ಬಿಆರ್ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು
ಬಿಳಿಗಿರಿ ರಂಗನ ಬೆಟ್ಟ (ಬಿಆರ್ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾಗಿದೆ. ಇದು ಕೇವಲ ಮರಗಳ ಸಮೂಹವಲ್ಲ. ಅನೇಕ ವನ್ಯಜೀವಿಗಳ ಆಶ್ರಯಸ್ಥಾನ, ಪರಿಸರ ಸಮತೋಲನದ ಆಧಾರ ಮತ್ತು ಮಾನವನ ಬದುಕಿಗೂ ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳ ಮೂಲವಾಗಿದೆ. ಆದರೆ ಇತ್ತೀಚೆಗೆ ಸಂಭವಿಸಿದ ಸುಮಾರು ೨೦೦ ಎಕರೆ ಅರಣ್ಯ ದಹನವು ಈ ಪ್ರದೇಶದ ಮಹತ್ವದ ಭವಿಷ್ಯವನ್ನು ಪ್ರಶ್ನಿಸುವಂತಾಗಿದೆ. ಈ ಘಟನೆ ಕೇವಲ ಒಂದು ಸಹಜ ದುರಂತವಲ್ಲ. ಮಾನವೀಯ ಹಸ್ತಕ್ಷೇಪ ಮತ್ತು ನಿರ್ಲಕ್ಷ್ಯದ ಪರಿಣಾಮವೆಂದು ಕಾಣುತ್ತಿದೆ.
ಅರಣ್ಯದೊಳಗೆ ಸೌಲಭ್ಯಗಳನ್ನು ಒದಗಿಸುವುದರಿಂದ, ಅಲ್ಲಿರುವ ಜನರು ಹೊರಗೆ ಪುನರ್ವಸತಿ ಪಡೆಯಲು ಹಿಂಜರಿಯುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ಅರಣ್ಯದೊಳಗಿನ ಮಾನವ ವಾಸಸ್ಥಳ ಶಾಶ್ವತವಾಗುವ ಅಪಾಯವಿದೆ.
ಇದೇ ಸಮಯದಲ್ಲಿ, ಈ ಅಡಿಗಣದ ವಿದ್ಯುತ್ ವ್ಯವಸ್ಥೆಯು ವನ್ಯಜೀವಿಗಳಿಗೆ ಅಪಾಯಕಾರಿಯಾಗ ಬಹುದು. ಕರಡಿ, ಕಾಡುಹಂದಿಗಳು ಮತ್ತು ಇತರ ಪ್ರಾಣಿಗಳು ತಮ್ಮ ಆಹಾರಕ್ಕಾಗಿ ನೆಲವನ್ನು ತೋಡುತ್ತವೆ. ಈ ವೇಳೆ ವಿದ್ಯುತ್ ಕೇಬಲ್ಗಳಿಗೆ ಹಾನಿ ಉಂಟಾದರೆ, ಅದು ಪ್ರಾಣಿಗಳಿಗೂ ಮಾನವರಿಗೂ ಅಪಾಯವನ್ನುಂಟುಮಾಡಬಹುದು. ಅರಣ್ಯದೊಳಗಿನ ಯಾವುದೇ ತಾಂತ್ರಿಕ ಹಸ್ತಕ್ಷೇಪವು ಪರಿಸರದ ಸೂಕ್ಷ್ಮಸಮತೋಲನವನ್ನು ಹಾಳು ಮಾಡುವ ಸಾಧ್ಯತೆ ಇದೆ.
ಇದರ ಜೊತೆಗೆ, ಅರಣ್ಯದ ಒಳಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಮತ್ತೊಂದು ಗಂಭೀರ ಸಮಸ್ಯೆಯಾಗಿವೆ. ವನ್ಯಪ್ರಾಣಿಗಳ ಚರ್ಮ ಮತ್ತು ಉಗುರುಗಳ ಅಕ್ರಮ ವ್ಯಾಪಾರ, ಬಲೆಗೆ ಸಿಕ್ಕ ಪ್ರಾಣಿಗಳನ್ನು ಕೊಂದು ಸಾಗಿಸುವ ಘಟನೆಗಳು ಹಾಗೂ ಹೊರ ರಾಜ್ಯಗಳು ಮತ್ತು ದೇಶಗಳೊಂದಿಗೆ ಇರುವ ಸಂಬಂಧ ಈ ಎಲ್ಲ ಬೆಳವಣಿಗೆಗಳು ಗಂಭೀರ ಆತಂಕವನ್ನು ಉಂಟುಮಾಡುತ್ತಿವೆ. ಈ ಅಕ್ರಮ ಚಟುವಟಿಕೆಗಳು ಅರಣ್ಯದ ಒಳಗಿ ನಿಂದಲೇ ನಡೆಯುತ್ತಿರುವುದರಿಂದ, ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ. ಇದು ಕೇವಲ ಕಾನೂನು ಉಲ್ಲಂಘನೆಯಲ್ಲ, ಪ್ರಕೃತಿಯ ಮೇಲಿನ ಕ್ರೂರ ಹಿಂಸೆಯಾಗಿದೆ.
ಕಳೆದ ವರ್ಷದಲ್ಲಿ ಗಾಂಜ ಬೆಳೆಗಳನ್ನು ಅರಣ್ಯದಲ್ಲಿ ಬೆಳೆಸುತ್ತಿದ್ದಾಗ ಅರಣ್ಯ ಇಲಾಖೆಯು ಸುಟ್ಟು ಹಾಕಿದ ಉದ್ದೇಶದಿಂದ ಅಲ್ಲಿಯವರು ಕಾಡಿಗೆ ಕೆಲವೆಡೆ ೧೦ರಿಂದ ೧೫ ದಿನಗಳವರೆಗೆ ನಿರಂತರವಾಗಿ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಈ ಹಿನ್ನೆಲೆಯ ೨೦೦ ಎಕರೆಗೆ ಬಿದ್ದ ಬೆಂಕಿ ಸಹ ಮಾನವಸೃಷ್ಟಿಯೇ ಇರಬಹುದೆಂಬ ಅನುಮಾನ ಗಟ್ಟಿಯಾಗುತ್ತದೆ. ಕೆಲವೊಂದು ಅಸಮಾಧಾನಗಳು, ವೈಯಕ್ತಿಕ ದ್ವೇಷಗಳು ಅಥವಾ ಅಕ್ರಮ ಚಟುವಟಿಕೆಗಳನ್ನು ಮರೆಮಾಡುವ ಉದ್ದೇಶವೂ ಇದರ ಹಿಂದೆ ಇರಬಹುದು.
ನ್ಯಾಯಾಂಗವು ಕೆಲ ಸಂದರ್ಭಗಳಲ್ಲಿ ಅರಣ್ಯದೊಳಗಿನ ಜನರನ್ನು ಅವರಿಗೆ ಅರಿವು ಕಡಿಮೆ ಎಂಬ ಕಾರಣದಿಂದ ಸಹಾನುಭೂತಿಯಿಂದ ನೋಡಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ನಿಲುವು ಪ್ರಶ್ನಾರ್ಥಕವಾಗಿದೆ. ಅಕ್ರಮ ಚಟುವಟಿಕೆಗಳು, ಬೆಂಕಿ ಹಚ್ಚುವಂತಹ ಗಂಭೀರ ಘಟನೆಗಳು ನಡೆಯುತ್ತಿರುವಾಗ, ಅರಿವಿಲ್ಲ ಎಂಬ ಕಾರಣವನ್ನು ಮುಂದಿರಿಸುವುದು ಸಮಂಜಸವಲ್ಲ. ಜವಾಬ್ದಾರಿತನ ಮತ್ತು ಕಾನೂನು ಪಾಲನೆ ಎಲ್ಲರಿಗೂ ಸಮಾನವಾಗಿರಬೇಕು.
ಸರ್ಕಾರವು ಅರಣ್ಯದೊಳಗಿನ ಜನರಿಗೆ ರೇಷನ್, ತರಕಾರಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತಿರುವುದು ಮಾನವೀಯ ದೃಷ್ಟಿಯಿಂದ ಶ್ಲಾಘನೀಯ. ಆದರೆ ಇದೇ ವೇಳೆ ಅರಣ್ಯ ಸಂರಕ್ಷಣೆಯ ಮೇಲೂ ಸಮಾನ ಗಮನ ಹರಿಸಬೇಕು. ಅಭಿವೃದ್ಧಿ ಮತ್ತು ಸಂರಕ್ಷಣೆಯ ನಡುವಿನ ಸಮತೋಲನವನ್ನು ಕಾಪಾಡುವುದು ಅತ್ಯಂತ ಮುಖ್ಯ. ಅರಣ್ಯವನ್ನು ಉಳಿಸುವುದು ಕೇವಲ ಪರಿಸರದ ವಿಷಯವಲ್ಲ; ಇದು ನಮ್ಮ ಭವಿಷ್ಯದ ಪ್ರಶ್ನೆಯಾಗಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಮೊದಲನೆಯದಾಗಿ, ಅರಣ್ಯದೊಳಗಿನ ಎಲ್ಲ ಕುಟುಂಬಗಳಿಗೂ ಸಮರ್ಪಕವಾಗಿ ಪುನರ್ವಸತಿ ಕಲ್ಪಿಸಬೇಕು. ಅವರಿಗೆ ಉತ್ತಮ ಜೀವನಮಟ್ಟ, ಉದ್ಯೋ ಗಾವಕಾಶಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅರಣ್ಯದ ಹೊರಗೆ ನೆಲೆಸಲು ಪ್ರೋತ್ಸಾಹಿಸಬೇಕು. ಎರಡನೆಯದಾಗಿ, ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘನೆಗೆ ಯಾವುದೇ ಸಹಾನುಭೂತಿ ತೋರಬಾರದು. ಮೂರನೆ ಯದಾಗಿ, ಅರಣ್ಯದೊಳಗೆ ಯಾವುದೇ ಮೂಲಸೌಕರ್ಯ ಯೋಜನೆಗಳನ್ನು ಜರಿಗೆ ತರುವ ಮೊದಲು ಪರಿಸರದ ಮೇಲೆ ಅದರ ಪರಿಣಾಮವನ್ನು ಕುರಿತು ಸಮಗ್ರವಾಗಿ ಅಧ್ಯಯನ ಮಾಡಬೇಕು.
ಅರಣ್ಯವು ಮಾನವನ ಸ್ವಾರ್ಥಕ್ಕಾಗಿ ಮಾತ್ರವಲ್ಲ. ಇದು ಅನೇಕ ಜೀವಿಗಳ ಮನೆ. ಪ್ರತಿಯೊಂದು ಮರ, ಪ್ರಾಣಿ ಮತ್ತು ಜೀವಿಗೂ ತನ್ನದೇ ಆದ ಪಾತ್ರವಿದೆ. ನಾವು ಅರಣ್ಯವನ್ನು ಹಾಳು ಮಾಡಿದರೆ, ಅದು ನಮ್ಮ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ. ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸುವುದು ನಮ್ಮ ಕರ್ತವ್ಯ. ಕೊನೆಯಲ್ಲಿ, ಬಿಆರ್ಟಿ ಅರಣ್ಯದ ಈ ಬೆಂಕಿ ಒಂದು ಎಚ್ಚರಿಕೆಯ ಸಂಕೇತವಾಗಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ದುರಂತಗಳನ್ನು ಎದುರಿಸಬೇಕಾಗಬಹುದು. ಅರಣ್ಯವನ್ನು ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
” ಬಿಆರ್ಟಿ ಅರಣ್ಯದ ಒಳಭಾಗದಲ್ಲಿ ಇನ್ನೂ ಸುಮಾರು ೬೦ ಮನೆಗಳು ಉಳಿದಿವೆ. ಸರ್ಕಾರವು ಈ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದೆ. ಇದಕ್ಕಾಗಿ ಅಡಿಗಣದ ವಿದ್ಯುತ್ ಲೈನ್ಗಳನ್ನು ಅರಣ್ಯದೊಳಗೆ ಹಾಯಿಸುವ ಯೋಜನೆ ರೂಪಿಸಲಾಗಿದೆ. ಮೇಲ್ನೋಟಕ್ಕೆ ಇದು ಮಾನವೀಯ ಮತ್ತು ಅಭಿವೃದ್ಧಿಯ ಭಾಗವಾಗಿದ್ದರೂ, ಇದರ ದೂರಗಾಮಿ ಪರಿಣಾಮಗಳು ಗಂಭೀರವಾಗಿವೆ.”
ಶ್ರೇಯಸ್ ದೇವನೂರು
ಪಿರಿಯಾಪಟ್ಟಣ: ಮಹಿಳೆಯರು ಇವತ್ತು ಕಟ್ಟುಪಾಡುಗಳನ್ನು ಒಡೆದು ಮುಂದೆ ಸಾಗುತ್ತಿದ್ದಾರೆ. ಸ್ವಾಭಿಮಾನದ ಜೀವನ ಕಂಡುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…
ಮೈಸೂರು: ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿ ದೀಪ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.…
ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ…
ಮೈಸೂರು : ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಹೆಚ್.ಸಿ ಮಹದೇವಪ್ಪ ಅವರು ಇಂದು(ಮಾರ್ಚ್.28) 120 ಕೋಟಿ ರೂ…
ಮೈಸೂರು : ನಗರದ ಹೊರ ವರ್ತುಲ ರಸ್ತೆಯಲ್ಲಿ ಹಗಲು ವೇಳೆ ಸಾಕಷ್ಟು ವಾಹನಗಳು ಹಾಗೂ ಸಾರ್ವಜನಿಕರು ಓಡಾಡಲು ಸ್ವಚ್ಛತೆ ಕೊರತೆ…
ಬೆಂಗಳೂರು: ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್ಗಳನ್ನು ವಿತರಿಸಬಾರದೆಂದು ಬಿಜೆಪಿ ಶಾಸಕ ಸುರೇಶ್ ಕುಮಾರ್…