ಐಪಿಎಲ್ ಕ್ರಿಕೆಟ್ ಆರಂಭವಾದ ೧೮ ವರ್ಷಗಳ ಬಳಿಕ ಫೈನಲ್ನಲ್ಲಿ ಜಯಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಅಭಿಮಾನಿಗಳಲ್ಲಿ ಮೂಡಿಸಿದ ಹರ್ಷ, ಉತ್ಸಾಹ ಕೆಲವೇ ಗಂಟೆಗಳಲ್ಲಿ ಸಾವಿನ ಮನೆಯ ರೋದನವಾಗಿ ಮಾರ್ಪಟ್ಟು, ಕರ್ನಾಟಕ ಇತಿಹಾಸದಲ್ಲಿ ಶಾಶ್ವತ ಕಪ್ಪುಚುಕ್ಕೆಯಾಗಿ ಉಳಿಯಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಜಯೋತ್ಸವದ ಹೊಳೆಯಲ್ಲಿ ಮಿಂದೇಳಲು ಅತ್ಯುತ್ಸಾಹದಿಂದ ಆಗಮಿಸಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಪೈಕಿ ಬಾಲಕಿಯೊಬ್ಬರು ಸೇರಿ ೧೧ ಮಂದಿ ಗೊಂದಲದಿಂದ ಉಂಟಾದ ಕಾಲ್ತುಳಿತಕ್ಕೆ ಸಿಲುಕಿ ಅಸುನೀಗಿದರೆ, ೬೦ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾದರು. ಅಭಿಮಾನದ ಹುಚ್ಚುಹೊಳೆಯ ಆಘಾತವನ್ನು ಸಮರ್ಪಕವಾಗಿ ಊಹಿಸಲಾಗದ ಆರ್ಸಿಬಿ ಆಡಳಿತ ಮಂಡಳಿ, ಕೆಎಸ್ ಸಿಎ, ಡಿಎನ್ಎ (ಈವೆಂಟ್ ಮ್ಯಾನೇಜ್ಮೆಂಟ್) ಸಂಸ್ಥೆಗಳು ತಂಡದ ಗೆಲುವಿನ ಸಂಭ್ರಮಾಚರಣೆಗೆ ಆತುರಾತುರ ನಿರ್ಧಾರ ಕೈಗೊಂಡವು. ವಾಸ್ತವವಾಗಿ ಈ ಮೂರೂ ಸಂಸ್ಥೆಗಳಿಗಿಂತ ಹೆಚ್ಚಿನ ಜವಾಬ್ದಾರಿ ಹೊಂದಿರುವ ರಾಜ್ಯ ಸರ್ಕಾರ ಕೂಡ ವಿಜಯೋತ್ಸವ ಆಚರಣೆಗೆ ಸಮ್ಮತಿಸಿದ್ದು ದುರಂತ.
ಜೂ.೩ರಂದು ಆರ್ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಆ ದಿನ ರಾತ್ರಿ ಪೂರ ಅಭಿಮಾನಿಗಳು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಿಸಿದ್ದಾರೆ. ಅದು ಭದ್ರತೆ ಒದಗಿಸಿದ್ದ ಪೊಲೀಸರನ್ನು ಹೈರಾಣಾಗಿಸಿತ್ತು. ಇದರ ನಡುವೆ ಐಪಿಎಲ್ ಫೈನಲ್ ಪಂದ್ಯ ಆರಂಭವಾಗುತ್ತಿದ್ದಂತೆ ಆರ್ಸಿಬಿ ಆಡಳಿತ ಮಂಡಳಿ ಜೂ.೪ರಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವುದಾಗಿ ಘೋಷಿಸಿದೆ. ಇದಕ್ಕೆ ಕೆಎಸ್ಸಿಎ ಕೂಡ ಸಹಕಾರ ನೀಡಿದೆ. ಇದಲ್ಲದೆ, ರಾಜ್ಯ ಸರ್ಕಾರ ಅದೇ ದಿನ ಬೆಳಿಗ್ಗೆಯೇ ಆರ್ಸಿಬಿ ತಂಡಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ನಂತರ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯುವುದು ಅಂತಲೂ ನಿಗದಿಯಾಗಿತ್ತು. ಇದೊಂದು ರೀತಿಯಲ್ಲಿ ‘ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣ ಸಂಕಟ’ ಎಂಬಂತಾಯಿತು.
ಅಭಿನಂದನಾ ಸಮಾರಂಭ, ಮೆರವಣಿಗೆ ಮತ್ತು ಸಂಭ್ರಮಾಚರಣೆ ಈ ಮೂರೂ ಕಡೆ ಬಂದೋಬಸ್ತ್ ಮಾಡಬೇಕಾದ ಪೊಲೀಸರಿಗೆ ಎಲ್ಲವೂ ಅಯೋಮಯವಾಗಿ ಕಾಣಿಸಿದೆ. ಮೆರವಣಿಗೆಯನ್ನು ಪೊಲೀಸರು ಹೇಗೋ ರದ್ದುಪಡಿಸಿದರು. ಆದರೆ, ಸಂಜೆಯ ಸಂಭ್ರಮಾಚರಣೆ ವೇಳೆ ಬಂದೋಬಸ್ತ್ ಮಾಡುವುದಕ್ಕೆ ಬಹುಶಃ ಅವರಿಗೆ ಸಮಯಾವಕಾಶ ಸಾಲದಾಯಿತು ಅನಿಸುತ್ತದೆ. ಆದರೆ, ಅದು ಕ್ಷಮಿಸಲಾರದಂತಹ ಪ್ರಮಾದಕ್ಕೆ ಎಡೆಮಾಡಿಕೊಟ್ಟಿತು.
ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಇಂಜಿನಿಯರ್ ಸೇರಿದಂತೆ ೧೧ ಮಂದಿ ಯುವಜನರ ಪ್ರಾಣ ಹರಣವಾಯಿತು. ಯಾರದ್ದೋ ಪ್ರಭಾವಕ್ಕೆ, ಯಾರದ್ದೋ ಮೇಲಾಟಕ್ಕೆ ಇಂತಹ ದೊಡ್ಡ ಅವಘಡ ಸಂಭವಿಸಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ರಾಜ್ಯ ಸರ್ಕಾರ ಕೂಡ ಕಾಲ್ತುಳಿತ ದುರಂತ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಮೃತರ ಕುಟುಂಬಗಳಿಗೆ, ಗಾಯಾಳುಗಳಿಗೆ ಪರಿಹಾರವೂ ಲಭಿಸಿದೆ.
ಯುವಜನರ ಕಟ್ಟೆಯೊಡೆದ ಅಭಿಮಾನ, ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೇರವಾಗಿ ಕಣ್ತುಂಬಿಕೊಳ್ಳಬೇಕು ಎಂಬ ಉನ್ಮಾದ ಕೂಡ ಈ ಘಟನೆಗೆ ಪ್ರಮುಖ ಕಾರಣಗಳಲ್ಲೊಂದು. ಜನರು ಅತಿರೇಕವಾಗಿ ವರ್ತಿಸಬಹುದು ಎಂಬ ಕಲ್ಪನೆಯೂ ಇರದ ಆರ್ಸಿಬಿ ಆಡಳಿತ ಮಂಡಳಿಯು ಉಚಿತ ಟಿಕೆಟ್ ಘೋಷಣೆ ಕೂಡ ಮಾಡಿತ್ತು. ಅದನ್ನು ರಾಜ್ಯ ಸರ್ಕಾರವೂ ಹೇಳಿತ್ತು. ಇದು ಕ್ರಿಕೆಟ್ ಪ್ರಿಯರ ಉಮೇದಿನ ಬೆಂಕಿಗೆ ತುಪ್ಪ ಸುರಿದಿತ್ತು. ದುರಂತಕ್ಕೆ ಹಲವು ಕಾರಣಗಳನ್ನು ಪದೇ ಪದೇ ಹೇಳಲಾಗುತ್ತಿದೆ. ಇಂತಹ ಸೂಕ್ಷ ವಿಚಾರವನ್ನು ನಿರ್ವಹಿಸಲು ವಿಫಲವಾಗಿ ರುವ ಆಡಳಿತ ವ್ಯವಸ್ಥೆಯ ಬಗ್ಗೆ ಸಾರ್ವ ಜನಿಕ ವಲಯ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ದುರಂತಕ್ಕೆ ಕಾರಣ ವೆಂದು ಕೆಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈಗ ರಾಜ್ಯ ಸರ್ಕಾರದ ಮಟ್ಟದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಲಿದೆ ಎನ್ನಲಾಗಿದೆ. ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಆರ್ಸಿಬಿ ಆಡಳಿತ ಮಂಡಳಿಯ ಕೆಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥ ರಿಗೆ ಕಠಿಣ ಶಿಕ್ಷೆಯಾಗಬೇಕು ನಿಜ. ಆದರೆ, ನಿಜವಾಗಿ ತಪ್ಪು ಮಾಡಿರುವವರಿಗೆ ದಂಡನೆಯಾಗಬೇಕೇ ಹೊರತು ಯಾರದೋ ಆದೇಶಕ್ಕೆ ಅನಿವಾರ್ಯವಾಗಿ ತಲೆಬಾಗಿದ ಅಧಿಕಾರಿಗಳು, ಪೊಲೀಸರಿಗೆ ಅಲ್ಲ. ಈ ನಿರ್ಧಾರದಲ್ಲಿ ರಾಜ್ಯದ ಆಡಳಿತಗಾರರ ನೈತಿಕತೆಯೂ ಇದೆ.
” ಅಭಿನಂದನಾ ಸಮಾರಂಭ, ಮೆರವಣಿಗೆ ಮತ್ತು ಸಂಭ್ರಮಾಚರಣೆ ಈ ಮೂರೂ ಕಡೆ ಬಂದೋಬಸ್ತ್ ಮಾಡಬೇಕಾದ ಪೊಲೀಸರಿಗೆ ಎಲ್ಲವೂ ಅಯೋಮಯವಾಗಿ ಕಾಣಿಸಿದೆ. ಮೆರವಣಿಗೆಯನ್ನು ಪೊಲೀಸರು ಹೇಗೋ ರದ್ದುಪಡಿಸಿದರು. ಆದರೆ, ಸಂಜೆಯ ಸಂಭ್ರಮಾಚರಣೆ ವೇಳೆ ಬಂದೋಬಸ್ತ್ ಮಾಡುವುದಕ್ಕೆ ಬಹುಶಃ ಅವರಿಗೆ ಸಮಯಾವಕಾಶ ಸಾಲದಾಯಿತು ಅನಿಸುತ್ತದೆ. ಆದರೆ, ಅದು ಕ್ಷಮಿಸಲಾರದಂತಹ ಪ್ರಮಾದಕ್ಕೆ ಎಡೆಮಾಡಿಕೊಟ್ಟಿತು.
” ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಇಂಜಿನಿಯರ್ ಸೇರಿದಂತೆ ೧೧ ಮಂದಿ ಯುವಜನರ ಪ್ರಾಣ ಹರಣವಾಯಿತು. ಯಾರದ್ದೋ ಪ್ರಭಾವಕ್ಕೆ, ಯಾರದ್ದೋ ಮೇಲಾಟಕ್ಕೆ ಇಂತಹ ದೊಡ್ಡ ಅವಘಡ ಸಂಭವಿಸಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ರಾಜ್ಯ ಸರ್ಕಾರ ಕೂಡ ಕಾಲ್ತುಳಿತ ದುರಂತ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಮೃತರ ಕುಟುಂಬಗಳಿಗೆ, ಗಾಯಾಳುಗಳಿಗೆ ಪರಿಹಾರವೂ ಲಭಿಸಿದೆ.”
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…