ಕೆ.ಬಿ.ರಮೇಶ ನಾಯಕ
ಮೈಸೂರು: ಭಾರತೀಯ ಸಂಸ್ಕೃತಿ ಪರಂಪರೆಯ ಸಂಕೇತ ಹಾಗೂ ಜಗತ್ತಿನ ಅತಿದೊಡ್ಡ ಉತ್ಸವಗಳಲ್ಲಿ ಒಂದಾದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆ ವಿಜಯದಶಮಿ ಮೆರವಣಿಗೆಯನ್ನು ಲಕ್ಷಾಂತರ ಮಂದಿ ಸಾಕ್ಷೀಕರಿಸಿದರು. ಜಾತಿ, ಧರ್ಮ, ವರ್ಗ, ವರ್ಣ ಎಲ್ಲವನ್ನೂ ಮೀರಿ ಭಾವೈಕ್ಯತೆಯನ್ನು ಬೆಸೆಯುವ ಜನ ಮಾನಸದ ನಾಡಹಬ್ಬವಾಗಿ ಆಚರಿಸಲ್ಪಡುತ್ತಿರುವ ೧೧ ದಿನಗಳ ದಸರಾ ವೈಭವಕ್ಕೆ ಜಂಬೂಸವಾರಿ ಮೆರವಣಿಗೆಯೊಂದಿಗೆ ವರ್ಣರಂಜಿತ ತೆರೆ ಎಳೆಯಲಾಯಿತು.
೭೫೦ ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಕುಮ್ಕಿ ಆನೆಗಳಾದ ರೂಪ ಮತ್ತು ಕಾವೇರಿಯೊಂದಿಗೆ ಅಭಿಮನ್ಯು ರಾಜ ಗಾಂಭೀರ್ಯದಿಂದ ಸಾಗುತ್ತಿದ್ದಂತೆ ರಾಜಮಾರ್ಗದ ಇಕ್ಕೆಲೆಗಳಲ್ಲಿ ನಿಂತಿದ್ದ ಜನಸ್ತೋಮ ಹರ್ಷೋದ್ಗಾರ ಮಾಡಿ ತಮ್ಮ ಗೌರವವನ್ನು ಸಲ್ಲಿಸಿದರು. ಅಭಿಮನ್ಯು ೬ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದನು. ಅಂಬಾವಿಲಾಸ ಅರಮನೆಯ ಆವರಣದಲ್ಲಿ ಸಂಜೆ ೪.೪೫ಕ್ಕೆ ಸರಿಯಾಗಿ ವಿಶೇಷ ವೇದಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡಿನ ಅಽದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ವೇದಿಕೆಯಲ್ಲಿ ಮುಖ್ಯ ಮಂತ್ರಿಗಳೊಂದಿಗೆ, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ವಿಭು ಬಖ್ರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷಿ ಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಉಪಸ್ಥಿತರಿದ್ದು ಪುಷ್ಪಾರ್ಚನೆ ಮಾಡಿದರು.
ಅಂಬಾರಿ ಹೊತ್ತ ಆನೆ ಬಂದು ನಿಲ್ಲುತ್ತಿದ್ದಂತೆ ಅಶ್ವಾರೋಹಿ ದಳದ ಕಮಾಂಡೆಂಟ್ ಕೆ.ಎಸ್.ಸುರೇಶ್ ಪಥ ಸಂಚಲನಕ್ಕೆ ಅನುಮತಿ ಕೋರಿದರು. ವಿಜಯದ ಸಂಕೇತವಾಗಿ ೨೧ ಸುತ್ತು ಕುಶಾಲು ತೋಪುಗಳು ಮೊಳಗಿದವು. ನಂತರ ಪೊಲೀಸ್ ವಾದ್ಯವೃಂದದವರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು. ಗಣ್ಯರು ದೇವಿಗೆ ನಮನ ಸಲ್ಲಿಸಿ ತಮ್ಮ ಗೌರವವನ್ನು ಸಲ್ಲಿಸಿದರು. ನಂತರ ಮಂಗಳ ವಾದ್ಯ, ಪೊಲೀಸ್ ವಾದ್ಯವೃಂದ, ರಕ್ಷಣಾ ಪಡೆಗಳ ಗೌರವ, ಅಶ್ವಾರೋಹಿ ದಳದೊಂದಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಶಾಂತಚಿತ್ತನಾಗಿ ಹೆಜ್ಜೆ ಹಾಕಿದನು.
ಅಂಬಾವಿಲಾಸ ಅರಮನೆಯ ಆವರಣದಿಂದ ಸಂಜೆ ೪.೪೫ಕ್ಕೆ ಹೊರಟ ಜಂಬೂಸವಾರಿ, ಅರಮನೆ ಉತ್ತರ ಭಾಗದಲ್ಲಿರುವ ಬಲರಾಮ ದ್ವಾರದ ಮೂಲಕ ಚಾಮರಾಜ ಒಡೆಯರ್ ವೃತ್ತ, ಕೃಷ್ಣರಾಜ ಒಡೆಯರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಬಂಬೂ ಬಜಾರ್, ಹೈವೇ ವೃತ್ತ, ನೆಲ್ಸನ್ ಮಂಡೇಲಾ ರಸ್ತೆ ಮಾರ್ಗವಾಗಿ ಸಂಜೆ ೭ ಗಂಟೆಗೆ ಬನ್ನಿಮಂಟಪ ಮೈದಾನವನ್ನು ತಲುಪಿತು.
ಇದಕ್ಕೂ ಮುನ್ನ ಮಧ್ಯಾಹ್ನ ೧.೧೦ಕ್ಕೆ ಸರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ನಾಂದಿ ಹಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ್ ಎಸ್.ತಂಗಡಗಿ ಜತೆಗೂಡಿ ಪೂಜೆ ಸಲ್ಲಿಸಿದರು.
ನಾಡಿನ ಸಾಂಸ್ಕೃತಿಕ, ಸಾಹಿತ್ಯಕ ಸೊಬಗನ್ನು ಮೇಳೈಸಿಕೊಂಡು ಜಾಗತಿಕ ಮಟ್ಟದ ಸ್ಪರ್ಶವನ್ನು ನೀಡಿರುವ ನಾಡಹಬ್ಬದ ವಿಜಯದಶಮಿ ಮೆರವಣಿಗೆ ನಂದಿ ಧ್ವಜ ಕುಣಿತದೊಂದಿಗೆ ಆರಂಭವಾಗಿ ಸಾಲು ಸಾಲಾಗಿ ಅರಮನೆ ಆವರಣವನ್ನು ಬಿಡುವ ಹೊತ್ತಿಗೆ ಸುಮಾರು ಸಂಜೆ ೫ ಗಂಟೆ ಆಯಿತು.
ಜಂಬೂಸವಾರಿ ಮೆರವಣಿಗೆಯನ್ನು ನಿಶಾನೆ ಆನೆ ಧನಂಜಯ ಮುನ್ನಡೆಸಿದರೆ, ನೌಪತ್ ಆನೆಯಾಗಿ ಗೋಪಿ, ಸಾಲಾನೆಗಳಾಗಿ ಏಕಲವ್ಯ, ಮಹೇಂದ್ರ, ಲಕ್ಷಿ , ಶ್ರೀಕಂಠ, ಕಂಜನ್, ಭೀಮ, ಹೇಮಾವತಿ, ಸುಗ್ರೀವ, ಪ್ರಶಾಂತ್ ಹಿಂಬಾಲಿಸಿದವು.
೬ನೇ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯು: ೭೫೦ ಕೆಜಿ ತೂಕದ ಅಂಬಾರಿ ಹೊತ್ತ ಅಭಿಮನ್ಯು ಆರನೇ ಬಾರಿಯೂ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಎಲ್ಲರ ಗಮನ ಸೆಳೆದನು. ವಿಶೇಷ ಕಮಾಂಡೋ ಪಡೆ ಪೊಲೀಸರು ಅಭಿಮನ್ಯು ಸುಗಮವಾಗಿ ಸಾಗಲು ಎರಡೂ ಬದಿಯಲ್ಲಿ ಹಗ್ಗದ ಬ್ಯಾರಿಕೇಡ್ ಮಾಡಿ ರಕ್ಷಣೆ ನೀಡಿದರು.
ಅರಮನೆಗೆ ‘ಐರಾವತ’ದಲ್ಲಿ ಬಂದರು: ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರ ಬಿಂದು ಜಂಬೂಸವಾರಿ ಮೆರವಣಿಗೆಯನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ‘ಐರಾವತ’ ಬಸ್ನಲ್ಲಿ ಬಂದರು. ಸರ್ಕಾರಿ ಅತಿಥಿಗೃಹದಿಂದ ಹೊರಟು ದೊಡ್ಡಕೆರೆ ಮೈದಾನದ ಕಡೆಯಿಂದ ಅರಮನೆ ಪ್ರವೇಶಿಸಿ ಬಲರಾಮ ದ್ವಾರದ ಮೂಲಕ ನಂದಿ ಧ್ವಜ ಪೂಜೆ ಸ್ಥಳಕ್ಕೆ ಬಂದಿಳಿದರು. ಪೂಜೆಯ ನಂತರ ತೆರೆದ ಜೀಪಿನಲ್ಲಿ ಅರಮನೆಯೊಳಕ್ಕೆ ಆಗಮಿಸಿದರು.
ಮೈಸೂರು: ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆಯಲ್ಲಿ ಈ ಘಟನೆ…
ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…
ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…
ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…
ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…