಾಗರಿಕರು ಭಯದಿಂದಲೇ ಸಂಚರಿಸುವಂತಾಗಿದೆ ಎಂದು ಹೇಳುತ್ತಾರೆ.
ವಿರಾಜಪೇಟೆ – ಮಡಿಕೇರಿ ಹೆದ್ದಾರಿ ತೀರ ಹದಗೆಟ್ಟಿದ್ದು, ಅಲ್ಲಿಯೂ ವಾಹನಗಳ ವೇಗಕ್ಕೆ ಕಡಿವಾಣ ಇಲ್ಲ. ತಿರುವುಗಳಿಂದ ಕೂಡಿರುವ ರಸ್ತೆಯಾದರೂ ಅತೀ ವೇಗದಿಂದ ಚಲಿಸುವ ಕಾರುಗಳು ತಿರುವಿನಲ್ಲಿ ವಾಹನಗಳನ್ನು ಹಿಂದಿಕ್ಕಿ ಮುನ್ನುಗ್ಗಲು ಯತ್ನಿಸುವುದು ಕೂಡ ಅಪಘಾತಕ್ಕೆ ಕಾರಣವಾಗುತ್ತಿದೆ. ಆ ಮೂಲಕ ಬೇರೆಯವರ ಪ್ರಾಣದ ಜೊತೆ ಚೆಲ್ಲಾಟವಾಡುವ ಕೆಲಸ ಕೆಲ ಚಾಲಕರಿಂದ ನಡೆಯುತ್ತಿದೆ.
ಅದೇ ರೀತಿ ನಾಪೋಕ್ಲು ಕಡೆಯಿಂದ ಬರುವ ತಲಕಾವೇರಿ ಹೆದ್ದಾರಿಯಲ್ಲಿಯೂ ಇದೇ ಪರಿಸ್ಥಿತಿ ಇದೆ. ವಿರಾಜಪೇಟೆ – ಮಾಕುಟ್ಟ ಅಂತಾರಾಜ್ಯ ಹೆದ್ದಾರಿಯಲ್ಲಿ ಸಂಜೆ ಕೊಡಗಿನಿಂದ ಮಾಕುಟ್ಟ ಮೂಲಕ ಕೇರಳಕ್ಕೆ ತೆರಳುವವರು ಘಾಟಿ ರಸ್ತೆಯಲ್ಲಿ ಕಾರು ನಿಲ್ಲಿಸಿ ಚೆನ್ನಾಗಿ ಮದ್ಯ ಸೇವಿಸಿ ತ್ಯಾಜ್ಯವನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಈ ಬಗ್ಗೆ ಯಾರೂ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ಇತ್ತೀಚೆಗೆ ಸರಣಿ ಅಪಘಾತಗಳೂ ನಡೆದಿದ್ದು, ಕಾರು, ಪಿಕಪ್ ವಾಹನ, ಜೀಪು, ಮಿನಿ ಟಿಪ್ಪರ್ಗಳ ವೇಗಕ್ಕೂ ಕಡಿವಾಣ ಹಾಕಬೇಕಾಗಿದೆ. ಪೊಲೀಸ್ ಇಲಾಖೆ ನಿರ್ದಿಷ್ಟ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಸಂಘ ಸಂಸ್ಥೆಗಳು, ಸ್ಥಳೀಯ ಆಡಳಿತ ಈ ಬಗ್ಗೆ ಚರ್ಚಿಸಿ ನಿರಂತರ ಅಪಘಾತಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
” ಕೇರಳದಿಂದ ವಾಹನಗಳ ಸಂಚಾರ ಅಧಿಕವಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುವುದು ಹೆಚ್ಚುತ್ತಿದೆ. ರಾತ್ರಿ ಪೆರುಂಬಾಡಿ ರಸ್ತೆಯಲ್ಲಿ ವೇಗದ ಚಾಲನೆ ಮತ್ತು ಹೈ ಬೀಮ್ ಲೈಟ್ ಹಾಕಿ ಸಂಚರಿಸುವುದರಿಂದ ಸಣ್ಣ ವಾಹನ ಸವಾರರಿಗೆ ದಾರಿಯೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹದಗೆಟ್ಟ ರಸ್ತೆಯಲ್ಲಿನ ಹೊಂಡ ತಪ್ಪಿಸುವ ಪ್ರಯತ್ನ, ತಿರುವಿನಲ್ಲಿ ಅತಿವೇಗದ ಚಾಲನೆ, ಎಲ್ಲೆಂದರಲ್ಲಿ ಮನ ಬಂದಂತೆ ನಿಲುಗಡೆ ಮಾಡುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.” -ಬಡುವಂಡ ಜೀವನ್, ಸ್ಥಳೀಯರು, ವಿರಾಜಪೇಟೆ
” ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ. ಎರಡೂ ತಾಲ್ಲೂಕುಗಳಲ್ಲಿ ಗೋಣಿಕೊಪ್ಪ, ಬಿಟ್ಟಂಗಾಲ, ಬಾಳುಗೋಡು ರಸ್ತೆ ಸೇರಿದಂತೆ ಅಗತ್ಯವಿರುವೆಡೆ ಡಂಬ್ಲೆಸ್ ಹಂಪ್ ಹಾಕಲಾಗುತ್ತದೆ. ಅನೆ ಚೌಕೂರಿನಿಂದ ವಿರಾಜಪೇಟೆವರೆಗೆ ೮೦ ಸ್ಥಳಗಳಲ್ಲಿ ಅಪಘಾತ ವಲಯ ಎಂಬ ನಾಮಫಲಕ ಅಳವಡಿಸಲಾಗಿದೆ. ಬ್ಯಾರಿಕೇಡ್ ಸೂಕ್ತವಲ್ಲದ ಕಾರಣ ಅಪಘಾತ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಪೆರುಂಬಾಡಿ- ಮಾಕುಟ್ಟ ಹೆದ್ದಾರಿಯಲ್ಲಿ ನಿತ್ಯ ನಿಗಾ ವಹಿಸಲಾಗುತ್ತಿದೆ. ಪಂಜರುಪೇಟೆಯ ಮುಖ್ಯ ರಸ್ತೆಯಲ್ಲಿ ವೇಗದ ಚಾಲನೆ ಬಗ್ಗೆ ಗಮನ ಹರಿಸುತ್ತೇವೆ. ಯಾವುದೇ ನಿರ್ಲಕ್ಷ , ವೇಗದ, ಮದ್ಯ ಸೇವಿಸಿ ಚಾಲನೆ ಮಾಡುವಂತಹ ದೂರುಗಳು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.” – ಮಹೇಶ್ ಕುಮಾರ್, ಡಿವೈಎಸ್ಪಿ, ವಿರಾಜಪೇಟೆ ವಿಭಾಗ
– ಕಾಂಗೀರ ಬೋಪಣ್ಣ
ಬೆಂಗಳೂರು: ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ. ಬಡವರ ಹಕ್ಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬಡವರಿಗೆ ಮನರೇಗಾ…
ಬೆಂಗಳೂರು: ಮನರೇಗಾ ಮರು ಜಾರಿ ಮಾಡುವವರೆಗೆ ನಾವು ಹೋರಾಟದ ಹಾದಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು…
ಮಂಡ್ಯ: ನಗರದ ಹೊರವಲಯದಲ್ಲಿರುವ ಅಗ್ರಿ ಕ್ಲಬ್ ಮೇಲೆ ದಾಳಿ ನಡೆಸಿರುವ ಮಂಡ್ಯ ಗ್ರಾಮಾಂತರ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 29 ಮಂದಿಯನ್ನು…
ಬೆಂಗಳೂರು: ಮನರೇಗಾ ಹೆಸರು ಬದಲಾವಣೆ ಮಾಡಿ ಕಾಯ್ದೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು…
ಚಾಮರಾಜನಗರ: ನಂಜೇದೇವನಪುರ ಗ್ರಾಮದಲ್ಲಿ ತಾಯಿ ಹುಲಿ ಜೊತೆ ನಾಲ್ಕು ಮರಿ ಹುಲಿಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ಹುಲಿ ಮರಿಯನ್ನು…
ಹುಣಸೂರು: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ಯಶೋಧರಪುರ ಗೇಟ್ ಬಳಿ…