ಕೆ. ಬಿ. ರಮೇಶನಾಯಕ
ಮೈಸೂರು: ಬೆಂಗಳೂರು ನಂತರ ಅತಿ ವೇಗವಾಗಿ ಬೆಳೆಯುತ್ತಿರುವ ಮೈಸೂರಿನ ಹೊರವಲಯದಲ್ಲಿ ರಚನೆಯಾಗಿರುವ ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವುದಕ್ಕೆ ತೀರ್ಮಾನವಾಗಿದ್ದು, ಮೊದಲ ಹಂತದಲ್ಲಿ ಹಸ್ತಾಂತರಕ್ಕೆ ಸಜ್ಜಾಗಿರುವ ೨೦೦ ಬಡಾವಣೆಗಳಲ್ಲಿ ರಚನೆಯಾಗಿರುವ ೧೫,೦೮೫ ನಿವೇಶನಗಳು ಖಾತೆಗಾಗಿ ಕಾದಿವೆ.
ರೈತರಿಂದ ಭೂಮಿ ಖರೀದಿಸಿ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಬಡಾವಣೆಗಳನ್ನು ರಚನೆ ಮಾಡಿರುವ ಮಾಲೀಕರು ನಿವೇಶನ ಮಾರಾಟಕ್ಕೆ ಸಜ್ಜಾಗಿದ್ದರೂ ಖಾತೆ ಮಾಡದ ಕಾರಣ ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು. ಇದೀಗ ಮುಡಾ ಕೈಗೊಂಡ ನಿರ್ಧಾರದಿಂದ ಸ್ಥಳೀಯ ಸಂಸ್ಥೆಗಳೇ ಖಾತೆ ಮಾಡಿಕೊಡಬೇಕಿರುವುದರಿಂದ ನವೆಂಬರ್ ೮ರ ನಂತರ ಪರಸ್ಪರ ಒಡಂಬಡಿಕೆ ಪ್ರಕ್ರಿಯೆಗಳು ಮುಗಿದು ನಿರಾಕ್ಷೇಪಣಾ ಪತ್ರ ನೀಡಿದ ನಂತರ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ಮೈಸೂರು ನಗರದ ಹೊರವಲಯದ ರಮ್ಮನಹಳ್ಳಿ, ಕಡಕೊಳ, ಬೋಗಾದಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ, ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ೯೦೦ ಖಾಸಗಿ ಬಡಾವಣೆಗಳಿದ್ದು, ಅದರಲ್ಲಿ ಮೊದಲ ಹಂತದಲ್ಲಿ ೨೦೦ ಬಡಾವಣೆಗಳನ್ನು ಹಸ್ತಾಂತರಿಸಲು ತೀರ್ಮಾನವಾಗಿದೆ. ಸಣ್ಣಪುಟ್ಟ ಮೂಲಸೌಕರ್ಯ ಒದಗಿಸದೆ ಇರುವುದನ್ನು ಹೊರತುಪಡಿಸಿ ರಸ್ತೆ, ಬೀದಿದೀಪ, ಕುಡಿಯುವ ನೀರು, ಒಳಚರಂಡಿ ಕಲ್ಪಿಸಿರುವಂತಹ ಬಡಾವಣೆಗಳನ್ನು ಆಯ್ಕೆ ಮಾಡಲಾಗಿದ್ದು, ನ. ೮ಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗುತ್ತದೆ. ಈಗಾಗಲೇ ಮೈಸೂರು ನಗರಪಾಲಿಕೆ, ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆ, ೧೯ ಗ್ರಾಪಂಗಳ ವ್ಯಾಪ್ತಿಗೆ ಯಾವ್ಯಾವ ಖಾಸಗಿ ಬಡಾವಣೆಗಳು ಸೇರಲಿದೆ ಎನ್ನುವುದನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ.
೧೫ ಸಾವಿರ ನಿವೇಶನ: ೨೦೦ ಖಾಸಗಿ ಬಡಾವಣೆಗಳಲ್ಲಿ ಅಂದಾಜು ೧೫,೦೮೫ ನಿವೇಶನಗಳನ್ನು ರಚನೆ ಮಾಡಲಾಗಿದೆ. ಮುಡಾದಿಂದ ಅನುಮೋದನೆ ಪಡೆದ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರಿಗೆ ಖಾತೆ ಮಾಡಲಾಗುತ್ತಿದ್ದರೂ ಸಂಪೂರ್ಣ ನಿವೇಶನ ಬಿಡುಗಡೆಯಾದ ಮೇಲಷ್ಟೇ ಖಾತೆಯಾಗುತ್ತಿತ್ತು. ಆದರಲ್ಲೂ ಜುಲೈ ೧ರ ನಂತರ ಖಾತೆಯನ್ನೇ ಮಾಡಿರಲಿಲ್ಲ. ಈಗ ಮುಡಾದಿಂದ ಖಾತೆ ಮಾಡುವುದಕ್ಕೆ ಬ್ರೇಕ್ ಹಾಕಿ ಸ್ಥಳೀಯ ಸಂಸ್ಥೆಗಳಿಗೆ ವಹಿಸಲು ಹಸ್ತಾಂತರ ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ.
ನ. ೮ರಂದು ಮುಡಾ ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ಪರಸ್ಪರ ಒಪ್ಪಂದ, ನಿರಾಪೇಕ್ಷಣ ಪತ್ರ ಸಲ್ಲಿಸುವುದು. ಖಾಸಗಿ ಬಡಾವಣೆಗಳಿಗೆ ಮೂಲ ಸೌಕರ್ಯ ಗಳನ್ನು ಒದಗಿಸಲು ಬೇಕಿರುವ ಅನುದಾನದ ಕೊರತೆ ನೀಗಿಸಲು ಕನಿಷ್ಠ ಹತ್ತು ವರ್ಷಗಳ ಕಾಲದ ಅಭಿವೃದ್ಧಿ ಶುಲ್ಕವನ್ನೇ ಮುಡಾದಿಂದ ಪಾವತಿಸಿಕೊಳ್ಳುವುದಕ್ಕೂ ಜಂಟಿ ಸಮೀಕ್ಷೆ ನಡೆಸಿ ಕಾಮಗಾರಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ನಗರಾಭಿವೃದ್ಧಿ ಸಂಸ್ಥೆಯಲ್ಲಿ ಎರಡು ದಿನಗಳ ಕಾಲದ ತರಬೇತಿಯಲ್ಲಿ ಅಧಿಕಾರಿಗಳು ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಮರುದಿನದಿಂದಲೇ ಜಂಟಿ ಸಮೀಕ್ಷೆ ಮಾಡಿ ವರದಿಯನ್ನು ತಯಾರಿಸಲು ಜಿಪಂ, ಮುಡಾ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಂತರ, ಸ್ಥಳೀಯ ಸಂಸ್ಥೆಗಳಲ್ಲಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಖಾತೆಗೆ ಬರುವ ಅರ್ಜಿಗಳನ್ನು ಸ್ವೀಕರಿಸುವ ಕೆಲಸ ಮಾಡಲಾಗುತ್ತದೆ. ಸಭೆಯ ನಡಾವಳಿ ಸ್ಥಳೀಯ ಸಂಸ್ಥೆಗಳಿಗೆ ಕೈ ಸೇರುವುದಕ್ಕೆ ಎರಡು ದಿನಗಳಾಗಲಿವೆ. ನಂತರ, ಆಯಾಯ ಪಟ್ಟಣ ಪಂಚಾಯಿತಿಯ ಆಡಳಿತಾಽಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯನ್ನು ನಡೆಸಿದ ನಂತರ ಎನ್ಒಸಿ ಸಿದ್ಧ ಮಾಡಿಕೊಂಡು ಮುಡಾಗೆ ಸಲ್ಲಿಸುವ ಪ್ರಕ್ರಿಯೆ ಆಗಬೇಕಿದೆ. ಈ ಕೆಲಸಗಳು ಮುಗಿಯಲು ಕನಿಷ್ಠ ೧೫ರಿಂದ ೨೦ ದಿನಗಳಾಗಬಹುದೆಂದು ಮುಖ್ಯಾಧಿಕಾರಿಯೊಬ್ಬರು ಹೇಳಿದರು.
ಜನರ ಪಡಿಪಾಟಲು ನಿವಾರಣೆ
ಮೈಸೂರು: ಮೂಲಸೌಕರ್ಯಕ್ಕಾಗಿ ಜನಸಂಪರ್ಕ ಸಭೆಗಳಲ್ಲಿ ದೂರುಗಳನ್ನು ಸಲ್ಲಿಸುವ ನಿವಾಸಿಗಳ ಹೋರಾಟಕ್ಕೂ ಕೊನೆಯ ದಿನಗಳು ಹತ್ತಿರವಾಗಿವೆ. ವಿಶೇಷವಾಗಿ ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಖಾಸಗಿ ಬಡಾವಣೆಗಳನ್ನು ರಚನೆ ಮಾಡಲಾಗಿದ್ದು, ಇಲ್ಲಿಗೆ ಕಾವೇರಿ, ಕಬಿನಿ ನೀರು ಪೂರೈಕೆಯಾಗದೆ ಮನೆಕಟ್ಟಿರುವ ನಿವಾಸಿಗಳು ಬೋರ್ ವೆಲ್ ನೀರು ಆಶ್ರಯಿಸಿಕೊಂಡಿದ್ದಾರೆ. ಖಾತೆಯಾಗದೆ ತಮ್ಮ ಮಕ್ಕಳ ಮದುವೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ಸಾಲ ಮಂಜೂರಾಗುತ್ತಿರಲಿಲ್ಲ. ಇದೀಗ ಮುಡಾದ ನಿರ್ಧಾರ ಬಹುತೇಕ ಜನರಲ್ಲಿ ಮಂದಹಾಸ ಮೂಡಿಸಿದೆ. ಅನೇಕ ವರ್ಷಗಳಿಂದ ಕಾದಿದ್ದ ನಾವು ಒಂದು ತಿಂಗಳು ಕಾದರೆ ಸಾಕು ಎನ್ನುವ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು : ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಬಳ್ಳಾರಿ : ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗುರುವಾರ ಸಂಜೆ ನಡೆದ ಘರ್ಷಣೆ…
ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…
ಭ್ರಷ್ಟಾಚಾರವೇ ಇಲ್ಲದ ವ್ಯವಸ್ಥೆ ನಿರ್ಮಾಣ ಮಾಡುವುದು ಇನ್ನು ತುಂಬಾ ಕಷ್ಟಕರವಾದ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್.ಸಂತೋಷ್…
ಇಂದು ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಆನ್ಲೈನ್ ತರಗತಿಗಳು, ಯೂಟ್ಯೂಬ್ ಶಿಕ್ಷಣ…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ೨೦೨೬ರ ಆರಂಭದ ವೇಳೆ ಹಲವು ಬೆಳವಣಿಗೆಗಳು. ೨೦೨೫ರ ಕೊನೆಯ ಶುಕ್ರವಾರ ತೆರೆ ಕಂಡ ೨ ಚಿತ್ರಗಳ…