Andolana originals

ಪರ್ಯಾಯ ನಾಯಕತ್ವದ ಚರ್ಚೆಗಳಿಗೆ ಬ್ರೇಕ್

ತಲ್ಲಣದ ಕಾಲಘಟ್ಟದಲ್ಲಿ ಕಾಂಗ್ರೆಸ್ ಪಾಳೆಯದ ಮುನ್ನೆಚ್ಚರಿಕೆಯ ನಡೆ

ಆರ್.ಟಿ.ವಿಠ್ಠಲಮೂರ್ತಿ

ಮೊನ್ನೆ ಮಾಜಿ ಸಂಸದ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರಾಡಿದ ಮಾತು ಕುತೂಹಲಕಾರಿಯಾಗಿದೆ. ನಮಗೆ ದಿಲ್ಲಿಯಿಂದ ಸ್ಪಷ್ಟ ಸಂದೇಶ ಬಂದಿದೆ. ಅದರ ಪ್ರಕಾರ ಸಿದ್ದರಾಮಯ್ಯ ಅವರೇ ಐದೂ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂಬುದು ಡಿ.ಕೆ.ಸುರೇಶ್ ಅವರ ನೇರ ಮಾತು.

ಅಂದ ಹಾಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಶುರುವಿನಲ್ಲಿ ಯಾರಾದರೂ ಈ ಮಾತು ಹೇಳಿದರೆ ಡಿ.ಕೆ.ಸುರೇಶ್‌ ಕಿಡಿಕಿಡಿಯಾಗುತ್ತಿದ್ದರು. ಅಷ್ಟೇ ಅಲ್ಲ, ಪಕ್ಷಕ್ಕಾಗಿ ನಾವು ದುಡಿದವರು. ನಮಗೆ ಕೂಲಿ ಕೊಡಬೇಕು ಎಂದು ಸೂಚ್ಯವಾಗಿ ವರಿಷ್ಠರಿಗೆ ಸಂದೇಶ ರವಾನಿಸುತ್ತಿದ್ದರು. ಅವರ ಮಾತಿನ ತಾತ್ಪರ್ಯ ಹೇಗಿತ್ತು ಎಂದರೆ ಮುಖ್ಯಮಂತ್ರಿ ಹುದ್ದೆ ಎರಡು ಅವಧಿಗೆ ಹಂಚಿಕೆಯಾಗಿದೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ. ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಧ್ವನಿ ಇರುತ್ತಿತ್ತು. ಒಂದು ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಮುಖ್ಯಮಂತ್ರಿ ಹುದ್ದೆ ಹಂಚಿಕೆ ಆಗಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದಾಗ ಅವತ್ತು ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರು ಕುದ್ದು ಹೋಗಿದ್ದರು. ಹೀಗೆ ಒಂದು ಕಾಲಘಟ್ಟದಲ್ಲಿ ಮುಖ್ಯಮಂತ್ರಿ ಹುದ್ದೆಯಹಂಚಿಕೆಯ ಪರವಾಗಿ ಮತ್ತು ವಿರೋಧವಾಗಿ ಹಲವು ಧ್ವನಿಗಳು ಏಳುತ್ತಿದ್ದವು. ಆದರೆ ಬದಲಾದ ಸನ್ನಿವೇಶದಲ್ಲಿ ಖುದ್ದು ಡಿ.ಕೆ.ಸುರೇಶ್ ಅವರು ಧ್ವನಿ ಬದಲಿಸಿದ್ದಾರೆ. ಐದು ವರ್ಷಗಳ ಕಾಲವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಇರಲಿದ್ದಾರೆ ಎಂದು ಹೇಳಿದ್ದಾರೆ.

ಹೀಗೆ ಡಿಕೆಶಿ ಸಹೋದರ ಸುರೇಶ್ ಅವರ ಧ್ವನಿ ಏಕೆ ಬದಲಾಗಿದೆ ಎಂದು ನೋಡುವ ಮುನ್ನ ರಾಜ್ಯ ಕಾಂಗ್ರೆಸ್‌ನ ಹಾಲಿ ಪರಿಸ್ಥಿತಿಯನ್ನು ನೋಡಬೇಕು. ಅರ್ಥಾತ್, ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಸಹಜವಾಗಿಯೇ ಕಾಂಗ್ರೆಸ್ ಕೊಳದಲ್ಲಿ ತಳದ ಮಣ್ಣು ಮೇಲೆದ್ದಿದೆ. ಹೀಗೆ ತಳದ ಮಣ್ಣು ಮೇಲೆದ್ದಿರುವ ಕಾರಣಕ್ಕಾಗಿ ಮುಖ್ಯಮಂತ್ರಿ ಬದಲಾವಣೆಯ ಮಾತು ಇರಲಿ, ಮೊದಲು ಸರ್ಕಾರ ಉಳಿಯಲಿ ಎಂಬ ಕಾಂಕ್ಷೆ ದಟ್ಟವಾಗುತ್ತಿದೆ. ಗಮನಿಸಬೇಕಾದ ಸಂಗತಿ ಎಂದರೆ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ ನಂತರ ಪರ್ಯಾಯ ನಾಯಕತ್ವದ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿರುವುದು ನಿಜ.

ವಿಷಯ ನ್ಯಾಯಾಲಯದಲ್ಲಿದ್ದರೂ, ಅದು ಸಿದ್ದರಾಮಯ್ಯ ಅವರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡದೇ ಇದ್ದರೂ ಮುಂದಿನ ಹಲವು ತಿಂಗಳುಗಳ ಸಿದ್ದರಾಮಯ್ಯ ಎಪಿಸೋಡು ಮುಂದುವರಿಯಲಿದೆ. ಕಾರಣ ಸಿದ್ದರಾಮಯ್ಯ ಅವರ ಜಾಗಕ್ಕೆ ಬೇರೆಯವರನ್ನು ತರುವ ಯತ್ನ ನಡೆದರೆ ರಾಜ್ಯ ಸರ್ಕಾರ ಪತನದ ಅಂಚಿಗೆ ಹೊರಳಲಿದೆ ಎಂಬುದು ಹೈಕಮಾಂಡ್‌ಗೆ ಗೊತ್ತು. ಇಷ್ಟಾದರೂ ಸಿದ್ದರಾಮಯ್ಯ ಅವರ ಜಾಗಕ್ಕೆ ಅನಿವಾರ್ಯವಾದರೆ ಹೈಕಮಾಂಡ್ ಯಾರನ್ನು ತರಬಹುದು ಎಂಬ ಚರ್ಚೆ ನಡೆಯತೊಡಗಿತು. ಅದರ ಪ್ರಕಾರ, ಸರ್ಕಾರ ರಚನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಎರಡು ಅವಧಿಗೆ ಹಂಚಿಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಜಾಗಕ್ಕೆ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್‌ ಬಂದು ಕೂರಲಿದ್ದಾರೆ ಎಂಬ ಮಾತು ಕೇಳಿ ಬಂತು.

ಇಂತಹ ಮಾತುಗಳನ್ನಾಡುತ್ತಿದ್ದವರು, ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಹುದ್ದೆಯ ಮೇಲೆ ಕೂರಿಸುವ ವಿಷಯದಲ್ಲಿ ಮೇಡಂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಲವು ವ್ಯಕ್ತಪಡಿಸಿದ್ದಾರೆ ಎನ್ನುತ್ತಿದ್ದರು. ಆದರೆ ಇದರ ಬೆನ್ನಲ್ಲೇ ಇನ್ನೊಂದು ವಾದ ಕೇಳಿ ಬರತೊಡಗಿತು. ಅದೆಂದರೆ, ಡಿ.ಕೆ.ಶಿವಕುಮಾರ್ ಅವರ
ವಿರುದ್ಧ ಇರುವ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಇಡಿ ಎಂಟ್ರಿ ಪಡೆಯಬಹುದು. ಹಾಗೇನಾದರೂ ಆದರೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿ ದಕ್ಕಿಸಿಕೊಳ್ಳುವುದು ಕಷ್ಟ ಎಂಬ ಮಾತುಗಳು ಶುರುವಾದವು.

ಹಾಗಿದ್ದಮೇಲೆ ಮುಂದೇನು ಎಂದು ಕೇಳಿದರೆ, ಸದ್ಯದ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ತಂದು ಕೂರಿಸುವುದು ಸೇವು ಎಂದು ಹೈಕಮಾಂಡ್ ವರಿಷ್ಠರು ಲೆಕ್ಕ ಹಾಕುತ್ತಿದ್ದಾರೆ. ಇದಕ್ಕೆ ಮೂರು ಪ್ರಮುಖ ಕಾರಣಗಳಿವೆ.

ಮೊದಲನೆಯದಾಗಿ ಮಲ್ಲಿಕಾರ್ಜುನ ಖರ್ಗೆ ಹಿರಿಯರು, ಹೀಗಾಗಿ ಸಿದ್ದರಾಮಯ್ಯ ಅವರ ಜಾಗಕ್ಕೆ ಅವರನ್ನು ತಂದರೆ ಪಕ್ಷದಲ್ಲಿ ವಿರೋಧದ ಧ್ವನಿ ಏಳುವುದಿಲ್ಲ. ಇದೇ ರೀತಿ ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರಾದುದರಿಂದ ಅವರನ್ನು ಉರುಳಿಸಲು ಮತ್ತು ಆ ಮೂಲಕ ದಲಿತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಬಿಜೆಪಿ ವರಿಷ್ಠರು ಹಿಂಜರಿಯುತ್ತಾರೆ.

ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ಟಫ್ ಆಡಳಿತಗಾರರಾಗಿ ರುವುದರಿಂದ ಸರ್ಕಾರವನ್ನು ನಿರಾಯಾಸವಾಗಿ ನಡೆಸಿಕೊಂಡು ಹೋಗುತ್ತಾರೆ ಎಂದು ಕೆಲವರು ಹೇಳತೊಡಗಿದರು. ಈ ಮಧ್ಯೆ ಇನ್ನೊಂದು ವಾದ ಕೇಳತೊಡಗಿತು. ಅದೆಂದರೆ, ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಮೇಡಂ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರುಖರ್ಗೆ ಸೂಚಿಸಿದಲ್ಲಿಗೆ ಹೋಗುತ್ತಾರೆ. ನಾಳೆ ಅವರೇನಾದರೂ ಮುಖ್ಯಮಂತ್ರಿಯಾದರೆ ಅವರೇ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನೆ ಬಾಗಿಲಿಗೆ ಹೋಗಬೇಕು. ಹೀಗಾಗಿ ಖರ್ಗೆ ಅವರೇ ಸಿಎಂ ಹುದ್ದೆಯ ವಿಷಯದಲ್ಲಿ ಆಸಕ್ತರಿಲ್ಲ ಎಂಬ ಮಾತುಗಳು ಶುರುವಾದವು. ಇದರ ಬೆನ್ನಲ್ಲೇ ಖರ್ಗೆ ಅವರು ತಾವು ಕೂರುವ ಬದಲು ಹಾಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ತಂದು ಕೂರಿಸುತ್ತಾರೆ ಎಂಬ ಮಾತುಗಳುಶುರುವಾದರೆ, ಮತ್ತೊಂದು ಮೂಲದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಕೇಳತೊಡಗಿತು. ಈ ಮಧ್ಯೆ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರು ತಮ್ಮ ಆಸೆಯನ್ನು ತೋಡಿಕೊಂಡಿದ್ದಲ್ಲದೆ, ಮಂತ್ರಿಯಾಗಿ ದಣಿದಿದ್ದೇನೆ. ಇನ್ನು ಮುಖ್ಯಮಂತ್ರಿಯಾಗುವ ಆಸೆ ಇದೆ. ಸಿದ್ದರಾಮಯ್ಯ ಅವರು ಬೆಂಬಲಿಸಿದರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದರು.

ಇಂತಹ ಚರ್ಚೆಗಳೆಲ್ಲದರ ನಡುವೆ, ಮಲ್ಲಿಕಾರ್ಜುನ ಖರ್ಗೆ ಅವರ ಮಗ ದೇವನಹಳ್ಳಿಯ ಏರೋಸ್ಪೇಸ್ ಜಾಗದಲ್ಲಿ ಐದು ಎಕರೆ ಜಾಗವನ್ನು ಸರ್ಕಾರದಿಂದ ಪಡೆದಿದ್ದಾರೆ ಎಂಬ ಮಾತು ಕೇಳಿ ಬಂದಿದ್ದಲ್ಲದೆ, ಈ ಪ್ರಕರಣ ರಾಜಭವನದ ಅಂಗಳಕ್ಕೂ ತಲುಪಿತು. ಇದೊಂದೇ ಅಲ್ಲ, ಖರ್ಗೆ ಅವರಿಗೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಹಿಂದಿದ್ದ ಸಿದ್ದರಾಮಯ್ಯ ಸರ್ಕಾರ ಉಚಿತವಾಗಿ ಹತ್ತೊಂಬತ್ತು ಎಕರೆ ಭೂಮಿ ನೀಡಿದೆ ಎಂದು ಬಿಜೆಪಿ ನಾಯಕ ಲೆಹರ್ ಸಿಂಗ್ ಬಾಂಬ್ ಸಿಡಿಸಿದರು. ಇದೇ ರೀತಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಭಾಗಮನೆ ಎಂಬ ಸಂಸ್ಥೆಗೆ ಕೆಎಐಡಿಬಿಯ ಹಲವು ಎಕರೆ ಭೂಮಿಯನ್ನು ನೀಡಿದ್ದಾರೆ ಎಂಬುದರಿಂದ ಹಿಡಿದು, ಹಲವು ಪ್ರಭಾವಿಗಳಿಗೆ ಸಿಎ ನಿವೇಶನ ಒದಗಿಸಿದ್ದಾರೆ ಎಂಬ ಕೂಗು ಶುರುವಾಯಿತು.

ಅರ್ಥಾತ್, ಸಿದ್ದರಾಮಯ್ಯ ಅವರ ಜಾಗಕ್ಕೆ ಯಾರು ಪರ್ಯಾಯ ನಾಯಕ ಎಂಬ ಚರ್ಚೆ ನಡೆದಿರುವ ಕಾಲದಲ್ಲಿ ಇಂತಹ ಪರ್ಯಾಯ ನಾಯಕರ ವಿರುದ್ಧವೇ ಆರೋಪಗಳು ಸಿಡಿಯುತ್ತಿರುವ ರೀತಿ ಸಹಜವಾಗಿಯೇ ಕಾಂಗ್ರೆಸ್ ಪಾಳೆಯವನ್ನು ತಳಮಳಕ್ಕೆ ನೂಕಿದೆ. ಹೀಗೆ ಪರ್ಯಾಯ ನಾಯಕರ ಹೆಸರಿಗೆ ಮಸಿ ಬಳಿಯುವ ಕೆಲಸಶುರುವಾದರೆ ಮುಂದೇನು ಗತಿ? ಅತ್ತ ಸಿದ್ದರಾಮಯ್ಯ ಇಳಿದು, ಇತ್ತ ಬೇರೊಬ್ಬರು ಅಧಿಕಾರ ವಹಿಸಿಕೊಳ್ಳುವುದು ಕಷ್ಟ ಎಂಬ ಪರಿಸ್ಥಿತಿ ಬಂದರೆ ಏನು ಮಾಡಬೇಕು? ಎಂಬ ತಲ್ಲಣ ಕಾಂಗ್ರೆಸ್ ಪಾಳೆಯದಲ್ಲಿ ಶುರುವಾಯಿತು.

ಯಾವಾಗ ಈ ತಲ್ಲಣ ಹೆಚ್ಚಾಯಿತೋ ಇಂತಹ ಕಾಲಘಟ್ಟದಲ್ಲಿ ಡಿಕೆಶಿ ಸಹೋದರ ಸುರೇಶ್ ಅವರು ಮಾತನಾಡಿ: ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರಲಿದ್ದಾರೆ ಎನ್ನುವ ಮೂಲಕ ಪರ್ಯಾಯ ನಾಯಕತ್ವದ ಚರ್ಚೆಗಳಿಗೆ ಬ್ರೇಕ್‌ ಹಾಕಲು ಯತ್ನಿಸಿದ್ದಾರೆ. ಇದು ಅವರ ಮುನ್ನೆಚ್ಚರಿಕೆಯೂ ಇರಬಹುದು. ಅದೇ ಸದ್ಯದ ವಿಶೇಷ.

ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಸಹಜವಾಗಿಯೇ ಕಾಂಗ್ರೆಸ್ ಕೊಳದಲ್ಲಿ ತಳದ
ಮಣ್ಣು ಮೇಲೆದ್ದಿದೆ. ಹೀಗೆ ತಳದ ಮಣ್ಣು ಮೇಲೆದ್ದಿರುವ ಕಾರಣಕ್ಕಾಗಿ ಮುಖ್ಯಮಂತ್ರಿ ಬದಲಾವಣೆಯ ಮಾತು ಇರಲಿ, ಮೊದಲು ಸರ್ಕಾರ ಉಳಿಯಲಿ ಎಂಬ ಕಾಂಕ್ಷೆ ದಟ್ಟವಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…

10 mins ago

‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…

14 mins ago

ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಪರದಾಟ

ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…

19 mins ago

ವರ್ಷಾಂತ್ಯ: ಗರಿಗೆದರದ ಮೈಸೂರು ಪ್ರವಾಸೋದ್ಯಮ

ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…

25 mins ago

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

10 hours ago