Andolana originals

ಊರಿಗೆ ನುಗ್ಗಿತ್ತು ಕಲ್ಲಿನ ಪ್ರವಾಹ!

ಇದು ಜಲ ಪ್ರವಾಹ ಅಲ್ಲ. ಅಕ್ಷರಶಃ ಕಲ್ಲಿನ ಪ್ರವಾಹ. ಬೆಟ್ಟದ ಒಡಲಲ್ಲಿದ್ದ ಭಾರೀ ಗಾತ್ರದ ಬಂಡೆಗಳು ಚೆಂಡಿನಂತೆ ಗ್ರಾಮದ ಮೇಲೆ ಬಿದ್ದು, ಇಡೀ ಗ್ರಾಮವೇ ಅರೆ ಕ್ಷಣದಲ್ಲಿ ನಿರ್ನಾಮ ಆಗಿದೆ. ಹಾಗೆ ನಿರ್ನಾಮವಾದ ಗ್ರಾಮದ ಹೆಸರು ಚೂರಲ್ ಮಲೈ. ಸೋಮವಾರ ರಾತ್ರಿ ಜಲಪ್ರಳಯವಾಯ್ತು. ಇಡೀ ಊರಿಗೆ ಊರೇ ನಾಶವಾಯ್ತು ಅಂತ ಎಲ್ಲರೂ ಅಂದು ಕೊಂಡಿದ್ದರು. ಆದರೆ, ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ಮಳೆ ತಗ್ಗಿದ್ದ ಕಾರಣ ಚೂರಲ್ ಮಲೈ ನದಿಯ ಬಿರುಸು ಬಹಳ ಕಡಿಮೆ ಆಗಿತ್ತು. ಆಗಲೇ ಸೋಮವಾರದ ರಾತ್ರಿ ನಡೆದ ಪ್ರಳಯದ ರೌದ್ರತೆ ಎಷ್ಟಿತ್ತು? ಯಾಕೆ ಇಷ್ಟು ಮಂದಿ ಸತ್ತರು? ಒಬ್ಬರಿಗೂ ಪ್ರವಾಹದಿಂದ ಬಚಾವ್ ಆಗಲು ಯಾಕೆ ಆಗಲಿಲ್ಲ ಎಂಬ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಸೋಮವಾರ ರಾತ್ರಿ ೧ ಗಂಟೆಗೆ ಚೂರಲ್ ಮಲೈ ಗ್ರಾಮಕ್ಕೆ ಅಬ್ಬರಿಸಿ ಕೊಂಡು ಬಂದಿದ್ದು ಬರೀ ನೀರಲ್ಲ.

ನೀರಿನ ಜೊತೆಗೆ ಬೆಟ್ಟದ ಒಡಲಲ್ಲಿದ್ದ ಸಾವಿರಾರು ಬೃಹತ್ ಬಂಡೆಗಳೂ ಬಂದವು. ನೀರಿನ ವೇಗ ಎಷ್ಟಿತ್ತು ಎಂಬುದಕ್ಕೆ ಆ ಬೃಹತ್ ಗಾತ್ರದ ಕಲ್ಲು ಬಂಡೆಗಳು ಇಡೀ ಊರನ್ನು ತುಂಬಿರುವುದು ಸಾಕ್ಷಿಯಾಗಿವೆ. ಚೂರಲ್ ಮಲೈಗೆ ಹೊಂದಿಕೊಂಡಂತೆ ಇರುವ ಮುಂಡಕ್ಕೈ ಕಾಡಿನ ಮಧ್ಯ ಭಾಗದಲ್ಲಿ ಜಲ ಸ್ಛೋಟವಾಗಿದೆ. ಎತ್ತ ನೋಡಿದರೂ ಹೆಣಗಳ ರಾಶಿ. ಪ್ರತಿ ಮನೆಯಲ್ಲೂ ಸೂತಕ. ಎತ್ತ ಕಿವಿ ಇಟ್ಟರೂ ಆಕ್ರಂದನದ್ದೆ ಸದ್ದು! ಇದರ ನಡುವೆ ಜಲಸಮಾಧಿಯಾದವರ ಮನ ಕಲುಕುವ ಕಥೆಗಳು ಎಂಥವರ ಕಣ್ಣನ್ನೂ ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಮುನಿಸಿಗೆ ನೂರಾರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಒಂದೊಂದು ಮನೆಯಲ್ಲಿಯೂ ಒಂದೊಂದು ಕರುಳು ಹಿಂಡುವ ಕಥೆ. ಸತ್ತ ಕೆಲವರ ಬಗ್ಗೆ ಕಥೆಗಳೇ ಕೇಳುತ್ತಿಲ್ಲ. ಏಕೆಂದರೆ ಅವರ ಕಥೆ ಹೇಳೋಕೆ ಅವರ ಕುಟುಂಬದವರು ಯಾರೂ ಬದುಕಿಲ್ಲ! – ಹೀಗಿದೆ ದೇವರ ನಾಡು ಕೇರಳದ ಸದ್ಯದ ಸ್ಥಿತಿ.

ವಯನಾಡು: ಎತ್ತ ನೋಡಿದರೂ ಹೆಣಗಳ ರಾಶಿ. . . ಪ್ರತಿ ಮನೆಯಲ್ಲೂ ನೀರವ ಮೌನ. . . ಎತ್ತ ಕಿವಿ ಆಲಿಸಿದರೂ ಆಕ್ರಂದನದ್ದೇ ಸದ್ದು! ಇದರ ನಡುವೆ ಜಲಸಮಾಧಿಯಾದವರ ಮನ ಕಲಕುವ ಕಥೆಗಳು, ಎಂಥವರ ಕಣ್ಣುಗಳನ್ನೂ ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಕ್ಷಣಾರ್ಧದ ಮುನಿಸಿಗೆ ನೂರಾರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಒಂದೊಂದು ಮನೆಯಲ್ಲಿಯೂ ಒಂದೊಂದು ಕರುಳು ಹಿಂಡುವ ಕಥೆ. ಸತ್ತ ಕೆಲವರ ಬಗ್ಗೆ ಕಥೆಗಳೇ ಕೇಳುತ್ತಿಲ್ಲ. ಏಕೆಂದರೆ ಅವರ ಕಥೆ ಹೇಳೋಕೆ ಅವರ ಕುಟುಂಬದವರೂ ಯಾರೂ ಬದುಕಿಲ್ಲ! – ಹೀಗಿದೆ ಕೇರಳ ರಾಜ್ಯದ ಸದ್ಯದ ದುಸ್ಥಿತಿ.

ಜಲಸಮಾಧಿಯಾದ ಕನ್ನಡಿಗರೆಲ್ಲಾ ಕೂಲಿ ಕಾರ್ಮಿಕರು

ಜಲಪ್ರಳಯದಲ್ಲಿ ಕನ್ನಡಿಗರ ಸಾವಿನ ಪಟ್ಟಿ ಕೂಡ ದೊಡ್ಡದಾಗುತ್ತಿದೆ. ಇವರೆಲ್ಲಾ ಯಾಕೆ ಇಲ್ಲಿಗೆ ಬಂದಿದ್ದರು? ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುವಂತಹ ಅನಿವಾರ್ಯತೆ ಏನಿದೆ? ಕೇರಳದವರೇ ನಮ್ಮಲ್ಲಿಗೆ ಬಂದು ಬದುಕು ಕಟ್ಟಿಕೊಳ್ಳುವಾಗ, ಇವರು ಯಾಕೆ ಇಲ್ಲಿಗೆ ಬಂದರು? ಅಂತ ಕೊಂಚ ಕೂತುಹಲದಿಂದ ನೋಡಿದರೆ ನಮಗೆ ಕಾಣುವುದು ಎಸ್ಟೇಟ್ ಕೂಲಿ! ಕೂಲಿ ಜೊತೆಗೆ ಕ್ವಾರ್ಟರ್ಸ್.

ಕೇರಳದ ಪ್ರವಾಹದಲ್ಲಿ ಜಲಸಮಾಧಿಯಾದ ಬಹುತೇಕ ಕನ್ನಡಿಗರು, ಕೆಳ ಮಧ್ಯಮ ವರ್ಗದಿಂದ ಬಂದವರು. ಈ ಹಸಿರು ಒಸರುವ ನಾಡಿನಲ್ಲಿ ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಬಂದವರೆಲ್ಲಾ ಹಳೇ ಮೈಸೂರು ಭಾಗದವರು. ಆದರೆ, ಸುಖ ನಿದ್ರೆಯಲ್ಲೇ ತಮ್ಮ ಬದುಕಿನ ಯಾತ್ರೆ ಮುಗಿಸಿದ್ದಾರೆ.

ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

ಮೇಲ್ಪಾಡಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣವೊಂದಕ್ಕೆ ಸ್ಥಳಾಂತರಿಸಲಾಗಿದೆ. ಏಕೆಂದರೆ ನೂರು- ನೂರು ಹೆಣಗಳ ರಾಶಿಗೆ ಜಾಗ ಕಲ್ಪಿಸುವ ಉದ್ದೇಶದಿಂದ. ತಮ್ಮವರ ಶವವನ್ನು ಕಂಡ ಕೂಡಲೇ ಕೆಲವರು ಮುಗಿಲು ಮುಟ್ಟುವ ರೀತಿಯಲ್ಲಿ ಅಳುತ್ತಾರೆ. ಆಂಬ್ಯುಲೆನ್ಸ್‌ನಲ್ಲಿ ಬಂದ ಶವ ತಮ್ಮವರದಲ್ಲ ಎಂದಾಗ ಅಯ್ಯೋ ನಮ್ಮವರ ಹೆಣ ಸಿಗುತ್ತದೋ ಇಲ್ಲವೋ? ಅಂತ ಮನದೊಳಗೆ ಒದ್ದಾಡುತ್ತಿದ್ದಾರೆ. ದೇಹವೇ ಇರದ ಬರೀ ಕೈಗಳು ಇದುವರೆಗೂ ಸಿಕ್ಕಿರುವುದು ೬. ಇದು ಯಾರ ಯಾರ ಕೈ ಅಂತ ಪತ್ತೆ ಮಾಡುವುದು ಹೇಗೆ? ಮೂರು ತಲೆಗಳು ಸಿಕ್ಕಿವೆ. ಆದರೆ ಮುಖಗಳು ಗುರುತೇ ಸಿಗದ ಮಟ್ಟಕ್ಕೆ ಜಜ್ಜಿ ಹೋಗಿವೆ. ಎಂಟು ಪ್ರತ್ಯೇಕವಾದ ಕಾಲುಗಳು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹಗಳು ಸಿಕ್ಕಿವೆ. ಎಲ್ಲವನ್ನೂ ತಂದು ಎನ್‌ಡಿಆರ್‌ಎಫ್‌ನವರು ಶವಾಗಾರ ಸೇರಿಸಿದ್ದಾರೆ.

ಬಹುತೇಕರು ಸ್ವಂತ ಮನೆ ಜೊತೆಯೇ ಸಮಾಧಿಯಾದರು ಚೂರಲ್ ಮಲೈಗೆ ಸಮೃದ್ಧ ಊರು ಎಂಬ ಪಟ್ಟ ನೀಡಲಾಗಿದೆ. ಆದರೆ, ಇಲ್ಲಿದ್ದವರೆಲ್ಲ ಬಡತನದಲ್ಲೇ ಸುಖ ಉಂಡವರು. ಎಲ್ಲಕ್ಕಿಂತಾ ಹೆಚ್ಚಾಗಿ ಶೇ. ೯೮ ಭಾಗದ ಜನರು ಇಲ್ಲಿ ತಮ್ಮ ಸ್ವಂತ ಮನೆಗಳಲ್ಲೇ ವಾಸವಿದ್ದರು. ಇನ್ನೊಂದೆರಡು ವರ್ಷಗಳು ಕಳೆದಿದ್ದರೆ ಶೇ. ೧೦೦ ಕ್ಕೆ ೧೦೦ರಷ್ಟು ಜನರು ಸ್ವಂತ ಮನೆಯನ್ನು ಹೊಂದಿರುತ್ತಿದ್ದರು. ಗ್ರಾಮದಲ್ಲಿ ಕಟ್ಟಿದ ಐದು ಮನೆಗಳಿಗೆ ಇನ್ನು ಎರಡು ತಿಂಗಳಲ್ಲಿ ಗೃಹ ಪ್ರವೇಶ ಆಗಬೇಕಿತ್ತು. ಈಗ ಇದರಲ್ಲಿ ಬಹುತೇಕರು ತಮ್ಮ ಸ್ವಂತ ಮನೆಗಳ ಜೊತೆಗೆ ಸಮಾಧಿಯಾಗಿದ್ದಾರೆ.

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 24 ಬುಧವಾರ

2 hours ago

ವಡ್ಡರದೊಡ್ಡಿ ಮನೆಯೊಂದರಲ್ಲಿ ಕಳ್ಳತನ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ವಡ್ಡರದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ. ಗ್ರಾಮದ ನಿವಾಸಿ ಸೆಲ್ವಂ ಅವರು…

16 hours ago

ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ…

17 hours ago

ಕಾರು ಪಲ್ಟಿ: ಐವರಿಗೆ ಗಾಯ

ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಕಲ್ಯಾಣಿ ಕೊಳದ ಬಳಿ ಸೇತುವೆಯಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಮೂಲದ…

18 hours ago

ಶಾಂತಳ್ಳಿ: ಮುಂದುವರೆದ ಕಾಡಾನೆ ಹಾವಳಿ

ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರೆದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು…

18 hours ago

ಕರ್ನಾಟಕದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಕೆ

ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್.‌28ರವರೆಗೂ ಕರ್ನಾಟಕದಲ್ಲಿ ಮಳೆ…

19 hours ago